‘ಕಾಲ್ನಡಿಗೆ ಜಾಥಾ’ವನ್ನು ಯಶಸ್ವಿಗೊಳಿಸೋಣ: ಕುತ್ಯಾರು ನವೀನ್ ಶೆಟ್ಟಿ
ದೇಶಾಭಿಮಾನವನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಸೆಪ್ಟೆಂಬರ್ 7, ಸೋಮವಾರ ಬೆಳಿಗ್ಗೆ ಗಂಟೆ 8.30ಕ್ಕೆ ಕುಂದಾಪುರ ಹೊಸ ಬಸ್ ನಿಲ್ದಾಣದಿಂದ ಚಾಲನೆಗೊಂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಸಂಜೆ ಗಂಟೆ 5.30ಕ್ಕೆ ಸಾಸ್ತಾನ ಪೇಟೆಯಲ್ಲಿ ಸಮಾಪನಗೊಳ್ಳಲಿರುವ “ವಂದೇ ಮಾತರಂ ಅಭಿಯಾನ”ದ ‘ಕಾಲ್ನಡಿಗೆ ಜಾಥಾ’ದಲ್ಲಿ ಜಿಲ್ಲೆಯಾದ್ಯoತ ರಾಷ್ಟ್ರ ಪ್ರೇಮಿಗಳು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡು ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಕರೆ ನೀಡಿದ್ದಾರೆ.
ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚನ್ನು ಜಾಗೃತಗೊಳಿಸಿದ, ದೇಶವಾಸಿಗಳ ಅಸ್ಮಿತೆ, ದೇಶದ ಅಖಂಡತೆ ಮತ್ತು ಆತ್ಮ ಗೌರವದ ಸಂಕೇತವಾಗಿರುವ ‘ವಂದೇ ಮಾತರಂ’ ಗೀತೆಗೆ 150 ಸಂವತ್ಸರಗಳನ್ನು ಪೂರೈಸಿರುವ ಸುಸಂದರ್ಭದಲ್ಲಿ ಕೇಂದ್ರ ಸರಕಾರ ಸಂಸತ್ ಅಧಿವೇಶನದಲ್ಲಿ ರಾಷ್ಟ್ರ ಗೀತೆಗೆ ಸಮನಾದ ಗೌರವವನ್ನು ಘೋಷಿಸಿರುವ ಕಾಲಘಟ್ಟದಲ್ಲಿ “ವಂದೇ ಮಾತರಂ ಅಭಿಯಾನ” ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ. ಈ ಬೃಹತ್ ಅಭಿಯಾನದಲ್ಲಿ ರಾಷ್ಟ್ರ ಭಕ್ತರ ಘೋಷಣೆಗಳು ಮುಗಿಲು ಮುಟ್ಟುವ ಮೂಲಕ ರಾಷ್ಟ್ರ ಗೌರವದ ಸಂದೇಶ ಪ್ರತಿಧ್ವನಿಸುವಂತಾಗಲಿ.
ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರ ಮುಂದಾಳತ್ವದಲ್ಲಿ ನಿವೃತ್ತ ಸೈನಿಕರು, ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸುವ ‘ವಂದೇ ಮಾತರಂ ಕಾಲ್ನಡಿಗೆ ಜಾಥಾ’ದಲ್ಲಿ ರಾಷ್ಟ್ರ ಪ್ರೇಮಿ ಸಾರ್ವಜನಿಕ ಬಂಧುಗಳು, ಪಕ್ಷದ ಪ್ರಮುಖರು, ವಿವಿಧ ಸ್ತರದ ಪದಾಧಿಕಾರಿಗಳು ಮತ್ತು ಕಾರ್ಯಕರ್ತ ಬಂಧುಗಳು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡು ‘ವಂದೇ ಮಾತರಂ ಅಭಿಯಾನ’ವನ್ನು ಯಶಸ್ವಿಗೊಳಿಸಬೇಕು ಎಂದು ಕುತ್ಯಾರು ನವೀನ್ ಶೆಟ್ಟಿ ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.

