ವಿಶ್ವ ಕೊಂಕಣಿ ಕೇಂದ್ರ ದಲ್ಲಿ ‘ವಿಶ್ವ ಕೊಂಕಣಿ ಸಮಾರೋಹ’-2026

0
3

ಕೊಂಕಣಿ ಸಾಹಿತ್ಯ-ಕಲೆ ಸಂಸ್ಕೃತಿ ಸಂಭ್ರಮಿಸುವ ಎರಡು ದಿನಗಳ ಉತ್ಸವ “ವಿಶ್ವಕೊಂಕಣಿ ಸಮಾರೋಹ” ಸಮಾರಂಭವು  ಮೇ  17 ಮತ್ತು 18,  2026   ರಂದು  ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರುಗಿತು. ಕೊಂಕಣಿ ಕುಡುಬಿ ಸಮುದಾಯದ ಸಾಂಪ್ರದಾಯಿಕ ಜನಪದ ನೃತ್ಯ ಹಾಗೂ ವಾದ್ಯ ಸಂಗೀತದೊಂದಿಗೆ ಅತಿಥಿಗಳನ್ನು ಬರಮಾಡಿಕೊಂಡ ಬಳಿಕ ಗೋವಾದ ಕಲಾ-ಸಂಸ್ಕೃತಿಶಿಕ್ಷಣ ಪೋಷಕರಾದ ಶ್ರೀಮತಿ ಸುಲಕ್ಷಣಾ ಸಾವಂತ್ ದೀಪಪ್ರಜ್ವಲನೆ ಮಾಡಿ ಸಮಾರೋಹವನ್ನು ಉದ್ಘಾಟಿಸಿದರು. ಕೇಂದ್ರದ ಅಧ್ಯಕ್ಷರಾದ ಸಿಎ ನಂದಗೋಪಾಲ ಶೆಣೈಯವರು ಸಮಾರೋಹದ ಚಟುವಟಿಕೆಗಳ ಪರಿಚಯ ನೀಡುತ್ತಾ ಅತಿಥಿಗಳನ್ನು ಸ್ವಾಗತಿಸಿದರು. ಶ್ರೀಮತಿ ಸುಲಕ್ಷಣಾ ಇವರು ತಮ್ಮ ಉದ್ಘಾಟನಾ ಸಂದೇಶದಲ್ಲಿ ಕೊಂಕಣಿ ಭಾಷೆಯ ಬೆಳವಣಿಗೆಗೆ ತಂತ್ರಜ್ಞಾನದ ಬಳಕೆ, ಉಪಭಾಷೆಗಳ ಮಹತ್ವ, ಗೋವಾ ಕರ್ನಾಟಕದ ನಡುವಿನ ಬಾಂಧವ್ಯಕ್ಕೆ ವಿಶ್ವಕೊಂಕಣಿ ಕೇಂದ್ರದ ವಿಶೇಷ ಪ್ರಯತ್ನಗಳ ಬಗ್ಗೆ ಉಲ್ಲೇಖ ಮಾಡಿದರು. ಸಾಹಿತ್ಯ ಆಕಾಡೆಮಿ ನವದೆಹಲಿ, ಇದರ ಸದಸ್ಯರಾದ ಹೆಚ್ ಎಮ್ ಪೆರ್ನಾಳ್ ಇವರು ಆಕಾಡೆಮಿ ವಿವಿಧ ಚಟುವಟಿಕೆಗಳ ಪರಿಚಯ ನೀಡಿದರು.  

ಆಕಾಡೆಮಿ ವತಿಯಿಂದ ಆಯೋಜಿಸಿರುವ ಪರಿಚರ್ಚೆಯ “ಸಾಹಿತ್ಯ ವಿಶ್ಲೇಷಣೆ ಮಹತ್ವ ಹಾಗೂ ವಿಧಾನಗಳು” ಈಕುರಿತು ಆಕಾಡೆಮಿಯ ಕೊಂಕಣಿ ವಿಭಾಗದ ಸಂಚಾಲಕರಾದ ಮೆಲ್ವಿನ್ ರೊಡ್ರಿಗಸ್ ಇವರು ವಿವರಿಸಿದರು. ಮತ್ತು ಇದೇ ವಿಚಾರದಲ್ಲಿ ಡಾ ಕಿರಣ್ ಬುಡ್ಕುಳೆ ಇವರು ಪ್ರಾಸ್ತಾವಿಕ ಭಾಷಣ ಮಾಡಿದರು. ಅನಂತರದ ಅವಧಿಗೆ ಗೋಕುಲದಾಸ ಪ್ರಭು ಅಧ್ಯಕ್ಷತೆಯಲ್ಲಿ ನಡೆದ ಗೋಷ್ಟಿ”ಸಾಹಿತ್ಯ ಪ್ರಕಾರಗಳ ನಡುವೆ ಸಮತೋಲಿತ ಬೆಳವಣಿಗೆ- ಒಂದು ವಿಶ್ಲೇಷಣೆ” ಈ ವಿಚಾರದಲ್ಲಿ ಡಾ ಬಿ ದೇವದಾಸ ಪೈ ಯವರು ಹಾಗೂ ಹೆಚ್ ಎಮ್ ಪೆರ್ನಾಳ್ ಅಧ್ಯಕ್ಷತೆಯಲ್ಲಿ ನಡೆದ ಗೋಷ್ಟಿ “ಸಾಹಿತ್ಯ ವಿಶ್ಲೇಷಣೆಯಲ್ಲಿನ ಮಹತ್ವದ ಅಂಶಗಳು” ಈ ವಿಷಯದಲ್ಲಿ ಡಾ ಹನುಮಂತ ಚೊಪಡೆಕರ್ ಮತ್ತು ಪ್ರೊ ರಮಿತಾ ಗುರವ್ ಇವರು ಪ್ರಬಂಧ ಮಂಡಿಸಿದರು.

ಅಪರಾಹ್ನ ಕವಿತಾ ಟೃಸ್ಟ್ ಸಹಯೋಗದೊಂದಿಗೆ ಕೊಂಕಣಿಯ ಮೇರು ಕವಿ ಕೇರಳದ ಪಿ ಜಿ ಕಾಮತ್ ರವರ ಜನ್ಮ ಶತಾಬ್ದಿ ಆಚರಿಸಲಾಯಿತು. ಈ ಪ್ರಯುಕ್ತ ಅವರ ಸುಪುತ್ರ ಆನಂದ ಕಾಮತ್ ಕುಟುಂಬಸ್ಥರ ಉಪಸ್ಥಿತಿಯಲ್ಲಿ ಕವಿಯ ಕವಿತೆಗಳ ವಾಚನವನ್ನು ಸ್ಮಿತಾ ಶೆಣೈ, ಎಮ್. ಆರ್. ಕಾಮತ್, ಡಾ ವೆಂಕಟೇಶ ನಾಯಕ್, ಮಿನಿಶಾ ಮೊಂತೆರೊ ಇವರು ನಡೆಸಿಕೊಟ್ಟರು. ಸಿ ಎ ನಂದಗೋಪಾಲ್ ಶೆಣೈಯವರ ಅಧ್ಯಕ್ಶತೆಯಲ್ಲಿ ಮೆಲ್ವಿನ್ ರೊಡ್ರಿಗಸ್ ಹಾಗೂ ಹೆಚ್ ಎಮ್ ಪೆರ್ನಾಳ್ ಕವಿಯ ಸಾಹಿತ್ಯ ಸೇವೆಯನ್ನು ಪ್ರಶಂಶಿಸಿದರು.

ಸಾಂಸ್ಕೃತಿಕ ಕಲಾ ಪ್ರದರ್ಶನದಲ್ಲಿ ಕುಮಟಾದ ಲಕ್ಶ್ಮೀನರಸಿಂಹ ಕಲಾಮಂಡಾಳಿಯವರು ಪ್ರಸ್ತುತ ಪಡಿಸಿದ ‘ನರಸಿಂಹ ಅವತಾರ’ ನೃತ್ಯ ರೂಪಕ,  ಸಾಧನಾ ಬಳಗ ದವರ ಹಾಸ್ಯ ರಸಾಯನ ಕಾರ್ಯಕ್ರಮ ಹಾಗೂ ಅಂಕಿತಾ ಕಾಮತ ಪಂಗಡದ  ಬಾಲಕಲಾವಿದರನ್ನೊಳಗೊಂಡ ‘ವೀರನಾರಿ ಅಹಲ್ಯಾಬಾಯಿ ಹೋಳ್ಕರ’ ಎಂಬ ನಾಟಕ ಪ್ರದರ್ಶನ ಪ್ರೇಕ್ಷರ ಮನ ಸೂರೆಗೊಂಡಿತು.                                     

ಎರಡನೇ ದಿನದ ಪೂರ್ವಾಹ್ನ ಮೂರು ಜನಪದ ಗೋಷ್ಟಿಗಳ ಉದ್ಘಾಟನೆಯನ್ನು ಜನಪದ ಚಿಂತಕ ಹಾಗೂ ಗೋವಾ ವಿಶ್ವವಿದ್ಯಾನಿಲಯದ ವೈಸ್-ಡೀನ್ ಡಾ ಪ್ರಕಾಶ್ ಪರಿಯೆನಕರ್ ನೆರವೇರಿಸಿದರು. ಮಹಾದಾನಿ ಹಾಗೂ ಶತ ಕೊಂಕಣಿ ಪುಸ್ತಕ ಪ್ರಕಟಣೆ ಯೋಜನೆಯ ಪ್ರವರ್ತಕ ಮೈಕೆಲ್ ಡಿ ಸೊಜ಼ಾ ಹಾಗೂ ವರ್ಧನಿ ಪ್ರತಿಷ್ಟಾನದ ನಿರ್ದೇಶಕರಾದ ಉಷಾ ಎನ್ ಶೆಣೈ ಇವರು ಭಾಗವಹಿಸಿ ಶುಭ ಹಾರೈಸಿದರು

ಮುಂದೆ ಪ್ರಸಿದ್ಧ ಕಥೆಗಾರ ವಿವೇಕಾನಂದ ಕಾಮತ ಇವರ ಅಧ್ಯಕ್ಷತೆಯಲ್ಲಿ “ಕೊಂಕಣಿ ನ್ಯಾನೊಕಥೆಗಳು” ಕಥಾ ಸಮಯ ನಡೆಸಲಾಯಿತು.  ಜಯಶ್ರೀ ಶೆಣೈ, ವಂದನಾ ನಾಯಕ, ಕಸ್ತೂರಿ ಪೈ, ಶಕುಂತಲಾ ಆರ್ ಕಿಣಿ, ಬಸ್ತಿ ಶೋಭಾ ಶೆಣೈ ನ್ಯಾನೊ ಕಥಾ ವಾಚನ ನಡೆಸಿಕೊಟ್ಟರು. ಪ್ರಸಿದ್ಧ ಯಕ್ಷಗಾನ ಕಲಾವಿದರು ಹಾಗೂ ವಿಮರ್ಶಕರು ಡಾ ಪ್ರಭಾಕರ ಜೋಶಿಯವರ ಮಾರ್ಗದರ್ಶನದಲ್ಲಿ, “ಯಕ್ಷಗಾನ ಮತ್ತು ಕೊಂಕಣಿಗರು” ವಿಚಾರ ಗೋಷ್ಟಿಯಲ್ಲಿ  ಅರ್ಗೋಡು ಮೋಹನದಾಸ್ ಶೆಣೈ, ಎಂ ಆರ ಕಾಮತ್ ಶಾಂತಾರಾಮ ಕುಡ್ವ ಇವರು ವಿಷಯ ಮಂಡನೆ ಮಾಡಿದರು. ಶಕುಂತಲಾ ಕಿಣಿ ಇವರ ಅಧ್ಯಕ್ಷತೆಯಲ್ಲಿ ನಡೆದ ಜನಪದ ಹಾಡುಗಳ ಗಾಯನ ದಲ್ಲಿ. ಮರೋಳಿ ಸಬಿತಾ ಕಾಮತ್, ಜೂಲಿಯೆಟ್ ಫೆರ್ನಾಂಡಿಸ್, ಡಾ. ವಿಜಯಲಕ್ಷ್ಮಿ ನಾಯಕ್, ನಾರಾಯಣ ನಾಯಕ್ ಇವರು ತಮ್ಮ ತಮ್ಮ ಸಮುದಾಯದ ಮೌಖಿಕ ಪರಂಪರೆಯ ಪದಗಳನ್ನು ಪ್ರಸ್ತುತಪಡಿಸಿದರು 

ಅಪರಾಹ್ನ ಸಾಹಿತ್ಯ ಅಕಾಡೆಮಿ, ನವದೆಹಲಿ ಸಹಯೋಗದಲ್ಲಿ , ವಿಶ್ವ ಕೊಂಕಣಿ ಕೇಂದ್ರ ಮತ್ತು ಕವಿತಾ ಟ್ರಸ್ಟ್ ಆಯೋಜಿಸಿದ  ಯುವ ಕೊಂಕಣಿ ಬರಹಗಾರರ ಚರ್ಚಾ ಗೋಷ್ಟಿ ಜರುಗಿತು.  ಸ್ಟ್ಯಾನಿ ಡಿ ಸೋಜಾ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ವಿಲ್ಮಾ ಡಿ ಸೋಜಾ ಬಂಟ್ವಾಳ, ಲವಿತಾ ಡಿ ಸೋಜಾ, ಡಾ. ವೆಂಕಟೇಶ್ ನಾಯಕ್, ಗ್ಲಾನಿಶ್ ಮಾರ್ಟಿಸ್, ಶ್ವೇತಾ ಪೈ ಎಂ ಮೊದಲಾದ ಯುವ ಕೊಂಕಣಿ ಬರಹಗಾರರು ತಮ್ಮ ಕವಿತಾ ವಾಚನದ ಮೂಲಕ ಸಭಿಕರ ಮನ ಸೆಳೆದರು.

ಸಂಜೆ ಸಮಾರೋಪ ಸಮಾರಂಭ ದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಅರವಿಂದ್ ಕಾಮತ್ ಮಾತನಾಡುತ್ತಾ ಇಂತಹ ಅಧ್ಬುತವಾದ ಭವ್ಯ ಸಭಾಗೃಹದಲ್ಲಿ ಜರುಗುತ್ತಿರುವ ವಿವಿಧ ಸಾಹಿತ್ಯಿಕ, ಸಾಂಸ್ಕೃತಿಕ, ಕಲಾ, ಶೈಕ್ಷಣಿಕ ಕಾರ್ಯಕ್ರಮವನ್ನು ಶ್ಲಾಘಿಸಿದರು. ಸಭೆಯ ವಿಶೇಷ ಆಕರ್ಷಿತರಾದ ಹಿರಿಯ ವಕೀಲ ಕೆ ಜಗದೀಶ್ ಕಾಮತ್ ಇವರು “ಭಾರತದ ಸಂವಿಧಾನದಲ್ಲಿ ಭಾಷಾ ಅಲ್ಪಸಂಖ್ಯಾತರಿಗೆ ಲಭ್ಯವಿರುವ ಅವಕಾಶಗಳು” ಮತ್ತು ಅದರ ಪೂರ್ಣ ಸದುಪಯೋಗ ಮಾಡದಿರುವ ಬಗ್ಗೆ ಬೊಟ್ಟು ಮಾಡಿ ತೋರಿಸಿದರು. ವಿಶ್ವ ಕೊಂಕಣಿ ಕೇಂದ್ರ ಅಧ್ಯಕ್ಷರಾದ ಸಿಎ ನಂದಗೋಪಾಲ್ ಶೆಣೈ ಅವರು ಮುಖ್ಯ ಅತಿಥಿಗಳನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಕೇಂದ್ರದ ಕೋಶಾಧಿಕಾರಿ ಶ್ರೀ ಬಿ ಆರ್ ಭಟ್, ಉಪಾಧ್ಯಕ್ಷರಾದ ಡಾ ಕಿರಣ ಬುಡ್ಕುಳೆ, ರಮೇಶ್ ಡಿ ನಾಯಕ, ಉಪಸ್ಥಿತರಿದ್ದರು. ಸಾಹಿತ್ಯ ಸಮಾರೋಹ ಕ್ಕೆ ಗೋವಾ ವಿಶ್ವ ವಿದ್ಯಾನಿಲಯ ಹಾಗೂ ಸ್ಠಳೀಯ ಕಾಲೇಜು ವಿದ್ಯಾರ್ಥಿಗಳು, ಯುವ ಬರಹಗಾರರು ಹೆಚ್ಚಿನ ಸಂಖ್ಯೆಯಲ್ಲಿ  ಭಾಗವಹಿಸಿದರು. ಉಪಾಧ್ಯಕ್ಷರಾದ ಶ್ರೀ ವಿಲಿಯಂ ಡಿಸೋಜಾ ಧನ್ಯವಾದ ಸಮರ್ಪಣೆ ಮಾಡಿದರು.

ಸುಚಿತ್ರಾ ಶೆಣೈ ಮತ್ತು  ಡಾ  ವಿಜಯಲಕ್ಷ್ಮಿ ಕಾಮತ್ ಕಾರ್ಯಕ್ರಮ ನಿರೂಪಣೆ ಮಾಡಿದರು. ವೈಷ್ಣವಿ ಕಿಣಿ ಕೊಂಕಣಿ  ಅಭಿಮಾನ  ಗೀತೆಯನ್ನು ಹಾಡಿದರು.

LEAVE A REPLY

Please enter your comment!
Please enter your name here