ಬೆಳಗಾವಿ : ಬೆಳಗಾವಿ ಜಿಲ್ಲೆಯ ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕುಟುಂಬದ ಮರ್ಯಾದೆ ತೆಗೆದಳೆಂದು ಯುವತಿಯನ್ನು ಕೊಲೆ ಮಾಡಿ ಸುಟ್ಟು ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತನ್ನ ಪತಿಯೊಂದಿಗೆ ಜೀವನ ನಡೆಸದೇ ಪ್ರಿಯಕರನೊಂದಿಗೆ ಓಡಿ ಹೋಗಿ ಕುಟುಂಬದ ಮರ್ಯಾದೆ ತೆಗೆದಿದ್ದಾಳೆ ಎನ್ನುವ ಕಾರಣಕ್ಕೆ ಯುವತಿಯನ್ನು ಕುಟುಂಬದವರೇ ಹತ್ಯೆ ಮಾಡಿದ್ದಾರೆ.
ನಂತರ ಸಾಕ್ಷ್ಯ ನಾಶಕ್ಕಾಗಿ ಶವ ಸುಟ್ಟು ಹಾಕಿದ್ದಾರೆ. ಮಾರ್ಚ್ 13ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ರಾಯಭಾಗ ತಾಲೂಕಿನ ಹಣಬರಟ್ಟಿ ಗ್ರಾಮದ ಸತ್ಯವ್ವ(24) ಕೊಲೆಯಾದ ಯುವತಿ. ಯುವತಿ ಸಾವಿಗೆ ಸಂಬಂಧಿಸಿದಂತೆ ಹುಕ್ಕೇರಿ ತಾಲೂಕಿನ ನದಿಗುಡಿಕ್ಷೇತ್ರ ಗ್ರಾಮದ ಯುವತಿಯ ಚಿಕ್ಕಪ್ಪ ಪ್ರಕಾಶ, ಆಕೆಯ ಸಹೋದರ ಶಾನೂರ ಹೆಳವರ, ಯುವತಿಯ ಸಹೋದರಿಯ ಪತಿ ರಾಯಭಾಗ ತಾಲೂಕಿನ ಮರಬದ ಕಲ್ಲಪ್ಪ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಸತ್ಯವ್ವಳನ್ನು ಸಂತೋಷ್ ಜೊತೆಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಸತ್ಯತ್ವ ಪತಿಯನ್ನು ಬಿಟ್ಟು ತಾನು ಪ್ರೀತಿಸಿದ ಕೃಷ್ಣ ಪಾಟೀಲ್(28) ಜತೆಗೆ ಓಡಿಹೋಗಿದ್ದಳು. ಈ ಬಗ್ಗೆ ನಾಪತ್ತೆ ದೂರು ಕೂಡ ದಾಖಲಾಗಿತ್ತು. ಸತ್ಯವ್ವ ಕಡೆಯ ಕುಟುಂಬದವರು ಇವರನ್ನು ಪತ್ತೆ ಮಾಡಿ ನಂತರ ಆಕೆಯನ್ನು ಹತ್ಯೆ ಮಾಡಿ ಶವ ಸುಟ್ಟು ಹಾಕಿದ್ದಾರೆ. ಯಮುಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

