ದುಬೈ : ಮಧ್ಯಪ್ರಾಚ್ಯದ ಏಕೈಕ ಹಾಗೂ ಸರ್ವಪ್ರಥಮ ಸಮಗ್ರ ಯಕ್ಷಗಾನ ಕಲಿಕಾ ಸಂಸ್ಥೆಯಾಗಿ ಹೆಸರಾಗಿರುವ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ತನ್ನಏಕಾದಶವರ್ಷೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದು, ಈ ವಿಶೇಷ ಸಂದರ್ಭದಲ್ಲಿ ಯಕ್ಷಗಾನದ ತವರೂರು ಕರಾವಳಿಯಲ್ಲಿ ಮೂರು ಮಹತ್ವದ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಈ ಸಂಭ್ರಮದ ಅಂಗವಾಗಿ ದುಬೈಯ ಕಲಾವಿದರು ಮೊದಲಿಗೆ ಆಗಸ್ಟ್ 2, 2026 (ಭಾನುವಾರ) ಮಧ್ಯಾಹ್ನ 1.20 ಗಂಟೆಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸರಸ್ವತೀ ಸದನದಲ್ಲಿ ಶ್ರೀ ದೇವಿಯ ಸನ್ನಿಧಿಯಲ್ಲಿ ಗೆಜ್ಜೆಸೇವೆ ಸಲ್ಲಿಸಲಿದ್ದಾರೆ. ಯಕ್ಷಗಾನದ ಆರಾಧನಾ ಪರಂಪರೆಯ ಈ ಕಾರ್ಯಕ್ರಮಕ್ಕೆ ಭಕ್ತರು ಹಾಗೂ ಯಕ್ಷಾಭಿಮಾನಿಗಳನ್ನು ಆತ್ಮೀಯವಾಗಿ ಆಹ್ವಾನಿಸಲಾಗಿದೆ.
ಇದರ ಮುಂದುವರಿದ ಭಾಗವಾಗಿ ಆಗಸ್ಟ್ 4, 2026 (ಮಂಗಳವಾರ) ಸಂಜೆ 5.45 ಗಂಟೆಗೆ ಮೂಡಬಿದ್ರೆಯ ಆಳ್ವಾಸ್ ವಿದ್ಯಾಗಿರಿಯ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರ 75ನೇ ಜನ್ಮಸಂವತ್ಸರ ಸರಣಿ ಕಾರ್ಯಕ್ರಮದ ಅಂಗವಾಗಿ, ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಯಕ್ಷಗಾನ ಪ್ರದರ್ಶನ ಹಾಗೂ ಡಾ. ಮೋಹನ ಆಳ್ವ ಗೌರವಾಭಿನಂದನೆ ಕಾರ್ಯಕ್ರಮ ನಡೆಯಲಿದೆ. ದುಬೈ ಯಕ್ಷಗಾನ ಅಭ್ಯಾಸ ಕೇಂದ್ರದ ಕಲಾವಿದರು ಈ ವೇದಿಕೆಯಲ್ಲಿ ತಮ್ಮ ಕಲಾ ಪ್ರತಿಭೆಯನ್ನು ಅನಾವರಣಗೊಳಿಸಲಿದ್ದಾರೆ.
ಅಂತಿಮವಾಗಿ ಆಗಸ್ಟ್ 8, 2026 (ಶನಿವಾರ) ಮಧ್ಯಾಹ್ನ 1.20 ಗಂಟೆಗೆ ಮಂಗಳೂರಿನ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ಸಭಾಂಗಣದಲ್ಲಿ, ಶ್ರೀ ಮಂಗಳಾದೇವಿಯ ಸನ್ನಿಧಿಯಲ್ಲಿ ಗೆಜ್ಜೆಸೇವೆ ಹಾಗೂ ‘ಯಕ್ಷ ಶ್ರೀ ರಕ್ಷಾ’ ಗೌರವ ಪ್ರದಾನ ಸಮಾರಂಭ ವಿಜೃಂಭಣೆಯಿಂದ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಯಕ್ಷಗಾನ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಗುವುದು.
ಯಕ್ಷಗಾನದ ಪರಂಪರೆಯನ್ನು ಯುಎಇಯಲ್ಲಿ ಕಳೆದ ಹನ್ನೊಂದು ವರ್ಷಗಳಿಂದ ಯಶಸ್ವಿಯಾಗಿ ಬೆಳೆಸುತ್ತಿರುವ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ, ಇದೀಗ ತವರೂರಿನ ಪವಿತ್ರ ನೆಲದಲ್ಲಿಯೇ ತನ್ನ ವಿದ್ಯಾರ್ಥಿಗಳೊಂದಿಗೆ ಕಲಾಸೇವೆಯನ್ನು ಅರ್ಪಿಸುತ್ತಿರುವುದು ಕರಾವಳಿ ಯಕ್ಷಾಭಿಮಾನಿಗಳಲ್ಲಿ ವಿಶೇಷ ಸಂಭ್ರಮ ಮೂಡಿಸಿದೆ.
ಈ ಮೂರು ಕಾರ್ಯಕ್ರಮಗಳಿಗೆ ಯಕ್ಷಾಭಿಮಾನಿಗಳು, ಕಲಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಯ ಸಂಚಾಲಕರಾದ ದಿನೇಶ್ ಶೆಟ್ಟಿ ಕೊಟ್ಟಿಂಜರವರು ವಿನಂತಿಸಿದ್ದಾರೆ.

