ಬೈಂದೂರು: ಕೃತಕ ವಿಕೋಪ ಮತ್ತು ನೆರೆ ಪ್ರವಾಹ ಎದುರಿಸುವ ಅಣುಕು ಪ್ರದರ್ಶನ

0
121

ಬೈಂದೂರು: ಉಡುಪಿ ಜಿಲ್ಲಾಡಳಿತ, ಬೈಂದೂರು ತಾಲೂಕು ಆಡಳಿತ, ಅಗ್ನಿಶಾಮಕ ದಳ, ಮರವಂತೆ, ನಾವುಂದ, ಕಿರಿಮಂಜೇಶ್ವರ ಹಾಗೂ ನಾಡ ಗ್ರಾ.ಪಂ. ವತಿಯಿಂದ ಎನ್‌ಡಿಆರ್‌ಎಫ್ 10ನೇ ಬೆಟಾಲಿಯನ್ ಸಹಭಾಗಿತ್ವದಲ್ಲಿ ಪ್ರಾಕೃತಿಕ ವಿಕೋಪ ಮತ್ತು ನೆರೆ ಪ್ರವಾಹ ಎದುರಿಸುವುದು, ದೋಣಿ ಅವಘಡದಂತಹ ಘಟನೆಗಳು ನಡೆದಾಗ ಜನರು ಕೈಗೊಳ್ಳಬಹುದಾದ ಮುಂಜಾಗ್ರತ ಕ್ರಮಗಳ ಅಣುಕು ಪ್ರದರ್ಶನ ಮರವಂತೆಯ ಶ್ರೀವರಾಹ ಸ್ವಾಮಿ ದೇವಸ್ಥಾನದ ಸಮೀಪ ಸೋಮವಾರ ನಡೆಯಿತು.

ನೆರೆ ಬಂದಾಗ ಮನೆಯಲ್ಲಿಯೇ ಇರು ವಂತಹ ಮರದ ದಿಮ್ಮಿ, ವಾಹನಗಳ ಚಕ್ರಗಳನ್ನೆಲ್ಲ ಬಳಸಿಕೊಂಡು ಹೇಗೆ ಜೀವ ಉಳಿಸಿಕೊಳ್ಳಬಹುದು ಅನ್ನುವುದರ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಡಲಾಯಿತು.


ಕುಂದಾಪುರದ ಸಹಾಯಕ ಆಯುಕ್ತ ರಶ್ಮಿ ಎಸ್.ಆರ್. ಮಾತನಾಡಿ, ಪ್ರಾಕೃತಿಕ ವಿಕೋಪದ ವೇಳೆ ಯೋಚನೆ ಮಾಡದೆ ಕಾರ್ಯನಿರ್ವಹಿಸಿದರೆ ನಮ್ಮ ಪ್ರಾಣಕ್ಕೆ ಅಪಾಯ. ಆತಂಕ ಪರಿಸ್ಥಿತಿ ಎದುರಾದಾಗ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತಗಳು ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಮಾಡಿದಾಗ ಸರಿಯಾಗಿ ಪಾಲನೆ ಖಂಡಿತವಾಗಿ ಜೀವ ಉಳಿಸಲು ಸಾಧ್ಯ. ಈ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಿಸುವ ಮತ್ತು ಮಾಹಿತಿ ನೀಡುವ ಕಾರ್ಯಕ್ರಮಗಳು ನಡೆಯ ಬೇಕು. ಈ ದಿನದ ಈ ಅಣುಕು ಕಾತ್ಯಾಚರಣೆ ನಿಜವಾಗಿಯೂ ಅದ್ಭುತ ವಾಗಿತ್ತು ಎಂದವರು ಶ್ಲಾಘಿಸಿದರು.

ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ಮನ ಮುಟ್ಟೋ ರೀತಿಯಲ್ಲಿ ಪ್ರಾತ್ಯಕ್ಷತೆ ಮಾಡಲಾಯಿತು ಮೊದಲಿಗೆ ಆರು ಮಂದಿಯ ತಂಡವೊಂದು ಮೋಜು ಮಸ್ತಿ ಮಾಡುತ್ತಾ ದೋಣಿಯಲ್ಲಿ ಸೌಪರ್ಣಿಕಾ ನದಿಗೆ ಹೋಗುತ್ತಾರೆ. ನದಿಯ ಮಧ್ಯದಲ್ಲಿ ದೋಣಿಯಲ್ಲಿದ್ದ ಒಬ್ಬ ಕುಡಿತದ ಅಮಲಿ ನಲ್ಲಿ ನದಿಗೆ ಬೀಳುತ್ತಿದ್ದಂತೆಯೇ ದೋಣಿ ನಿಯಂತ್ರಣ ತಪ್ಪಿ ಪಲ್ಟಿಯಾಗುತ್ತದೆ. ಈ ಪೈಕಿ ಇಬ್ಬರು ಈಜಿ ದಡ ಸೇರಿದರೆ, ಇನ್ನುಳಿದವರನ್ನು ರಕ್ಷಣೆ ಮಾಡಿ ಎಂದು ಗೋಗರೆಯುತ್ತಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಎನ್‌ಡಿಆರ್‌ಎಫ್ ಪಡೆ ಸಿಬಂದಿ ಕ್ಷಿಪ್ರ ಕಾರ್ಯಾಚರಣೆ ಬೋಟಿನಲ್ಲಿ ತೆರಳಿ, ಮೂವರನ್ನು ರಕ್ಷಿಸುತ್ತದೆ. ಇನ್ನೊಬ್ಬರು ನೀರಿನಲ್ಲಿ ಮುಳುಗಿ ನಾಪತ್ತೆಯಾಗುತ್ತಾರೆ.

ಆ ಕೂಡಲೇ ಎನ್‌ಡಿಆರ್‌ಎಫ್‌ನ ಪರಿಣತ ಮುಳುಗು ತಜ್ಞರು ದೋಣಿ ಮುಳುಗಿದ ಸ್ಥಳಕ್ಕೆ ತೆರಳಿ ನೀರಿನಲ್ಲಿ ಮುಳುಗಿದ್ದ ಮತ್ತೊಬ್ಬರನ್ನು ಮೇಲಕ್ಕೆತ್ತಿ ದಡಕ್ಕೆ ತರುತ್ತಾರೆ. ದಡಕ್ಕೆ ತಂದ ವ್ಯಕ್ತಿಯ ಉಸಿರಾಟದ ಸಮಸ್ಯೆ ಕಂಡುಬರುತ್ತದೆ. ಕೂಡಲೇ ಆ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡಿ ಕೃತಕ ಉಸಿರಾಟದ ಮೂಲಕ ಉಪಚರಿಸುತ್ತಾರೆ. ಸ್ವಲ್ಪ ಚೇತರಿಕೆ ಕಂಡು ಬಂದಿದ್ದು ಕೂಡಲೇ ವೈದ್ಯರು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾಣಿಸುವ ಅಣುಕು ಕಾರ್ಯಾಚರಣೆಯ ಪ್ರತಿಯೊಂದು ಕ್ಷಣಗಳು ಮನಮುಟ್ಟುವಂತಿತ್ತು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಎಚ್. ರಾಮಚಂದ್ರಪ್ಪ , ನಿರೀಕ್ಷಕ ರವಿಶಂಕರ್, ಎನ್ ಡಿಆರ್‌ಎಫ್ ನಿರೀಕ್ಷಕ ಪ್ರದೀಪ ಕುಮಾರ್, ಜಿಲ್ಲಾ ಅಗ್ನಿಶಾಮಕ ದಳದ ವಿನಾಯಕ ಎಚ್. ಜಂಟಿ ನಿರ್ದೇಶಕ ವಿವೇಕ ಆರ್.. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪರಿಣಿತ ರವಿ ಒ., ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ ಗಂಗೊಳ್ಳಿ ಕರಾವಳಿ ಕಾವಲು ಪಡೆಯ ವೃತ್ತ ನಿರೀಕ್ಷಕ ವಸಂತ ಆಚಾರ್, ಉಪನಿರೀಕ್ಷಕಿ ಮುಕ್ತಾ ಬಾಯಿ, ಮರವಂತೆ ಗ್ರಾ.ಪಂ. ಅಧ್ಯಕ್ಷ ನಾಗರಾಜ ಪಟಗಾರ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಾದ ಗೀತಾ, ರಾಜೇಶ್, ಹರೀಶ್, ಗಣೇಶ್, ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಗಣೇಶ ಭಟ್, ಡಾ. ಶೋಭಾ ಭಾಗವಹಿಸಿದ್ದರು.

ಸ್ಥಳೀಯರು, ನಾವುಂದ ಸರಕಾರಿ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಪಾಲ್ಗೊಂಡಿದ್ದರು. ಎನ್ ಡಿ ಆರ್ ಎಫ್ ಸಿಬಂದಿ ಜಿ.ಎಲ್. ಆಕರ್ಷ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here