48ನೇ ವರ್ಷದ ಗಣೇಶೋತ್ಸವ ಅಂಗವಾಗಿ ‘ಕೃಷ್ಣಾಪುರ ರಂಗಪರ್ಬ–2026’ ಆಯೋಜನೆ
ಮಂಗಳೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ (ರಿ.) ಕೃಷ್ಣಾಪುರ – ಕಾಟಿಪಳ್ಳ ಮಂಗಳೂರು ಸಂಸ್ಥೆಯು ಧಾರ್ಮಿಕ – ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಪರಿಸರ ಜಾಗೃತಿ, ಶೈಕ್ಷಣಿಕ ಪುರಸ್ಕಾರ, ಆರೋಗ್ಯ ಸಹಾಯ ಇತ್ಯಾದಿಗಳನ್ನು ನಡೆಸುತ್ತಾ ಬರುತ್ತಿದ್ದು ಗತವರ್ಷಗಳಲ್ಲಿ ನಡೆದ ಸಾಮೂಹಿಕ ವಿವಾಹ, ಸೀತಾರಾಮ ಕಲ್ಯಾಣೋತ್ಸವ, ಅಂತರ್ ಜಿಲ್ಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಯಕ್ಷಗಾನ ಸ್ಪರ್ಧೆ, ಅಂತರ್ ಜಿಲ್ಲಾ ಜಾನಪದ ನೃತ್ಯ ಸ್ಪರ್ಧೆ, ಅಂತರ್ ಜಿಲ್ಲಾ ಕುಣಿತ ಭಜನಾ ಸ್ಪರ್ಧೆ ಇತ್ಯಾದಿಗಳು ಅವಿಸ್ಮರಣೀಯವೆನಿಸಿದೆ.
ನಮ್ಮ ಸಮಿತಿಯು 48ನೇ ವರ್ಷದ ಗಣೇಶೋತ್ಸವವನ್ನು 2026 ಸೆಪ್ಟಂಬರ್ 4ರಿಂದ ಮೂರು ದಿನಗಳ ಪರ್ಯಂತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಸಲಿದ್ದು, ವಿಶೇಷವಾಗಿ ಅಷ್ಟಾಚತ್ವಾರಿಂಶತ್ ನಾರಿಕೇಳ (48 ತೆಂಗಿನಕಾಯಿ) ಗಣಯಾಗ ಹಾಗೂ ಮೂಡಪ್ಪ ಸೇವೆ ನೆರವೇರಲಿದೆ.
“ಕೃಷ್ಣಾಪುರ ರಂಗಪರ್ಬ 2026″ ಅಂತರ್ ರಾಜ್ಯ ತುಳು ಸಾಮಾಜಿಕ ಹಾಸ್ಯ ನಾಟಕ ಸ್ಪರ್ಧೆ
ನಮ್ಮ ಸಮಿತಿಯು 2026 ಸೆಪ್ಟೆಂಬರ್ 06 ರಿಂದ 12ರ ವರೆಗೆ ತುಳು ಭಾಷೆ ಮತ್ತು ಕಲಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ದಕ್ಷಿಣಕನ್ನಡ, ಉಡುಪಿ, ಕಾಸರಗೋಡು ಮತ್ತು ಮುಂಬೈ ಪ್ರದೇಶದ ಆಯ್ದ ತಂಡಗಳಿಂದ ಅಂತರ್ ರಾಜ್ಯ ತುಳು ಸಾಮಾಜಿಕ ಹಾಸ್ಯ ನಾಟಕ ಸ್ಪರ್ಧೆಯನ್ನು ಕೃಷ್ಣಾಪುರ ಯುವಕ ಮಂಡಲ ಮೈದಾನದ ಗಣೇಶ ಮಂಟಪದಲ್ಲಿ ನಡೆಸಲಿದೆ. “ಕೃಷ್ಣಾಪುರ ರಂಗಪರ್ಬ” ಎಂದು ನಾಮಾಂಕಿತಗೊಂಡ ಈ ಕಾರ್ಯಕ್ರಮದ ಲಾಂಛನವನ್ನು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಈಗಾಗಲೇ ಅನಾವರಣಗೊಳಿಸಿ ಚಾಲನೆ ನೀಡಿರುತ್ತಾರೆ.
ಸ್ಪರ್ಧೆಗೆ ಏಳು ಹವ್ಯಾಸಿ ತಂಡಗಳನ್ನು ಆರಿಸಲಾಗುತ್ತದೆ. ಪ್ರತಿಯೊಂದು ತಂಡವು ನಿಗದಿಪಡಿಸಿದ ದಿನಾಂಕದಂದು ಕನಿಷ್ಠ 120 ನಿಮಿಷ ಗರಿಷ್ಠ 150 ನಿಮಿಷದ ಪ್ರದರ್ಶನವನ್ನು ನೀಡಬೇಕು. ಮುದ್ರಿತ ಸಂಭಾಷಣೆಗಳಿಗೆ ಅವಕಾಶ ಇರುವುದಿಲ್ಲ. ತಂಡದ ಮುನ್ನೆಲೆಯಲ್ಲಿ ಕನಿಷ್ಠ 10 ಕಲಾವಿದರಿರಬೇಕು. ಬೆಳಕಿನ ವಿನ್ಯಾಸಕ ಮತ್ತು ಪ್ರಸಾದನ ಹೊರತುಪಡಿಸಿ ಉಳಿದಂತೆ ಒಬ್ಬರಿಗೆ ಒಂದೇ ತಂಡದಲ್ಲಿ ಮಾತ್ರ ಭಾಗವಹಿಸಲು ಅವಕಾಶ. ತಂಡವು ನಾಟಕ ಕರ್ತೃವಿನ ಅನುಮತಿಯನ್ನು ಪಡೆದಿರಬೇಕು. ವೇದಿಕೆ, ಬೆಳಕು ಮತ್ತು ಧ್ವನಿಯನ್ನು ಒದಗಿಸಲಾಗುವುದು. ಸ್ಪರ್ಧಿಸುವ ತಂಡಗಳು ರೂ. 5000/- ಪ್ರವೇಶ ಶುಲ್ಕವನ್ನು ಪಾವತಿಸಬೇಕಾಗಿದ್ದು ಪ್ರದರ್ಶನದ ಬಳಿಕ ಹಿಂತಿರುಗಿಸಲಾಗುತ್ತದೆ.
ಪುರಸ್ಕಾರಗಳು
ವಿಜೇತ ತಂಡಗಳಿಗೆ ಪ್ರಥಮ ರೂ 50000/- ದ್ವಿತೀಯ ರೂ 35000/- ಮತ್ತು ತೃತೀಯ 25000/- ನಗದು ಬಹುಮಾನಗಳನ್ನು ಶಾಶ್ವತ ಫಲಕ ಮತ್ತು ಪ್ರಮಾಣ ಪತ್ರದೊಂದಿಗೆ ನೀಡಿ ಗೌರವಿಸಲಾಗುವುದು. ವೈಯಕ್ತಿಕ ಕ್ಷಮತೆಗಾಗಿ ಬಹುಮಾನಗಳನ್ನು ನೀಡಲಾಗುವುದು. ವಿಜೇತ ತಂಡಗಳನ್ನು ಹೊರತುಪಡಿಸಿ ಪ್ರತಿ ತಂಡಕ್ಕೆ ರೂ. 8000/- ಗೌರವ ಸಂಭಾವನೆಯನ್ನು ನೀಡಲಾಗುವುದು.
ಪ್ರವೇಶ ಪತ್ರ ಸಲ್ಲಿಸಲು 20.07.2026 ಕೊನೆಯ ದಿನಾಂಕವಾಗಿದೆ.
ಆಸಕ್ತರು 9731922505 ಮತ್ತು 9844728667 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.
ತಿಲಕ್ ರಾಜ್ ಕೃಷ್ಣಾಪುರ, ಅಧ್ಯಕ್ಷರು, ಪಿ. ಸುಧಾಕರ ಕಾಮತ್ ಉಪಾಧ್ಯಕ್ಷರು,ಲಕ್ಷ್ಮೀ ಶೇಖರ್ ದೇವಾಡಿಗ ಉಪಾಧ್ಯಕ್ಷರು, ಅಶೋಕ್ ಕುಮಾರ್ ಉಪಾಧ್ಯಕ್ಷರು
ಪ್ರಶಾಂತ್ ಕುಮಾರ್ ಉಪಾಧ್ಯಕ್ಷರು, ಸತೀಶ್ ಸಾಲಿಯಾನ್ ಉಪಾಧ್ಯಕ್ಷರು, ಅಶೋಕ್ ಕೃಷ್ಣಾಪುರ ಪ್ರಧಾನ ಕಾರ್ಯದರ್ಶಿ, ವಿಠ್ಠಲ ಶೆಟ್ಟಿ ಕೋಶಾಧಿಕಾರಿ
ರಾಕೇಶ್ ಕೋಟ್ಯಾನ್ ಸಾಂಸ್ಕೃತಿಕ ಕಾರ್ಯದರ್ಶಿ ಉಪಸ್ಥಿತರಿದ್ದರು.

