ಮೂಡುಬಿದಿರೆ : ಮಾಜಿ ಸೈನಿಕರ ವೇದಿಕೆಯಿಂದ ಯುದ್ಧ ಸ್ಮಾರಕ – ಜ.30 ರಂದು ಭೂಮಿ ಪೂಜೆ ಮಾಜಿ ಸೈನಿಕರ ಹತ್ತು ವರ್ಷಗಳ ನಿರಂತರ ಪರಿಶ್ರಮಕ್ಕೆ ಫಲ ಸಿಕ್ಕಿದ್ದು , ಮೂಡುಬಿದಿರೆಯ ಮಾರ್ಪಾಡಿ ಗ್ರಾಮದ ಸರ್ವೆ ನಂಬರ್ 259/1ರಲ್ಲಿ ಮಂಜೂರಾಗಿರುವ 0.16 ಎಕ್ರೆ ಜಮೀನಿನಲ್ಲಿ ಅದ್ದೂರಿ ಯುದ್ಧ ಸ್ಮಾರಕ ನಿರ್ಮಾಣಗೊಳ್ಳಲಿದೆ. ಜನವರಿ 30 ರಂದು ಅಪರಾಹ್ನ 4 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಆಂಧ್ರಪ್ರದೇಶದ ರಾಜ್ಯಪಾಲರು, ಮೂರು ಧರ್ಮಗಳ ಗುರುಗಳು ಭೂಮಿ ಪೂಜೆ ನೆರವೇರಿಸಲಿದ್ದಾರೆ.
ಈ ಕುರಿತು ಮಾಜಿ ಸೈನಿಕರ ವೇದಿಕೆಯ ಅಧ್ಯಕ್ಷ ವಿಜಯ್ ಫೆರ್ನಾಂಡಿಸ್ ವಿವರವಾದ ಮಾಹಿತಿಯನ್ನು ಸುದ್ದಿಗೋಷ್ಠಿಯ ಹಂಚಿಕೊಂಡಿದ್ದಾರೆ. ಯುದ್ಧ ಸ್ಮಾರಕದ ನಿರ್ಮಾಣಕ್ಕೆ ಈಗಾಗಲೇ ಕರಡು ಸಿದ್ಧವಾಗಿದ್ದು, ಆಳ್ವಾಸ್ ಸಂಸ್ಥೆಯ ಮುಖ್ಯಸ್ಥರಾದ ಡಾ. ಮೋಹನ್ ಆಳ್ವ ಅವರು ಗೌರವಾಧ್ಯಕ್ಷರಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ಉಮನಾಥ್ ಕೋಟ್ಯಾನ್, ವಿ. ಸುನಿಲ್ ಕುಮಾರ್, ಮಾಜಿ ಶಾಸಕ ಅಭಯಚಂದ್ರ ಜೈನ್, ಮಿಥುನ್ ರೈ ಸೇರಿದಂತೆ ಹಲವಾರು ಉದ್ಯಮಿಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ ಎಂದರು. ವೇದಿಕೆಯ ಕಾರ್ಯದರ್ಶಿ ಭಾಸ್ಕರ್, ಕೋಶಾಧಿಕಾರಿ ವಾಸುದೇವ ಶೇರಿಗಾರ್, ಸ್ಥಾಪಕ ಅಧ್ಯಕ್ಷ ರಾಮಚಂದ್ರ ನಾಯಕ್ ಹಾಗೂ ಸ್ಥಾಪಕ ಸದಸ್ಯ ಸದಾಶಿವ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.



