ಪೈವಳಿಕೆ:”ಮಾನಸಿಕ ಸ್ಥೆರ್ಯ ಅಚಲವಾದಗ ದಲಿತರು ಬಲಿತರಾಗುತ್ತಾರೆ. ಮುಂದಿನ ಜನಾಂಗವನ್ನು ಉನ್ನತ ವಿದ್ಯಾಭ್ಯಾಸವೆಂಬ ಅಸ್ತ್ರದಿಂದ ಬಲಿಷ್ಠವಾಗಿ ಕಟ್ಟಲು ಸಂಘಟನೆ ಅಡಿಪಾಯವನ್ನು ಹಾಕಬೇಕಿದೆ. ಪ್ರಸ್ತುತ ಸಮಾಜದೊಂದಿಗೆ ಸ್ಪರ್ಧಾತ್ಮಕವಾಗಿ ಸೆಟೆದು ನಿಲ್ಲಬೇಕು. ಡಾ. ಬಿ.ಆರ್ ಅಂಬೇಡ್ಕರರ ಆಶಯಗಳನ್ನು ಮುಖ್ಯ ಭೂಮಿಕೆಯಾಗಿ ಸ್ವೀಕರಿಸಿ ಮೂಲ ನಿವಾಸಿಗಳ ಧ್ವನಿ ಮಾರ್ಧನಿಸಲಿ” ಎಂದು ರಂಗಕರ್ಮಿ, ಚಿಣ್ಣರ ಚಿಲುಮೆ ಸಂಘಟಕ ಸಮಿತಿ ಕಾಸರಗೋಡು ಇದರ ನಿರ್ದೇಶಕರಾದ ಶಿಕ್ಷಕ ಅಶೋಕ್ ಕೊಡ್ಲಮೊಗರು ತಿಳಿಸಿದರು.
ಅವರು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ ಕೇರಳ ಮತ್ತು ಗ್ರಾಮೀಣ ಆಶ್ರಮ ಪೆರ್ನಾಲು ಉಡುಪಿ ಇದರ ಜಂಟಿ ಆಶ್ರಯದಲ್ಲಿ ಜರಗಿದ ‘ಕೊರಗ ಮಹಿಳೆಯರ ಸಬಲೀಕರಣ ‘ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಪೈವಳಿಕೆ ಕುಟುಂಬಶ್ರೀ ಸಭಾಂಗಣದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಸೇವಾ ನಿರತ ಕೊರಗ ಸಮುದಾಯದ ಕಾರ್ಯಕರ್ತರಾದ ಗೋಪಾಲ ಕಾರ್ಯಾಡ್ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಸಂಪನ್ಮೂಲ ವ್ಯಕ್ತಿಯಾಗಿ ರಂಗ ನಿರ್ದೇಶಕ ಶಿಕ್ಷಕ ಉದಯ ಸಾರಂಗ್ ಮಹಿಳೆಯರ ಸಬಲೀಕರಣ ಕಾರ್ಯಾಗಾರವನ್ನು ವಿವಿಧ ಮನೋರಂಜನೆ ಮನೋವೈಜ್ಞಾನಿಕತೆಯ ಮೂಲಕ ನಡೆಸಿಕೊಟ್ಟರು.ನೆರೆದ ಮಹಿಳೆಯರು ಉತ್ಸಾಹದಾಯಕವಾಗಿ ಪಾಲ್ಗೊಂಡು ಯಶಸ್ವಿಗೊಳಿಸಿದರು.
ವರದಿ: ತನುಜಶ್ರೀ ಗುವ್ವೇದಪಡ್ಪು