ಮೂಡುಬಿದಿರೆ: ಆ. 27ರಿಂದ 31ರವರೆಗೆ 62ನೇ ವರ್ಷದ ಗಣೇಶೋತ್ಸವ ವೈಭವ

0
241

ಮೂಡುಬಿದಿರೆ: ಸಾರ್ವಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್ ಮೂಡುಬಿದಿರೆ ವತಿಯಿಂದ ಆ.27ರಿಂದ 31ರವರೆಗೆ 62ನೇ ವರ್ಷದ ಶ್ರೀ ಗಣೇಶೋತ್ಸವವು ಇಲ್ಲಿನ ಸಮಾಜಮಂದಿರದಲ್ಲಿ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ನಾರಾಯಣ ಪಿ.ಎಂ. ಸುದ್ದಿಗೋಷ್ಠಿಯಲ್ಲಿ ‌ ಇಂದು (ಆ. 23) ತಿಳಿಸಿದರು.
ಆ.27ರಂದು ಬೆಳಗ್ಗೆ 9.30ಕ್ಕೆ ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಉತ್ಸವಕ್ಕೆ ಚಾಲನೆ ನೀಡಲಿರುವರು, 10.15ಕ್ಕೆ ಅಲಂಗಾರಿನ ಈಶ್ವರ ಭಟ್ ಗಣಪತಿ ದೇವರ ವಿಗ್ರಹ ಪ್ರತಿಷ್ಠಾಪನೆ ಮಾಡಲಿರುವರು. ಪ್ರತಿದಿನ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಆ.30ರಂದು ನಡೆಯುವ ಧಾರ್ಮಿಕ ಸಭೆಯಲ್ಲಿ ಸಂಸದ ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ತಹಸೀಲ್ದಾರ್ ಶ್ರೀಧರ್ ಎಸ್. ಮುಂದಲಮನಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್, ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ್ ಭಾಗವಹಿಸುವರು ಎಂದರು.


ಉತ್ಸವದ ಹಿನ್ನೆಲೆಯಲ್ಲಿ ಪುರಸಭೆ ವತಿಯಿಂದ ಪೇಟೆಯಿಂದ ಅಲಂಗಾರುವರೆಗೆ ಮುಖ್ಯ ರಸ್ತೆಯನ್ನು ವಿದ್ಯುದ್ದೀಪಗಳಿಂದ ಶೃಂಗಾರಗೊಳಿಸಲಾಗುವುದು. ಐದು ದಿನವು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದ್ದು ವಿದ್ಯಾರ್ಥಿಗಳಿಗೆ ಪ್ರತ್ಯೇಕ ಊಟದ ಕೌಂಟರ್ ತೆರೆಯಲಾಗುವುದು ಎಂದು ಹೇಳಿದರು.
ಟ್ರಸ್ಟ್ ಉಪಾಧ್ಯಕ್ಷ ರಾಜರಾಂ ನಾಗರಕಟ್ಟೆ ಮಾತನಾಡಿ, ಶೋಭಾಯಾತ್ರೆ ರಾತ್ರಿ 11.30ರ ಮುಂಚಿತವಾಗಿ ಅಲಂಗಾರು ದೇವಸ್ಥಾನದ ದ್ವಾರ ಪ್ರವೇಶಿಸುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು. ಉಪಾಧ್ಯಕ್ಷ ಕೊರಗ ಶೆಟ್ಟಿ,‌ ಕೋಶಾಧಿಕಾರಿ ಚೇತನ್ ಕುಮಾರ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.

ಆ.26ರಂದು ಹಸಿರು ಹೊರೆಕಾಣಿಕೆ
ಸರ್ವಧರ್ಮದವರೊಂದಿಗೆ ಮೂಡುಬಿದಿರೆ ಹಬ್ಬವಾಗಿ ಆಚರಿಸುವ ಗಣೇಶೋತ್ಸವ ಆ.26ರಂದು ಬೆಳಗ್ಗೆ 10ಕ್ಕೆ ಎಂಸಿಎಸ್ ಸೊಸೈಟಿ ಎದುರು ಮೆರವಣಿಗೆಗೆ ಚಾಲನೆ ನೀಡಲಾಗುವುದು. ಬೆಳ್ಳಿಯ ರಥ, ದೇವರ ಪ್ರಭಾವಳಿಯನ್ನು ತರಲಾಗುವುದು. ಎಂಸಿಎಸ್ ಬ್ಯಾಂಕ್ ವಿಶೇಷ ಕರ್ತವ್ಯಾಧಿಕಾರಿ ಚಂದ್ರಶೇಖರ್ ಮೆರವಣಿಗೆಯ ನೇತೃತ್ವ ವಹಿಸಿದ್ದಾರೆ ಎಂದು ನಾರಾಯಣ ಪಿ.ಎಂ ತಿಳಿಸಿದರು.

ವರದಿ: ಜಗದೀಶ್‌ ಪೂಜಾರಿ ಕಡಂದಲೆ

LEAVE A REPLY

Please enter your comment!
Please enter your name here