ಬೆಂಗಳೂರು : ನಗರದ 91 ವರ್ಷಗಳ ಹಳೆಯ ಎಪಿಎಸ್ ಶಿಕ್ಷಣ ಸಂಸ್ಥೆಗಳಿಗೆ ನೂತನ ಅಧ್ಯಕ್ಷರಾಗಿ ಸಿಎ ಡಾ. ವಿಷ್ಣು ಭರತ್ ಆಲಂಪಳ್ಳಿ ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸಿಎ ಡಾ. ಐ. ಎಸ್. ಪ್ರಸಾದ್, ವಿಜಯ್ ಭಾಸ್ಕರ್ ಆರ್. ವಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಪ್ರೊ. ಎ. ಪ್ರಕಾಶ್ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ‘ಎಪಿಎಸ್ ಶಿಕ್ಷಣ ಸಂಸ್ಥೆ’ಯು ತನ್ನ ನೂತನ ವಿಶ್ವಸ್ಥ ಮಂಡಳಿಯಿಂದ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಮೂಲಕ ನವ ಯುಗಕ್ಕೆ ನಾಂದಿ ಹಾಡಿದೆ.

ಖಜಾಂಚಿಯಾಗಿ ಕೆ. ಎಸ್. ಅಖಿಲೇಶ್ ಬಾಬು, ಜಂಟಿ ಕಾರ್ಯದರ್ಶಿಗಳಾಗಿ ಪಿ. ಕೃಷ್ಣಸ್ವಾಮಿ, ಪ್ರೊ. ಎ. ರಾಮ್ ಪ್ರಸಾದ್, ಖಾಯಂ ಸದಸ್ಯರಾಗಿ ಸಿಎ ಎ. ಪಿ. ಆಚಾರ್ಯ, ಎ. ಆರ್. ಆಚಾರ್ಯ ಮತ್ತು ಎ. ಮುರಳೀಧರ ಅವರನ್ನು ಆಯ್ಕೆ ಮಾಡಲಾಗಿದೆ.
ಇತರ ಚುನಾಯಿತ ವಿಶ್ವಸ್ಥ ಮಂಡಳಿ ಟ್ರಸ್ಟಿಯ ಸದಸ್ಯರಾಗಿ ಟಿ. ವಿ. ಪ್ರಭು, ಸಿ. ನಾಗರಾಜ್, ಎಚ್. ವಿ. ಗೌತಮ, ಪ್ರೊ. ಕೆ. ಪಿ. ನರಸಿಂಹಮೂರ್ತಿ, ಡಾ. ರಾಜೀವ್, ಮೋಹನ್ ದೇವ್ ಆಳ್ವ, ವಿಜಯಾನಂದ್, ಮಂಜುನಾಥ್, ಕಿಶೋರ್ ಕುಮಾರ್ ಮತ್ತು ಮಂಜುಳಾ ಬಿಂದು ಮಾಧವ ರಾವ್ ಆಯ್ಕೆಯಾಗಿದ್ದಾರೆ.
ಎಪಿಎಸ್ ಸಂಸ್ಥೆಯು ಒಟ್ಟು 14 ಶಿಕ್ಷಣ ಸಂಸ್ಥೆಗಳನ್ನು ಒಳಗೊಂಡಿದ್ದು, ಪ್ರೀ-ಸ್ಕೂಲ್ ನಿಂದ ಪಿಎಚ್.ಡಿ ವರೆಗೆ ಸಮಗ್ರ ಶಿಕ್ಷಣ ನೀಡುತ್ತಿದೆ. ವೈದ್ಯಕೀಯ ಶಿಕ್ಷಣವನ್ನು ಹೊರತುಪಡಿಸಿ, ಎಪಿಎಸ್ ನಲ್ಲಿ ಶಿಕ್ಷಣವನ್ನು ಆರಂಭಿಸುವ ವಿದ್ಯಾರ್ಥಿಗಳು ಶಾಲೆ, ಪ್ರೀ-ಯೂನಿವರ್ಸಿಟಿ (ಪಿಯುಸಿ), ಪದವಿ, ಸ್ನಾತಕೋತ್ತರ ಕಾರ್ಯಕ್ರಮಗಳು (ಎಂಬಿಎ ಮತ್ತು ಎಂಸಿಎ ಸೇರಿದಂತೆ) ಮತ್ತು ಡಾಕ್ಟರೇಟ್ ಅಧ್ಯಯನಗಳನ್ನು ಒಂದೇ ಶಿಕ್ಷಣ ವ್ಯವಸ್ಥೆಯಡಿ ಮುಂದುವರಿಸಬಹುದು.
ಭಾರತೀಯ ಸಂಸ್ಕೃತಿ, ಮೌಲ್ಯಗಳು ಮತ್ತು ಸಂಪ್ರದಾಯಗಳನ್ನು ಉತ್ತೇಜಿಸುವ ಜೊತೆಗೆ ಶೈಕ್ಷಣಿಕ ಉತ್ಕೃಷ್ಟತೆಯನ್ನು ಪೋಷಿಸಲು ಎಪಿಎಸ್ ಸದಾ ಬದ್ಧವಾಗಿದೆ. ಗುಣಮಟ್ಟದ ಶಿಕ್ಷಣದೊಂದಿಗೆ, ಈ ಸಂಸ್ಥೆಗಳು ಕ್ರೀಡೆ, ಕಲೆ, ಸಾಂಸ್ಕೃತಿಕ ಚಟುವಟಿಕೆಗಳು, ನಾಯಕತ್ವ ಕಾರ್ಯಕ್ರಮಗಳು ಮತ್ತು ಚಾರಿತ್ರ್ಯ ನಿರ್ಮಾಣದ ಉಪಕ್ರಮಗಳ ಮೂಲಕ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಒತ್ತು ನೀಡುತ್ತವೆ; ಆ ಮೂಲಕ ಜವಾಬ್ದಾರಿಯುತ ನಾಗರಿಕರನ್ನು ಮತ್ತು ಭವಿಷ್ಯದ ನಾಯಕರನ್ನು ಸಿದ್ಧಪಡಿಸುತ್ತವೆ.

