ಧರ್ಮ ಪ್ರಸಾರ ಹಾಗೂ ಜಾಗೃತಿಯಲ್ಲಿ ಯಕ್ಷಗಾನ ಅತ್ಯಮೂಲ್ಯ ಕೊಡುಗೆ ನೀಡಿದೆ : ಪ್ರಭಾಕರ ಭಟ್ ಕಲ್ಲಡ್ಕ
ಬಂಟ್ವಾಳ: ಭಾರತದಲ್ಲಿ ಹಿಂದೂವಾಗಿ ಹುಟ್ಟುವುದು ಪುಣ್ಯವಾಗಿದ್ದು, ಧರ್ಮ ಪ್ರಸಾರ ಹಾಗೂ ಜಾಗೃತಿಯಲ್ಲಿ ಯಕ್ಷಗಾನ ಅತ್ಯಮೂಲ್ಯ ಕೊಡುಗೆ ನೀಡಿದೆ. ಯಕ್ಷಗಾನಕ್ಕೆ ಪುಳಿಂಚ ರಾಮಯ್ಯ ಶೆಟ್ಟರ ಸೇವೆ ಸ್ಮರಣೀಯವಾಗಿದ್ದು, ಆ ಪರಂಪರೆಯನ್ನು ಶ್ರೀಧರ ಶೆಟ್ಟಿ ದಂಪತಿ, ಮೊಮ್ಮಕ್ಕಳು ಮುಂದುವರಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಇದರ ಸಂಚಾಲಕ ಕಲ್ಲಡ್ಕ ಪ್ರಭಾಕರ ಭಟ್ ಅವರು ಹೇಳಿದರು.
ಅವರು ಶನಿವಾರ ಬಂಟ್ವಾಳ ತಾಲೂಕಿನ ಬಾಲ್ತಿಲ ಗ್ರಾಮದ ಚೆಂಡೆಯಲ್ಲಿ ಚೆಂಡೆ ಶ್ರೀ ಕಲ್ಲುರ್ಟಿ ದೈವಸ್ಥಾನ ಹಾಗೂ ಪುಳಿಂಚ ಸೇವಾ ಪ್ರತಿಷ್ಠಾನ ಇದರ ಆಶ್ರಯದಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದ ಬೆಜ್ಜದಗುತ್ತು ಪುಳಿಂಚ ರಾಮಯ್ಯ ಶೆಟ್ಟಿ ಅವರ ಸ್ಮರಣಾರ್ಥ ಬೊಳ್ನಾಡುಗುತ್ತು ದಿ.ಸರೋಜಿನಿ ರಾಮಯ್ಯ ಶೆಟ್ಟಿ ಪುಳಿಂಚ ವೇದಿಕೆಯಲ್ಲಿ ನಡೆದ ಪಂಚಮ ತ್ರೈವಾರ್ಷಿಕ ‘ಪುಳಿಂಚ ಪ್ರಶಸ್ತಿ’ ಯನ್ನು ಪ್ರದಾನಿಸಿ, ಮಂಗಳೂರು ಪುಳಿಂಚ ಚಿಟ್ಸ್(ಒಪಿಸಿ) ಪ್ರೈ.ಲಿಮಿಟೆಡ್ ನ ದಶಮ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದೂ ಧರ್ಮದ ನಾಶಕ್ಕೆ ನಿರಂತರವಾಗಿ ಪ್ರಯತ್ನ ನಡೆಯುತ್ತಿದ್ದು, ಪಹಲ್ಗಾಮ್ ಘಟನೆಯೂ ಅದಕ್ಕೆ ಉತ್ತಮ ಉದಾಹರಣೆಯಾಗಿದೆ. ದೇಶಕ್ಕೆ ಒಳಗಿನ ಶತ್ರುಗಳು ಅಪಾಯಕಾರಿಯಾಗಿದ್ದು, ಈ ಕುರಿತು ಹಿಂದೂ ಸಮಾಜ ಎಚ್ಚೆತ್ತುಕೊಳ್ಳಬೇಕಿದೆ ಎಂದರು.
ವೇದಿಕೆಯಲ್ಲಿ ಆರ್.ಎಸ್.ಎಸ್ ಮುಖಂಡ ಪ್ರಕಾಶ್ ಪಿ.ಯಸ್ , ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಮಂಗಳೂರಿನ ದೈವಜ್ಞ ಶಶಿಕುಮಾರ್ ಪಂಡಿತ್, ಯಕ್ಷಾಂಗಣದ ಅಧ್ಯಕ್ಷ ಭಾಸ್ಕರ್ ರೈ ಕುಕ್ಕುವಳ್ಳಿ, ಉಪಸ್ಥಿತರಿದ್ದರು
ಹಿರಿಯ ಕಲಾವಿದರಾದ ಬೋಳಾರ ಸುಬ್ಬಯ್ಯ ಶೆಟ್ಟಿ, ಸಂಜಯಕುಮಾರ್ ಶೆಟ್ಟಿ ಗೋಣಿಬೀಡು, ಮಿಜಾರು ತಿಮ್ಮಪ್ಪ ಅವರಿಗೆ ಪುಳಿಂಚ ಪ್ರಶಸ್ತಿ ಹಾಗೂ ದಿ.ಜಯರಾಮ ಆಚಾರ್ಯ ಬಂಟ್ವಾಳ ಅವರಿಗೆ ಮರಣೋತ್ತರ ಪುಳಿಂಚ ಪ್ರಶಸ್ತಿ ನೀಡಲಾಯಿತು.
ವಾಗ್ಮಿ ಭಾಸ್ಕರ ರೈ ಕುಕ್ಕುವಳ್ಳಿ ಅಭಿನಂದನಾ ಭಾಷಣ ಹಾಗೂ ಸಂಜಯಕುಮಾರ್ ಅವರು ಸಂಸ್ಕರಣಾ ಭಾಷಣ ಮಾಡಿದರು.
ಸಮಾರಂಭದಲ್ಲಿ ಚೆಂಡೆ ಶ್ರೀ ಕಲ್ಲುರ್ಟಿ ತಾಯಿಯ ಕುರಿತು ಕೃತಿ ಹಾಗೂ ಧ್ವನಿಸುರುಳಿ ಬಿಡುಗಡೆ ಮಾಡಲಾಯಿತು
ನ್ಯಾಯವಾದಿ ಹಾಗೂ ಪುಳಿಂಚ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಶ್ರೀಧರ ಶೆಟ್ಟಿ ಪುಳಿಂಚ ಸ್ವಾಗತಿಸಿ ಪ್ರಸ್ತಾವನೆಗೈದರು. ಪುಳಿಂಚ ಸೇವಾ ಪ್ರತಿಷ್ಠಾನದ ಕೋಶಾಧಿಕಾರಿ, ಪುಳಿಂಚ ಚಿಟ್ಸ್ ಮ್ಯಾನೆಜಿಂಗ್ ಡೈರೆಕ್ಟರ್ ಪ್ರತಿಭಾ ಶೆಟ್ಟಿ, ವಂದಿಸಿದರು. .
ಅರ್ಥಧಾರಿ ಅಶೋಕ್ ಭಟ್ ಉಜಿರೆ ಕಾರ್ಯಕ್ರಮ ನಿರ್ವಹಿಸಿದರು. ಯಕ್ಷಗಾನ ಸಂಘಟಕ ಜನಾರ್ದನ ಅಮ್ಮುಂಜೆ ಸಹಕರಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯಕ್ಷಗಾನ ಹಾಸ್ಯ ಪ್ರಸಂಗ, ಬಲೆ ತೆಲಿಪುಲೆ ಹಾಸ್ಯ ವೈಭವ, ಪುದರ್ ದೀತಿಜಿ ತುಳು ನಾಟಕದ ಬಳಿಕ ಕೋಲ ಸೇವೆ ನಡೆಯಿತು.