ಕುಂದಾಪುರ: ಕಳೆದ ಮೂರು ದಿನಗಳಿಂದ ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಯ ಗಡಿಭಾಗದ ಗ್ರಾಮ ಗಳಲ್ಲಿ ಬೀಡುಬಿಟ್ಟಿದ್ದ ಒಂಟಿ ಸಲಗವನ್ನು ಸೆರೆ ಹಿಡಿಯುವುದರಲ್ಲಿ ಅರಣ್ಯ ಇಲಾಖೆ ಕೊನೆಗೂ ಯಶಸ್ವಿಯಾಗಿದೆ.
ಗುರುವಾರ ಸಂಜೆ ಸುಮಾರು 6 ಗಂಟೆಯ ವೇಳೆಗೆ ಸಿದ್ದಾಪುರ ಸಮೀಪದ ಹೆನ್ನಾಬೈಲಿನ ಉರಪಾಲ್ ಎಂಬಲ್ಲಿ ಇಲಾಖೆಯ ಅರವಳಿಕೆ ತಜ್ಞರು ನೀಡಿದ್ದ ಅರವಳಿಕೆ ಮದ್ದಿಗೆ ಸ್ಪಂದಿಸಿರುವ ಗಜರಾಜ ಧರಶಾಹಿಯಾಗಿದೆ. ಬಳಿಕ ಆರು ಆನೆಗಳ ಸಹಕಾರದಲ್ಲಿ ರಕ್ಷಣಾ ಕಾರ್ಯ ನಡೆಸಲಾಗಿದೆ
ಮಂಗಳವಾರ ಸಂಜೆಯ ಬಳಿಕ ಬಾಳೆಬರೆ-ಸಿದ್ದಾಪುರ ಮಾರ್ಗವಾಗಿ ಘಾಟಿಯಿಂದ ಕೆಳಕ್ಕೆ ಬಂದಿದ್ದ ಕಾಡಾನೆಯ ಚಲನವಲನಗಳನ್ನು ರೆಡಿಯೋ ಕಾಲರ್ ಹಾಗೂ ಜಿಪಿಎಸ್ ತಂತ್ರಜ್ಞಾನದ ಮೂಲಕ ತಿಳಿದುಕೊಳ್ಳುತ್ತಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಕಾಡಾನೆಯನ್ನು ಸೆರೆ ಹಿಡಿಯಲು ಕಾರ್ಯತಂತ್ರವನ್ನು ರೂಪಿಸಿದ್ದರು.
ಒಂಟಿ ಸಲಗನನ್ನು ವಶಕ್ಕೆ ಪಡೆದುಕೊಳ್ಳುವ ಕಾರ್ಯಾಚರಣೆಯ ಮೊದಲ ಭಾಗವಾಗಿ ಅರವಳಿಕೆ ತಜ್ಞರನ್ನು ಹಾಗೂ ಮೂರು ಪಳಗಿದ ಆನೆಗಳನ್ನು, ಸಕ್ರೆಬೈಲು ಆನೆ ಬಿಡಾರದಿಂದ ತರಿಸಲಾಗಿತ್ತು. ಗುರುವಾರ ಮಧ್ಯಾಹ್ನ ವೇಳೆಗೆ ಕಾರ್ಯಾಚರಣೆಗಾಗಿ ಮೂರು ವಾಹನದ ಮೂಲಕ ಗುರುವಾರ ಸಿದ್ದಾಪುರಕ್ಕೆ ಬಂದಿದ್ದ ಬಾಲಣ್ಣ ಸೋಮಣ್ಣ ಹಾಗೂ ಬಹದ್ದೂರು ಹೆಸರಿನ ಮೂರು ಪಳಗಿಸಿದ ಆನೆಗಳನ್ನು ಕರೆತರಲಾಯಿತು.
ಸಿದ್ದಾಪುರದಿಂದ ಹೆನ್ನಾಬೈಲ್ ಮೂಲಕ ಗೆದ್ದೋಡಿಗೆ ಸಾಗುವ ದಾರಿಯನ್ನು ಸಾರ್ವಜನಿಕ ಪ್ರವೇಶ ನಿರ್ಬಂಧ ಮಾಡಿ ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು. ರಾಜ್ಯ ಹೆದ್ದಾರಿಯನ್ನು ಸುಮಾರು 1.30 ಗಂಟೆಗಳ ಕಾಲ ಸಂಚಾರ ನಿರ್ಬಂಧ ಮಾಡಲಾಗಿತ್ತು. ಕಾರ್ಯಾಚರಣೆ ನಡೆಯುವ ಪರಿಸರದಲ್ಲಿ ನಿಷೇಧಾಜ್ಞೆ ವಿಧಿಸಲಾಗಿತ್ತು.
ಸಂಜೆಯ 5 ಗಂಟೆಯ ವೇಳೆಗೆ ಮತ್ತಿಬೇರು ಸಮೀಪದ ಉರಾಪಾಲ್ ಎಂಬಲ್ಲಿ ಆನೆಯ ನಿಖರ ಇರುವಿಕೆ ಯನ್ನು ಪತ್ತೆ ಮಾಡಿದ್ದ ಶಿವಮೊಗ್ಗದ ಡಾ.ಎಸ್.ಕಲ್ಲಪ್ಪ ನಾಗರಹೊಳೆಯ ಡಾ.ರಮೇಶ್ ಹಾಗೂ ಮಂಗಳೂರಿನ ಡಾ.ಯಶಸ್ವಿ ಅವರುಗಳಿದ್ದ ಕಾರ್ಯಾಚರಣೆಯ ವೈದ್ಯರ ತಂಡ ನೀಡಿದ್ದ ಅರವಳಿಕೆ ಮದ್ದಿಗೆ ಗಜರಾಜ ನಿದ್ರಾವಸ್ಥೆಗೆ ಜಾರಿದ್ದಾನೆ.
ಕಾಡಾನೆಯಿಂದ ಯಾರಿಗೂ ತೊಂದರೆಯಾಗಬಾರದು ಎನ್ನುವ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡಿದ್ದ ಅರಣ್ಯ ಇಲಾಖೆಯ ಮನವಿ ಸ್ಪಂದಿಸಿ ಹೊಸಂಗಡಿ, ಸಿದ್ದಾಪುರ ಹಾಗೂ ಕಮಲಶಿಲೆ ಭಾಗದ ಅಂಗನ ವಾಡಿ ಕೇಂದ್ರ ಹಾಗೂ ಎಸ್ಎಸ್ಎಲ್ಸಿ ವರೆಗಿನ ಶಾಲೆಗಳಿಗೆ ಬುಧವಾರ ಹಾಗೂ ಗುರುವಾರ ರಜೆ ಸಾರಲಾಗಿತ್ತು. ಆನೆ ಇರುವಿಕೆ ಪತ್ತೆಯಾದ ಹೆನ್ನಾಬೈಲು ಹಾಗೂ ಆಸುಪಾಸಿನ ಪ್ರದೇಶದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿತ್ತು. ಕಾರ್ಯಾಚರಣೆ ನಡೆಯುವ ವೇಳೆ ಈ ಪರಿಸರದಲ್ಲಿ ಅಘೋಷಿತ ಬಂದ್ನಂತಹ ವಾತಾವರಣ ಇತ್ತು.
ಈ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳು ಪೋಲಿಸ್ ಅಧಿಕಾರಿಗಳು, ಜನಪ್ರತಿನಿಧಿಗಳು, ಸಂಬಂಧಪಟ್ಟ ವಿವಿಧ ಇಲಾಖೆಯ ಅಧಿಕಾರಿಗಳು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.