ಚೀನಾ ಫ್ರೆಂಡ್ ಶಿಪ್ ಅಸೋಸಿಯೇಷನ್ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯಾಗಿ ಬಾಗಿ
ಬೆಂಗಳೂರು,ಅ.23; ಭಾರತ – ಚೀನಾ ಫ್ರೆಂಡ್ ಶಿಪ್ ಅಸೋಸಿಯೇಷನ್ ಕರ್ನಾಟಕದ ನಿಯೋಗ ಬೀಜಿಂಗ್ ತೆರಳುತ್ತಿದ್ದು, ನಗರದ ಯು.ಕೆ. ಲಿಖಿತಾ ಮತ್ತು ಜೆ. ಮನು ಜೋಡಿ ಅಲ್ಲಿ ಕುಚಿಪುಡಿ, ಕಥಕ್ ಮತ್ತು ಭರತನಾಟ್ಯ ಪ್ರದರ್ಶನ ನೀಡಲಿದೆ.
ಬಹುಮುಖ ನೃತ್ಯಕಲಾವಿದ ಮತ್ತು ಸಾಂಸ್ಕೃತಿಕ ರಾಯಭಾರಿ ಜೆ. ಮನು ಮತ್ತು ಲಿಖಿತಾ ಜೋಡಿ ನಾಳೆ [ಅ.24] ಗುರುವಾರ ಬೀಜಿಂಗ್ ತೆರಳುತ್ತಿದ್ದು, ಅಕ್ಟೋಬರ್ 26 ರಂದು ಭವ್ಯ ವೇದಿಕೆಯಲ್ಲಿ ತನ್ನ ಪ್ರದರ್ಶನದ ಮೂಲಕ ಭಾರತ – ಚೀನಾ ಸ್ನೇಹ ಬಾಂಧವ್ಯವನ್ನು ಬಲಪಡಿಸಲಿದೆ.
ಜೆ. ಮನು ಅವರು ಕುಚಿಪುಡಿ, ಕಥಕ್ ಮತ್ತು ಭರತನಾಟ್ಯ ಪ್ರವೀಣ. ವಿದುಷಿ ರೇಖಾ ಜಗದೀಶ, ಗುರು ಡಾ. ವೀಣಾ ಮೂರ್ತಿ ವಿಜಯ್, ಗುರು ರಾಧಾ ಶ್ರೀಧರ್ ಹಾಗೂ ಗುರು ಹರಿ ಚೇತನ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿರುವ ಅವರು ಮನೋಹರ ಭಾವಭಂಗಿ, ಲಯಬದ್ಧತೆಯ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇವರು ಈಗಾಗಲೇ ಭಾರತ, ಚೀನಾ, ಮಲೇಶಿಯಾ, ಶ್ರೀಲಂಕಾ, ಸಿಂಗಪುರ ಮತ್ತು ಯು.ಎ.ಇ ಸೇರಿದಂತೆ ಅನೇಕ ದೇಶಗಳಲ್ಲಿ ತಮ್ಮ ನೃತ್ಯಕಲೆಯ ಮೆರುಗು ತೋರಿದ್ದಾರೆ. ಅವರು ಚೀನಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಕ್ಕಳ ಪ್ರತಿಭಾ ಉತ್ಸವದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ದುಬೈಯಲ್ಲಿ ನಡೆದ ನೃತ್ಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದರು.
ಲಿಖಿತಾ ಯು.ಕೆ. ಪ್ರಸಿದ್ಧ ಭರತನಾಟ್ಯ ಕಲಾವಿದೆ, ನೃತ್ಯ ಕುಟೀರ (ಬೆಂಗಳೂರು) ಸಂಸ್ಥಾಪಕಿ ಮತ್ತು ಕಲಾ ನಿರ್ದೇಶಕಿ. ಅವರ ಸೃಜನಶೀಲತೆ, ಬಹುಮುಖತೆ, ಉತ್ಸಾಹ ಮತ್ತು ಶೈಲಿಯುಳ್ಳ ನೃತ್ಯಭಾವನೆ ಅವರು ಕಲಾರಂಗದಲ್ಲಿ ವಿಶಿಷ್ಟ ಸ್ಥಾನ ಗಳಿಸಲು ಕಾರಣವಾಗಿದೆ. ನೃತ್ಯಕಲೆಯ ಆಳವಾದ ಅರಿವಿನ ಬಯಕೆ ಮತ್ತು ಶ್ರದ್ಧೆಯಿಂದ ಮಾಡಿದ ಅಭ್ಯಾಸವು ಅವರನ್ನು ಅದ್ಭುತ ಕಲಾವಿದೆ, ಪ್ರೇರಣಾದಾಯಕ ಗುರು ಮತ್ತು ಸೃಜನಾತ್ಮಕ ನೃತ್ಯ ನಿರ್ದೇಶಕಿಯನ್ನಾಗಿ ರೂಪಿಸಿದೆ.

