ಉಡುಪಿ: ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿಿ ಕ್ಷೇತ್ರದ ಗಾಯತ್ರಿ ಧ್ಯಾನಪೀಠದ ಶ್ರೀ ಕಪಿಲ ಮಹರ್ಷಿ ಸಾನ್ನಿಧ್ಯದಲ್ಲಿ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಪುರಾಣ ಕಾಲದಲ್ಲಿ ಋಷಿ ಮುನಿಗಳು ತಮ್ಮ ತಪ:ಶಕ್ತಿಯಿಂದ ಒಲಿಸಿಕೊಂಡ ಕಾಮಧೇನುವಿನ ಪ್ರತಿರೂಪವನ್ನು ಸ್ಥಾಪನೆಗೊಳಿಸಲಾಯಿತು.
ಬೇಡಿದ್ದನ್ನು ಕರುಣಿಸುವಂತಹ ಮಹಾನ್ ಶಕ್ತಿಯುಳ್ಳ, ಗತಕಾಲದ ಇತಿಹಾಸವನ್ನು ಸಾರುವಂತೆ ಒಂದೇ ಹಲಸಿನ ಮರದಲ್ಲಿ ಕೆತ್ತಲ್ಪಟ್ಟ ಐದು ಮುಕ್ಕಾಲು ಅಡಿ ಎತ್ತರದ ಕಾಮಧೇನುವಿನ ಸ್ಥಾಪನೆ ಬುಧವಾರ ಗೋ ಪೂಜೆಯ ಪರ್ವಕಾಲದಲ್ಲಿ ನೆರವೇರಿತು.
ಸ್ಥಾಪನಾ ಪೂರ್ವಭಾವಿ ಧಾರ್ಮಿಕ ಕಾರ್ಯಕ್ರಮವಾಗಿ ಮಂಗಳವಾರ ರಾತ್ರಿ ಭೂ ಶುದ್ದಿ ಪ್ರಕ್ರಿಯೆಯಾಗಿ ವಾಸ್ತು ಹೋಮ, ಭೂ ವರಾಹ ಹೋಮ, ರಜತ ಕಲಶ ಪ್ರತಿಷ್ಠಾಪನೆ, ಅಧಿವಾಸ ಪೂಜೆ ನೆರವೇರಿಸಿ ಮಾರನೆ ದಿನ ಬೆಳಗ್ಗೆ ಆದ್ಯ ಗಣಪತಿಯಾಗ , ಸ್ವಸ್ತಿ ಪುಣ್ಯಹ ವಾಚನ, ಗೋ ಸೂಕ್ತ ಹೋಮ, ನವಕಲಶ ಪ್ರಧಾನ ಹೋಮ, ಕಲಶಾ ಅಭಿಷೇಕ, ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ ಪ್ರಸನ್ನ ಪೂಜೆ ಪ್ರಸಾದ ವಿತರಣೆ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರಗಿತು.
ಗೋವನ್ನು ನಿತ್ಯ ನೋಡುವುದರಿಂದ, ಅವುಗಳ ಸೇವೆ ಮಾಡುವುದರಿಂದ ದೇವಾನುದೇವತೆಗಳು ನಮ್ಮನ್ನು ಆಶೀರ್ವದಿಸುವುದರ ಮೂಲಕ ನಮ್ಮ ದುಃಖ-ದುಮ್ಮಾನಗಳು ದೂರವಾಗುತ್ತದೆ. ಸನಾತನ ಧಾರ್ಮಿಕ ನಂಬಿಕೆಗಳ ಪ್ರಕಾರ ಮುಕ್ಕೋೋಟಿ ದೇವಾನುದೇವತೆಗಳು ಗೋವಿನ ಮೈಯಲ್ಲಿ ನೆಲೆಸಿದ್ದಾರೆ. ಈ ನೆಲೆಯಲ್ಲಿ ಗೋಪೂಜೆಯ ಪರ್ವಕಾಲದಲ್ಲಿ ಮುಖದಲ್ಲಿ ಸ್ತ್ರೀರೂಪವನ್ನು ಹೋಲುವ, ಗೋಮಾತೆಯ ದೇಹವಿರುವ ಮನೋವಾಂಛೆಯನ್ನು ಈಡೇರಿಸಲಿರುವ ಕರು ಸಹಿತವಾದ ಆಕಳಾದ ಕಾಮಧೇನುವನ್ನು ವೇಮೂ ವಿಖ್ಯಾತ್ ಭಟ್, ವೇಮೂ ರಾಘವೇಂದ್ರ ಭಟ್, ಶ್ರೀನಿವಾಸ ಹೆಕ್ಕಡ್ಕ, ವಿಜಯ ಭಟ್ ನೇತೃತ್ವದಲ್ಲಿ ಸ್ಥಾಪನೆ ಮಾಡಲಾಯಿತು.
ಕ್ಷೇತ್ರದ ಅಲಂಕಾರ ತಜ್ಞ ಆನಂದ ಬಾಯರಿ ಕಾಮಧೇನುವನ್ನು ಅಲಂಕರಿಸಿದ್ದರು. ಪ್ರಧಾನ ಅರ್ಚಕ ಅನೀಶ್ ಆಚಾರ್ಯ, ಸ್ವಸ್ತಿಕ್ ಆಚಾರ್ಯ, ವೇಮೂ ಡಾ ಶ್ರೀವತ್ಸ ಅಡಿಗ ಪೂಜಾ ಪ್ರಕ್ರಿಯೆಯಲ್ಲಿ ಸಹಕರಿಸಿದ್ದರು ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.

