ಹೆಬ್ರಿ: ಪಿ ಆರ್ ಎನ್ ಅಮೃತಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಹತ್ತು ದಿನಗಳ ಸಂಸ್ಕೃತ ಸಂಭಾಷಣಾ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಅನ್ನಪೂರ್ಣ ಸಭಾಂಗಣದಲ್ಲಿ ನಡೆಯಿತು.
ಸಂಸ್ಕೃತ ಭಾಷೆಯು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ನಮ್ಮ ಜೀವನದಲ್ಲಿ ಭಾರತೀಯ ಗ್ರಂಥಗಳ ಅಧ್ಯಯನಕ್ಕೆ ಸಂಸ್ಕೃತ ಅನಿವಾರ್ಯ ಆದ್ದರಿಂದ ಮುಂದಿನ ಶೈಕ್ಷಣಿಕ ವರ್ಷದಿಂದ ಅಮೃತ ಭಾರತಿ ವಿದ್ಯಾಕೇಂದ್ರದಲ್ಲಿ ಸಂಸ್ಕೃತ ಭಾಷೆಯ ಕಲಿಕೆ ಕಡ್ಡಾಯವಾಗಬೇಕು ಅದನ್ನು ಪರಿಚಯಿಸುವ ಕಾರ್ಯ ಈಗ ಸಂಭಾಷಣಾ ಶಿಬಿರದ ಮೂಲಕ ನಡೆಯಲಿದೆ ಎಂದು ಸಂಸ್ಥೆಯ ಸಂಚಾಲಕ ಗುರುದಾಸ್ ಶೆಣೈ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಾಸ್ತಾವಿಕವಾಗಿ ವಿದ್ಯಾಲಯದ ಸಂಸ್ಕೃತ ಶಿಕ್ಷಕ ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ ಮಾತನಾಡಿ ವಿಶ್ವದ ಬಹುತೇಕ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಬೋಧನೆ ಪ್ರಾರಂಭವಾಗಿದೆ. ಭಾರತವು ವಿಶ್ವಗುರುವಾಗಲು ನಮ್ಮ ಜ್ಞಾನ ಪರಂಪರೆ ಮತ್ತು ಅಪೂರ್ವ ವಿಷಯ ಸಂಸ್ಕೃತ ಸಾಹಿತ್ಯದಲ್ಲಿ ಇದೆ ಅದನ್ನು ಪರಿಚಯಿಸಲು ಬಹು ಭಾಷಾ ಜ್ಞಾನ ಆವಶ್ಯಕ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಟ್ರಸ್ಟ್ ನ ಸದಸ್ಯ ಬಾಲಕೃಷ್ಣ ಮಲ್ಯ ಮಾತನಾಡಿ ಸಂಸ್ಕೃತ ಭಾಷೆಯು ವಿಜ್ಞಾನ ಮತ್ತು ಗಣಕಯಂತ್ರಕ್ಕೆ ಹೆಚ್ಚು ಅನುಕೂಲವಾದ ಭಾಷೆ , ವೇದಗಣಿತಕ್ಕೆ ಅಪೂರ್ವವಾದ ವಿಷಯವನ್ನು ನಮ್ಮ ದಾರ್ಶನಿಕರು ಸಂಶೋಧನೆ ಮಾಡಿದ ನೀಡಿದ ಭಾಷೆಯಾಗಿದೆ ಇದರ ಉಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ವಿದ್ಯಾಕೇಂದ್ರದ ಪ್ರಾಂಶುಪಾಲ ಅರುಣ್ ಹೆಚ್ ವೈ, ಅಮೃತಭಾರತಿ ವಿದ್ಯಾಲಯ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಅಪರ್ಣಾ ಆಚಾರ್, ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಶಕುಂತಲಾ, ಶೃಂಗೇರಿ ಸಂಸ್ಕೃತ ಭಾರತಿಯ ಅಖಿಲಾ ಕೆ, ಶ್ರೀಜಾ ಉದನೇಶ್, ಪ್ರಣಮ್ಯ ಕೆ , ವಿಶ್ವಕ್ಸೇನ, ಹಾಗೂ ಸಂಸ್ಥೆಯ ಗುರುವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಅಮೃತಭಾರತಿ ವಿದ್ಯಾಕೇಂದ್ರದ ಸಂಸ್ಕೃತ ಶಿಕ್ಷಕಿ ಐಶ್ವರ್ಯ ಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

