10 ಕೋಟಿ ರೂ. ವಂಚನೆ ಆರೋಪ ; ಗಾಯಕಿ ಮಂಗ್ಲಿ ವಿರುದ್ಧ ಕೇಸ್ ದಾಖಲು.!

0
84

ಹೈದರಾಬಾದ್ : ಜನಪ್ರಿಯ ಗಾಯಕಿ ಮಂಗ್ಲಿ ಅಲಿಯಾಸ್ ಸತ್ಯವತಿ ಅವರಿಗೆ ಸಂಕಷ್ಟ ಎದುರಾಗಿದೆ. ವ್ಯವಹಾರದಲ್ಲಿ ಹೂಡಿಕೆ ಮಾಡುವ ಹೆಸರಿನಲ್ಲಿ ಸುಮಾರು 10 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂಬ ಆರೋಪದ ಮೇಲೆ ಪಂಜಾಗುಟ್ಟಾ ಪೊಲೀಸರು ಮಂಗ್ಲಿ, ಅವರ ಸಹೋದರ ಶಿವ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮೈಕ್ರೋ ಫೈನಾನ್ಸ್ ಮತ್ತು ವಿವಿಧ ವ್ಯವಹಾರಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ ಸುಮಾರು 100ಕ್ಕೂ ಹೆಚ್ಚು ಮಂದಿಯಿಂದ 10 ಕೋಟಿ ರೂಪಾಯಿಗೂ ಅಧಿಕ ಹಣ ವಸೂಲಿ ಮಾಡಿ ವಂಚಿಸಲಾಗಿದೆ ಎಂಬುದು ಪ್ರಮುಖ ಆರೋಪವಾಗಿದೆ. ಹಣ ನೀಡಿ ವರ್ಷಗಳೇ ಕಳೆದರೂ ಲಾಭ ನೀಡಿಲ್ಲ, ಕನಿಷ್ಠ ಹೂಡಿಕೆ ಮಾಡಿದ ಅಸಲು ಹಣವನ್ನೂ ಹಿಂತಿರುಗಿಸಿಲ್ಲ ಎಂದು ಸಂತ್ರಸ್ತರು ಆಕ್ರೋಶ ಹೊರಹಾಕಿದ್ದಾರೆ.

ಸಂತ್ರಸ್ತರ ಪರವಾಗಿ ಹಣ ಹಿಂತಿರುಗಿಸುವಂತೆ ಕೇಳಿದ ವಕೀಲ ಸುಬ್ಬಾರಾವ್ ಅವರಿಗೆ ಮಂಗ್ಲಿ ತಂಡವು ಬೆದರಿಕೆ ಹಾಕಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮಂಗ್ಲಿ, ಆಕೆಯ ಸಹೋದರ ಶಿವ ಮತ್ತು ಇತರರು ತನಗೆ ಫೋನ್ ಮಾಡಿ ತೀವ್ರವಾಗಿ ಎಚ್ಚರಿಕೆ ನೀಡಿದ್ದಾರೆ ಹಾಗೂ ರಸ್ತೆ ಅಪಘಾತದಲ್ಲಿ ನಿನ್ನನ್ನು ಕೊಲ್ಲುತ್ತೇವೆ ಎಂದು ಬೆದರಿಸಿದ್ದಾರೆ ಎಂದು ಸುಬ್ಬಾರಾವ್ ಪೊಲೀಸರಿಗೆ ತಿಳಿಸಿದ್ದಾರೆ. ಇವರಿಂದ ತನಗೆ ಪ್ರಾಣಾಪಾಯವಿದೆ ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ.

ವಕೀಲರ ದೂರಿನ ಮೇರೆಗೆ ಪಂಜಾಗುಟ್ಟಾ ಪೊಲೀಸರು ಮಂಗ್ಲಿ (A5), ಶಿವ ಮತ್ತು ಇತರ ಮೂವರ ವಿರುದ್ಧ ಬಿಎನ್‌ಎಸ್ (BNS) ಸೆಕ್ಷನ್ 351(2) ಮತ್ತು 352 ರ ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ನಿರ್ದೇಶಕ ವೇಣು ಉಡುಗುಲ ಅವರ ಹೆಸರೂ ಕೇಳಿಬರುತ್ತಿದ್ದು, ಪೊಲೀಸರು ಈ ವಂಚನೆಯ ಜಾಲದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಇತ್ತೀಚೆಗಷ್ಟೇ ಹೈದರಾಬಾದ್ ಸಮೀಪದ ಚೇವೆಳ್ಳಾದ ಖಾಸಗಿ ರೆಸಾರ್ಟ್‌ವೊಂದರಲ್ಲಿ ಮಂಗ್ಲಿ ತನ್ನ ಆಪ್ತರಿಗೆ ನೀಡಿದ್ದ ಜನ್ಮದಿನದ ಪಾರ್ಟಿ ಕೂಡ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಪೊಲೀಸರು ಈ ಪಾರ್ಟಿಯ ಮೇಲೆ ದಾಳಿ ನಡೆಸಿದಾಗ ವಿದೇಶಿ ಮದ್ಯ ಮತ್ತು ಗಾಂಜಾದಂತಹ ನಿಷೇಧಿತ ವಸ್ತುಗಳು ಪತ್ತೆಯಾಗಿದ್ದವು. ಪಾರ್ಟಿಯಲ್ಲಿದ್ದ ಕೆಲವರಿಗೆ ಡ್ರಗ್ಸ್ ಪರೀಕ್ಷೆ ನಡೆಸಿದಾಗ ಪಾಸಿಟಿವ್ ವರದಿ ಬಂದಿರುವುದು ಸಂಚಲನ ಮೂಡಿಸಿತ್ತು.

ಕಳೆದ ಕೆಲವು ಸಮಯದಿಂದ ಮಂಗ್ಲಿ ಹೆಸರು ಒಂದಲ್ಲ ಒಂದು ವಿವಾದದಲ್ಲಿ ಸಿಲುಕುತ್ತಿದೆ. ಒಂದು ಕಡೆ ಆರ್ಥಿಕ ವಂಚನೆಯ ಆರೋಪ, ಇನ್ನೊಂದೆಡೆ ಡ್ರಗ್ಸ್ ಪಾರ್ಟಿ ಪ್ರಕರಣಗಳು ಅವರ ವೃತ್ತಿಜೀವನದ ಮೇಲೆ ಕರಿನೆರಳು ಬೀರುವ ಸಾಧ್ಯತೆ ಇದೆ. ಗಾಯಕಿಯಾಗಿ ಉತ್ತಮ ಫಾರ್ಮ್‌ನಲ್ಲಿರುವಾಗ ಇಂತಹ ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವುದು ಅವರ ಅಭಿಮಾನಿಗಳಿಗೆ ಆಘಾತ ತಂದಿದೆ. ಪೊಲೀಸರು ಮುಂದಿನ ದಿನಗಳಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ಈಗ ಕುತೂಹಲ ಮೂಡಿಸಿದೆ.

LEAVE A REPLY

Please enter your comment!
Please enter your name here