ಮೂಡುಬಿದರೆ : ತಾಲೂಕಿನ ಶಿರ್ತಾಡಿ ಗ್ರಾಮದ ಆರೋಗ್ಯ ಕೇಂದ್ರಕ್ಕೆ ರಾಜ್ಯ ಆರೋಗ್ಯ ಸಚಿವ ಯು ಟಿ ಖಾದರ್ ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಗ್ಯ ಕೇಂದ್ರದಲ್ಲಿ ಹಲವಾರು ವರ್ಷಗಳಿಂದ ವೈದ್ಯಾಧಿಕಾರಿಗಳು ಇಲ್ಲದೆ ಇರುವುದರಿಂದ ತೊಂದರೆಯಾದ ಬಗ್ಗೆ ಗ್ರಾಮಸ್ಥರು ದೂರಿಕೊಂಡಿದ್ದರು.
ಈ ಬಗ್ಗೆ ಪರಿಶೀಲನೆಗಾಗಿ ದಿಡೀರ್ ಭೇಟಿ ನೀಡಿದ ಖಾದರ್ ಅವರ ಸದ್ಯಕ್ಕೆ ವಾರದಲ್ಲಿ ಮೂರು ದಿನ ಬೆಳುವಾಯಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ಇನ್ನು ಮೂರು ದಿನ ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಭೇಟಿ ನೀಡಬೇಕೆಂದು ಆದೇಶಿಸಿದರು.
ಪೂರ್ಣ ಪ್ರಮಾಣದ ವೈದ್ಯರನ್ನು ಆದಷ್ಟು ಶೀಘ್ರ ನೇಮಿಸುವ ಭರವಸೆಯನ್ನು ನೀಡಿದರು. ತರವಾಯ ವೈದ್ಯಾಲಯದಲ್ಲಿರುವ ಎಲ್ಲಾ ಔಷಧಿಗಳ ತಪಾಸಣೆಯನ್ನು ನಡೆಸಿ ಎಲ್ಲಾ ವ್ಯವಸ್ಥೆಯನ್ನು ಸರಿಯಾಗಿ ನಡೆಸಿಕೊಂಡು ಹೋಗುವಂತೆ ಸಿಬ್ಬಂದಿಗಳಿಗೆ ನಿರ್ದೇಶಿಸಿದರು. ಊರಿನ ಹಲವಾರು ಮಂದಿ ಮುಖ್ಯಸ್ಥರು, ಗ್ರಾಮಸ್ಥರು ಈ ಸಂದರ್ಭ ಹಾಜರಿದ್ದರು.

