ಕಲ್ಲಡ್ಕ : ಶಾಲಾಭಿವೃದ್ಧಿ ಸಮಿತಿಯ ಇಚ್ಛಾಶಕ್ತಿ ಶಾಲೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕಲ್ಲಡ್ಕ ಮಾದರಿ ಶಾಲಾ ಪದವೀಧರ ಮುಖ್ಯ ಶಿಕ್ಷಕ ಅಬೂಬಕ್ಕರ್ ಅಶ್ರಫ್ ಹೇಳಿದರು.
ಅವರು ಮಾರ್ಚ್ 26 ಗುರುವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಭದಲ್ಲಿ ಕಲ್ಲಡ್ಕ ಕ್ಲಸ್ಟರ್ನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರಿಗೆ ನಡೆದ ಒಂದು ದಿನದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಮಜಿ ಹಿರಿಯ ಪ್ರಾಥಮಿಕ ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ಕೊರಗಪ್ಪ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜನೆ ಮಾಡಿದ ಶಾಲಾಭಿವೃದ್ಧಿ ಸಮಿತಿಗೆ ಅಭಿನಂದನ ಪತ್ರವನ್ನು ವಿತರಿಸಲಾಯಿತು. ಹಾಗೂ ಸರಕಾರಿ ಶಾಲೆಗಳ ಶ್ರೇಯೋಭಿವೃದ್ಧಿಗೆ ಸದಾ ಸಹಕರಿಸುತ್ತಿರುವ ಚಿನ್ನಾ ಕಲ್ಲಡ್ಕ ರವರನ್ನು ಗೌರವಿಸಲಾಯಿತು.
ನಂತರ ನಡೆದ ತರಬೇತಿ ಕಾರ್ಯದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶಿಕ್ಷಕರ ರತ್ನ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸಂಗೀತ ಶರ್ಮ,ಸಿ ಆರ್ ಪಿ ಜ್ಯೋತಿ,ಶಿಕ್ಷಣ ಹಕ್ಕು ಕಾಯಿದೆ ಅನ್ವಯ ಎಸ್ ಡಿ ಎಂ ಸಿ ಯ ರಚನೆ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಕತ೯ವ್ಯಗಳು, ಶಾಲಾ ಅಭಿವೃದ್ಧಿ ಮತ್ತು ಮೇಲುಉಸ್ತುವಾರಿ ಸಮಿತಿ ನಿರ್ವಹಿಸಬೇಕಾದ ಕರ್ತವ್ಯಗಳು, ಗುಣಾತ್ಮಕ ಶಿಕ್ಷಣ, ಸಮಿತಿಯ ಸಭೆಗಳು ಮತ್ತು ವಿಧಿ ವಿಧಾನಗಳು, ಶಾಲಾ ಅಭಿವೃದ್ಧಿ ಯೋಜನೆ ತಯಾರಿ, ಅನುಷ್ಠಾನ, ಅನು ಪಾಲನೆ, ಮೌಲ್ಯಮಾಪನ, ಮುಂತಾದವುಗಳ ಬಗ್ಗೆ ಚರ್ತಾತ್ಮಕವಾಗಿ ವಿಷಯವನ್ನು ತಿಳಿಸಿದರು.

ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಶಮನ್ .ಜೆ. ಶೆಟ್ಟಿ ರವರು 14 ವರ್ಷ ತುಂಬಿದ ಎಲ್ಲಾ ಹೆಣ್ಣು ಮಕ್ಕಳಿಗೆ ಸರ್ಕಾರದಿಂದ ಉಚಿತವಾಗಿ ನೀಡಲಾಗುವ ಹೆಚ್.ಪಿ.ವಿ ಲಸಿಕೆಯ ಬಗ್ಗೆ ಮಾಹಿತಿ ನೀಡಿದರು.ಆರೋಗ್ಯ ಸುರಕ್ಷಣಾಧಿಕಾರಿ ಜ್ಯೋತಿ ಮತ್ತು ಆಶಾ ಕಾರ್ಯಕರ್ತೆ ಕೋಮಲಾಕ್ಷಿಯವರು ಸಹಕರಿಸಿದರು.
ವೇದಿಕೆಯಲ್ಲಿ ಮಜಿ ಸರ್ಕಾರಿ ಪ್ರೌಢಶಾಲೆ ಗೊಳ್ತಮಜಲು ಇಲ್ಲಿನ ಸಹ ಶಿಕ್ಷಕಿ ಸುನೀತ ಉಪಸ್ಥಿತರಿದ್ದರು. ಶಾಲಾ ಮಕ್ಕಳು ಪ್ರಾರ್ಥಿಸಿ, ಕಲ್ಲಡ್ಕ ಕ್ಲಸ್ಟರ್ ಸಿಆರ್ಪಿ ಜ್ಯೋತಿ ಸ್ವಾಗತಿಸಿ, ಮಜಿ ಶಾಲಾ ಮುಖ್ಯ ಶಿಕ್ಷಕಿ ಬೆನೆಡಿಕ್ಟಾ ಆಗ್ನೇಸ್ ಮೆಂಡೋನ್ಸಾ ವಂದಿಸಿ, ಸಹ ಶಿಕ್ಷಕ ತೌಸೀಫ್ ಅಹಮದ್ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಇಂದುಶೇಖರ್ ಸಹಕರಿಸಿದರು.

