ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ
ಕಾರ್ಕಳ : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ.), ದಕ್ಷಿಣ ಕನ್ನಡ/ಉಡುಪಿ ಜಿಲ್ಲೆ, ಕಾರ್ಕಳ ವಲಯ ವತಿಯಿಂದ ಸದಸ್ಯರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಖ್ಯಾತ ವೈದ್ಯರು, ಡಾ. ಕೆ. ರಾಮಚಂದ್ರ ಜೋಶಿ, ಅಧ್ಯಕ್ಷರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕಾರ್ಕಳ ಘಟಕ ಉದ್ಘಾಟಿಸಿ, ಸದಸ್ಯರ ಆರೋಗ್ಯ ತಪಾಸಣೆಯನ್ನೂ ನಡೆಸಿದರು.

ಕಾರ್ಯಕ್ರಮದ ಆರಂಭದಲ್ಲಿ ಎಸ್.ಕೆ.ಪಿ.ಎ ಕಾರ್ಕಳ ವಲಯದ ಅಧ್ಯಕ್ಷರಾದ ಪ್ರಮೋದಚಂದ್ರ ಪೈ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಗೌರವ ಉಪಸ್ಥಿತರಾಗಿ ಎಸ್.ಕೆ.ಪಿ.ಎ ದಕ್ಷಿಣ ಕನ್ನಡ/ಉಡುಪಿ ಜಿಲ್ಲೆ ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಪದ್ಮಪ್ರಸಾದ್ ಜೈನ್, ಜಿಲ್ಲಾ ಉಪಾಧ್ಯಕ್ಷರಾದ ದತ್ತಾತ್ರೇಯ ಹಿರಿಯಂಗಡಿ, ಎಸ್.ಕೆ.ಪಿ.ಎ ಕಾರ್ಕಳ ಗೌರವಾಧ್ಯಕ್ಷರಾದ ಟಿ.ವಿ. ಸುಶೀಲ್ ಕುಮಾರ್, ಪ್ರಧಾನ ಕಾರ್ಯದರ್ಶಿ ಶೇಖರ್ ಕುಕ್ಕುಜೆ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕಾರ್ಕಳ ಘಟಕದ ಪದಾಧಿಕಾರಿಗಳಾದ ವಸಂತ್ ಎಂ ಮತ್ತು ಮೋಹದಾಸ್ ಶೆಣೈ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಕೆ. ರಾಮಚಂದ್ರ ಜೋಶಿ ಅವರು, “ಕಾರ್ಕಳ ವಲಯವು ತನ್ನ ಸದಸ್ಯರ ಆರೋಗ್ಯದ ಬಗ್ಗೆ ತೋರಿಸುತ್ತಿರುವ ಕಾಳಜಿ ನಿಜಕ್ಕೂ ಮಾದರಿಯಾಗಿದೆ. ಪ್ರತಿವರ್ಷ ಸದಸ್ಯರಿಗಾಗಿ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸುವುದು ಶ್ಲಾಘನೀಯ ಕಾರ್ಯ. ಸಮಾಜಮುಖಿ ಚಟುವಟಿಕೆಗಳ ಮೂಲಕ ಇತರೆ ಸಂಘಟನೆಗಳಿಗೂ ಈ ವಲಯ ಮಾದರಿಯಾಗಿದೆ. ಸದಸ್ಯರ ಆರೋಗ್ಯವೇ ಸಂಘಟನೆಯ ಶಕ್ತಿ. ಈ ಉತ್ತಮ ಕಾರ್ಯಕ್ಕಾಗಿ ಎಸ್.ಕೆ.ಪಿ.ಎ ಕಾರ್ಕಳ ವಲಯದ ಎಲ್ಲ ಪದಾಧಿಕಾರಿಗಳು ಹಾಗೂ ಸದಸ್ಯರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ,” ಎಂದು ಹೇಳಿದರು.

ಅಧ್ಯಕ್ಷರಾದ ಶ್ರೀ ಪ್ರಮೋದಚಂದ್ರ ಪೈ ಮಾತನಾಡಿ, “ಛಾಯಾಗ್ರಾಹಕರ ಜೀವನಶೈಲಿ ಇತರ ವೃತ್ತಿಗಳಿಗಿಂತ ಭಿನ್ನವಾಗಿದೆ. ಕಾರ್ಯಕ್ರಮಗಳ ಒತ್ತಡ, ಅನಿಯಮಿತ ಆಹಾರ ಪದ್ಧತಿ, ಸಮಯ ಮೀರಿ ಕೆಲಸ ಮಾಡುವುದು, ವಿಶ್ರಾಂತಿಯ ಕೊರತೆ ಮುಂತಾದ ಕಾರಣಗಳಿಂದ ಆರೋಗ್ಯದ ಕಡೆ ವಿಶೇಷ ಗಮನ ನೀಡುವುದು ಅತ್ಯಗತ್ಯ. ಆದ್ದರಿಂದ ಪ್ರತಿಯೊಬ್ಬ ಛಾಯಾಗ್ರಾಹಕರೂ ವರ್ಷಕ್ಕೆ ಕನಿಷ್ಠ ಎರಡು ಬಾರಿ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು,” ಎಂದು ಸಲಹೆ ನೀಡಿದರು.
ಕಾರ್ಯಕ್ರಮವನ್ನು ಪ್ರಸಾದ್ ಐಸಿರ ಅವರು ಅಚ್ಚುಕಟ್ಟಾಗಿ ನಿರೂಪಿಸಿ, ವಂದನಾರ್ಪಣೆ ಸಲ್ಲಿಸಿದರು.
ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಇದರ ಪ್ರಯೋಜನ ಪಡೆದುಕೊಂಡರು. ಸದಸ್ಯರ ಆರೋಗ್ಯ ಹಿತದೃಷ್ಟಿಯಿಂದ ಕಾರ್ಕಳ ವಲಯ ನಿರಂತರವಾಗಿ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದಕ್ಕೆ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.

