ನಯಾಗಢ (ಒಡಿಶಾ): ಜೇನುತುಪ್ಪ ತರಲು ಹೋಗಿದ್ದ ಬಾಲಕನೊಬ್ಬ ಬಂಡೆಯ ಸಂದಿಯಲ್ಲಿ ಸಿಲುಕಿ, ಎದುರಲ್ಲೇ ಹೆಬ್ಬಾವು, ನಿಂತಿದ್ದ ಘಟನೆ ಒಡಿಶಾದ ನಯಾಗಢ ಜಿಲ್ಲೆಯಲ್ಲಿ ನಡೆದಿದೆ. ಈ ರೋಚಕ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಜೇನುಗೂಡು ತೆಗೆಯಲು ಹೋಗಿ ಸಂಕಷ್ಟ
ಶಿಬಾ ಪ್ರಧಾನ್ ಎಂಬ ಬಾಲಕ ಕಾಡಿನಲ್ಲಿರುವ ಬಂಡೆಯ ಬಿರುಕಿನೊಳಗಿನ ಜೇನುಗೂಡು ತೆಗೆಯಲು ಹೋಗಿದ್ದನು. ಈ ವೇಳೆ ಆತನು ತಲೆ ಒಳಗೆ ಹಾಕಿದಾಗ ಕಿರಿದಾದ ಬಂಡೆಯ ಸಂದಿಯಲ್ಲಿ ಸಿಲುಕಿಕೊಂಡಿದ್ದಾನೆ.
ಕಣ್ಣೆದುರೇ ನಾಗರಹಾವು
ಇದಕ್ಕಿಂತ ಭಯಾನಕ ಸಂಗತಿ ಎಂದರೆ, ಬಾಲಕ ಸಿಲುಕಿದ್ದ ಅದೇ ಜಾಗದಲ್ಲಿ ಹೆಬ್ಬಾವು ಕುಳಿತಿತ್ತು. ಕದಲಲು ಸಾಧ್ಯವಾಗದೆ, ಹಾವಿನ ಭಯದ ಮಧ್ಯೆಯೇ ಬಾಲಕ ಸುಮಾರು ಎಂಟು ಗಂಟೆಗಳ ಕಾಲ ಅಲ್ಲಿ ಸಿಲುಕಿಕೊಂಡಿದ್ದಾನೆ.
ಜೀವ ಪಣಕ್ಕಿಟ್ಟು ರಕ್ಷಣಾ ಕಾರ್ಯಾಚರಣೆ
ಮಾಹಿತಿ ತಿಳಿದ ತಕ್ಷಣ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಎರಡು ತಂಡಗಳು ಸ್ಥಳಕ್ಕೆ ಧಾವಿಸಿವೆ. ಕಿರಿದಾದ ಜಾಗ ಮತ್ತು ಹಾವಿನ ಅಪಾಯದ ನಡುವೆಯೂ ಸಿಬ್ಬಂದಿ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಿದರು.
ಬಹು ಗಂಟೆಗಳ ಪ್ರಯತ್ನದ ಬಳಿಕ ಬಾಲಕನನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಅದೃಷ್ಟವಶಾತ್ ಬಾಲಕನಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಾಲಕನ ಧೈರ್ಯ ಹಾಗೂ ರಕ್ಷಣಾ ಸಿಬ್ಬಂದಿಯ ಸಾಹಸಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

