ಹೆಬ್ರಿ ಪೇಟೆ ರಸ್ತೆ-ಚರಂಡಿ ಅವ್ಯವಸ್ಥೆ : ಚಪ್ಪಡಿ ಇಲ್ಲ, ನೀರು ನಿಲ್ಲುವ ಪರಿಸ್ಥಿತಿ- ತಕ್ಷಣ ದುರಸ್ಥಿಗೆ ಗ್ರಾಮಸ್ಥರ ಒತ್ತಾಯ..!

0
15

ಹೆಬ್ರಿ : ಹೆಬ್ರಿ ಪೇಟೆ ಪ್ರದೇಶದ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಹದಗೆಟ್ಟಿದ್ದು, ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಸ್ತೆ ಬದಿಯ ಚರಂಡಿಗಳಿಗೆ ಹಲವೆಡೆ ಕಲ್ಲು ಚಪ್ಪಡಿಗಳನ್ನು ಅಳವಡಿಸಲಾಗಿಲ್ಲ. ಕೆಲವು ಕಡೆ ಚರಂಡಿಗಳು ತೆರೆದ ಸ್ಥಿತಿಯಲ್ಲಿ ಇದ್ದು, ಅಪಾಯಕಾರಿಯಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪೊಲೀಸ್ ಠಾಣೆಗೆ ಹೋಗುವ ಮುಖ್ಯ ದಾರಿಯಲ್ಲಿಯೂ ರಸ್ತೆ ಹದಗೆಟ್ಟಿದ್ದು, ಮಣ್ಣು ಮತ್ತು ಕಸದಿಂದ ತುಂಬಿರುವುದರಿಂದ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಜೊತೆಗೆ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದ ಕಾರಣ ಮಳೆಗಾಲದಲ್ಲಿ ನೀರು ರಸ್ತೆಯಲ್ಲೇ ನಿಂತುಕೊಳ್ಳುವ ಪರಿಸ್ಥಿತಿ ಎದುರಾಗಿದೆ.

ಗ್ರಾಮಸ್ಥರ ಪ್ರಕಾರ, ಹಲವೆಡೆ ಚರಂಡಿ ಮೇಲೆ ಚಪ್ಪಡಿ ಅಳವಡಿಸದೇ ಇರುವುದರಿಂದ ಅಪಘಾತ ಸಂಭವಿಸುವ ಭೀತಿ ಹೆಚ್ಚಾಗಿದೆ. ರಾತ್ರಿ ಸಮಯದಲ್ಲಿ ತೆರೆದ ಚರಂಡಿಗಳು ಕಾಣಿಸದೇ ಬೀಳುವ ಅಪಾಯವೂ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಮಳೆಗಾಲದಲ್ಲಿ ನೀರು ಸರಿಯಾಗಿ ಹರಿಯದೇ ರಸ್ತೆಯಲ್ಲಿ ನೀರು ತುಂಬಿಕೊಳ್ಳುತ್ತಿರುವುದರಿಂದ ಸಂಚಾರ ಅಡ್ಡಿಯಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಎಲ್ಲಾ ಚರಂಡಿಗಳಿಗೆ ಚಪ್ಪಡಿ ಅಳವಡಿಸಿ, ರಸ್ತೆ ದುರಸ್ತಿ ಕಾರ್ಯ ತಕ್ಷಣ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here