ಉಡುಪಿ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 108 ಆಂಬುಲೆನ್ಸ್ ಸೇವೆ ದಿನದ 24 ಗಂಟೆ ಬದಲಿಗೆ ಕೇವಲ 16 ಗಂಟೆ ಮಾತ್ರ ಸೇವೆ ನೀಡುತ್ತಿದ್ದು, ರೋಗಿಗಳು ತುರ್ತು ಸೇವೆ ಸಿಗದೆ ಪರದಾಡುವಂತಾಗಿದೆ.
108 ಆಂಬುಲೆನ್ಸ್ ದಿನದ 24 ಗಂಟೆ ಸೇವೆ ನೀಡುವ ಉದ್ದೇಶ ಹೊಂದಿದ್ದರೂ 1 ವರ್ಷದ ಹಿಂದೆ ರಾಜ್ಯಸರ್ಕಾರ 3 ಪಾಳಿ ಕೆಲಸ ನಿಯಮ ಜಾರಿಗೊಳಿಸಿದ ಬಳಿಕ ಸಮಸ್ಯೆ ಹೆಚ್ಚಾಗಿದೆ. ಖಾಸಗಿ ಕಂಪೆನಿ ಜೊತೆಗೆ ಆ್ಯಂಬುಲೆನ್ಸ್ ನಿರ್ವಹಣೆ ಜವಾಬ್ದಾರಿ ಒಪ್ಪಂದ ಹಿಂಪಡೆದ ನಂತರ ಅನೇಕ ಮಂದಿ ಸಿಬ್ಬಂದಿ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಆ್ಯಂಬುಲೆನ್ಸ್ ನಿರ್ವಹಣೆಗೆ ಸಿಬ್ಬಂದಿ ಕೊರತೆ ಎದುರಾಗಿದೆ. ತುರ್ತು ಸಂದರ್ಭದಲ್ಲಿ ಐದಾರು ಗಂಟೆಗಳು ಕಳೆದರೂ ಆಂಬುಲೆನ್ಸ್ ಬರುತ್ತಿಲ್ಲ.
ಬಡ ರೋಗಿಗಳನ್ನು ಜಿಲ್ಲಾಸ್ಪತ್ರೆಯಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸುವ ಅಗತ್ಯ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ 108 ಸೇವೆಗೆ ಸಿಗದಿದ್ದರೆ ದುಬಾರಿ ಹಣ ತೆತ್ತು ಖಾಸಗಿ ಆಂಬುಲೆನ್ಸ್ ಕಳುಹಿಸುವ ಅನಿವಾರ್ಯತೆ ಇದೆ. ಇದರಿಂದ ರೋಗಿಗಳು ದಾರಿ ಮಧ್ಯೆ ಪ್ರಾಣ ಬಿಡುವ ಅಪಾಯವಿದೆ.
ಲೆಕ್ಕಕ್ಕುಂಟು ಆಟಕ್ಕಿಲ್ಲ!
ಪ್ರಸ್ತುತ 108 ಸೇವೆ ಸರ್ಕಾರದ ವ್ಯಾಪ್ತಿಯಲ್ಲಿದ್ದು, 3 ಪಾಳಿಯಲ್ಲಿ 8 ಗಂಟೆಯಂತೆ 24 ಗಂಟೆ ಕರ್ತವ್ಯ ನಿರ್ವಹಿಸಬೇಕಾಗಿದೆ. ಆದರೆ ಸಿಬ್ಬಂದಿ ಕೊರತೆಯಿಂದ ಯಾವ ಪಾಳಿಯಲ್ಲೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಫೋನ್ ಮಾಡಿದರೆ ಆಂಬುಲೆನ್ಸ್ ಖಾಲಿ ಇಲ್ಲ ಅಥವಾ ತಾಂತ್ರಿಕ ದೋಷ ಎಂಬ ಸಬೂಬು ನೀಡಲಾಗುತ್ತಿದೆ.
ಉಡುಪಿ ಜಿಲ್ಲೆಯಲ್ಲಿ ಆರಂಭದಲ್ಲಿ 18 ಆಂಬುಲೆನ್ಸ್ ಗಳು ಕಾರ್ಯನಿರ್ವಹಿಸುತ್ತಿದ್ದು, ಪಾಳಿಯಲ್ಲಿ ನೀಡುತ್ತಿರುವುದರಿಂದ ತುರ್ತು ಸಂದರ್ಭದಲ್ಲಿ ಆರೇಳು ಅಂಬುಲೆನ್ಸ್ ಗಳು ಮಾತ್ರ ಲಭ್ಯವಿದೆ. ಇವುಗಳಲ್ಲಿ ತಾಂತ್ರಿಕ ದೋಷ ಅಥವಾ ಇನ್ನಿತರ ಕಾರಣಗಳಿಂದ ಕೆಲವು ಸೇವೆಗೆ ಸಿಗುತ್ತಿಲ್ಲ. ಹೀಗಾಗಿ ಶಿಫ್ಟ್ ವ್ಯವಸ್ತೆಯನ್ನು ಕೈ ಬಿಡಬೇಕು. ಎಲ್ಲಾ 18 ಆಂಬುಲೆನ್ಸ್ ಗಳು 24*7 ಲಭ್ಯವಾಗಬೇಕು.
ವಿಶು ಶೆಟ್ಟಿ ಅಂಬಲಪಾಡಿ, ಸಮಾಜಸೇವಕರು.
