ದಾವಣಗೆರೆ : ಒಂದು ಕುಟುಂಬಕ್ಕೆ ಸಂಸ್ಕಾರಕ್ಕೆ ಮಹಿಳೆಯರೇ ದಾರಿದೀಪ, ಸ್ತ್ರೀಯರುಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಸೀಮಿತವಾಗದೇ ತಮ್ಮ ಜೀವನದಲ್ಲಿ ನಿರಂತರವಾಗಿ ಸಾಂಸ್ಕೃತಿಕ, ಆಧ್ಯಾತ್ಮ ಸಂಸ್ಕೃತಿಗೆ ತೊಡಗಿಸಿಕೊಳ್ಳಬೇಕು ದಾವಣಗೆರೆಯ ಕಲಾಕುಂಚದಿಂದ ನಿರಂತರವಾಗಿ ಕಠಿಣ ಪರಿಶ್ರಮದಿಂದ ಕಳೆದ 36 ವರ್ಷಗಳಿಂದ ಯಾವುದೇ ಸಂಘ ಸಂಸ್ಥೆಗಳು ಮಾಡದ ಕಾಯಕ ಈ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ ಎಂದು ವೈದ್ಯರು, ಸಾಹಿತಿಗಳಾದ ಡಾ|| ಶಶಿಕಲಾ ಕೃಷ್ಣಮೂರ್ತಿ ತಮ್ಮ ಮನದಾಳದ ಮಾತು ವ್ಯಕ್ತಪಡಿಸಿದರು.
ಕಲಾಕುಂಚ ಮಹಿಳಾ ವಿಭಾಗದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ “ಆಕರ್ಷಕ ಗೃಹಿಣಿ” ಉಚಿತ ಸ್ಪರ್ಧೆಯ ಸಮಾರಂಭದ ಉದ್ಘಾಟನೆಯನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ದಾವಣಗೆರೆಯ ಕಲಾಕುಂಚ ಕಛೇರಿ ಸಭಾಂಗಣದಲ್ಲಿ ನಡೆದ ಈ ಸಮಾರಂಭದ ಅಧ್ಯಕ್ಷತೆಯನ್ನು ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿಯವರು ವಹಿಸಿ ಮಾತನಾಡಿ, ಅಡಿಗೆ ಮನೆಗೆ ಸೀಮಿತವಾದ ಮಹಿಳೆಯರಿಗೆ ಅವರ ಪ್ರತಿಭೆಗಳನ್ನು ಅನಾವರಣಗೊಳಿಸುವ ಸಂಸ್ಥೆ ದಾವಣಗೆರೆಯ ಕಲಾಕುಂಚ ಸಾರ್ವಜನಿಕವಾಗಿ ಮಕ್ಕಳಿಗೆ ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣದೊಂದಿಗೆ ಮುಕ್ತವಾದ ವೇದಿಕೆಗಳನ್ನು ಕಲ್ಪಿಸುವ ಸಾಧನೆ ಈ ಸಂಸ್ಥೆ ಎಂದರು.
ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಕುಸುಮಾ ಲೋಕೇಶ್, ಕಲಾಕುಂಚ ಎಲೆಬೇತೂರು ಶಾಖೆಯ ಅಧ್ಯಕ್ಷರಾದ ಡಾ|| ನಿರ್ಮಲಾ ವಿಶ್ವನಾಥ್ ಕುಲಕರ್ಣಿ, ಕಲಾಕುಂಚ ಸಿದ್ದವೀರಪ್ಪ ಬಡಾವಣೆಯ ಶಾಖೆಯ ಅಧ್ಯಕ್ಷರಾದ ಲಲಿತಾ ಕಲ್ಲೇಶ್, ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್ಶೆಣೈ ಇವರೆಲ್ಲರೂ ಮಾತನಾಡಿ, ಸಂಘಟನೆ ಅಷ್ಟು ಸುಲಭವಲ್ಲ, ಸಮಯ ಪ್ರಜ್ಞೆಯೊಂದಿಗೆ ಕರ್ತವ್ಯ ನಿಷ್ಠೆಯೊಂದಿಗೆ ಪ್ರಾಮಾಣಿಕವಾಗಿ ಖಿನ್ನತೆ ಮನಸ್ಸುಗಳನ್ನು ಬಿಟ್ಟು ವಿಶಾಲವಾದ ಸೇವಾ ಮನೋಭಾವನೆಯೊಂದಿಗೆ ನಡೆದರೆ ಸಂಸ್ಥೆ ಅಭಿವೃದ್ಧಿಯಾಗುತ್ತದೆ. ನಾಡಿನಾದ್ಯಂತ ವೈಭವೀಕರಿಸಿದ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರು ಯಾವುದೇ ಸ್ವಾರ್ಥ ಇಲ್ಲದೆ ಎಲ್ಲರನ್ನು ಸಾಂಸ್ಕೃತಿಕವಾಗಿ ಬೆಳೆಸುವ ಶಕ್ತಿ ಅವರಲ್ಲಿ ಇದೆ ಎಂದರು.
ಚೈತ್ರ ನಾಗರಾಜ್ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ ಕವಿತಾ ವೀರೇಶ್ ಸ್ವಾಗತಿಸಿದರು, ಶಿಲ್ಪಾ ಉಮೇಶ್ ಅಚ್ಚುಕಟ್ಟಾಗಿ ನಿರೂಪಿಸಿದರು. “ಆಕರ್ಷಕ ಗೃಹಿಣಿ” ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಅಭಿನಂದನಾ ಪತ್ರ ವಿತರಿಸಿದರು. ಕೊನೆಯಲ್ಲಿ ಶ್ರೀಮತಿ ಲೀಲಾ ಸುಭಾಷ್ ವಂದಿಸಿದರು.

