ವೃತ್ತಿಯೊಂದಿಗೆ ಪ್ರವೃತ್ತಿಯಿದ್ದಾಗ ವ್ಯಕ್ತಿ ಪರಿಪೂರ್ಣ – ಎಸ್ ಎಸ್ ನಾಯಕ್

0
10

ಮನುಷ್ಯನಿಗೆ ತನ್ನ ವೃತ್ತಿಯೊಂದಿಗೆ ಆಸಕ್ತಿಯ ಪ್ರವೃತ್ತಿಯಿದ್ದರೆ ಅದು ಉಲ್ಲಾಸ ಮತ್ತು ಲವಲವಿಕೆಗೆ ಕಾರಣವಾಗಿ ವ್ಯಕ್ತಿತ್ವ ಬೆಳಗುತ್ತದೆ ಎಂದು ಬ್ಯುಸಿನೆಸ್ ಟಾನಿಕ್ ಖ್ಯಾತಿಯ ಸಂಘಟಕ ಸಿ ಎ ಎಸ್ ಎಸ್ ನಾಯಕ್ ನುಡಿದರು.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ವತಿಯಿಂದ ಹಿರಿಯ ಸಂಘಟಕ / ಸಾಹಿತಿ ಮನೆ ಭೇಟಿ ಕಾರ್ಯಕ್ರಮದನ್ವಯ ಅವರ ಮನೆಗೆ ತೆರಳಿ, ಪರಿಷತ್ತಿನ ವತಿಯಿಂದ ಸನ್ಮಾನಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು. ಎಲ್ಲೆಲ್ಲಿಯೂ ಗುರುತಿಸುವಿಕೆ ಲಭಿಸುತ್ತದೆ , ಅದು ಸಂತೋಷವೇ , ಆದರೆ ಮನೆಯಲ್ಲಿಯೇ ಸನ್ಮಾನವೆಂದರೆ ಅದು ತುಂಬಾ ವಿಶೇಷವೇ.

ಸನ್ಮಾನದಿಂದ ನಮ್ಮ ಜವಾಬ್ದಾರಿ ಇನ್ನಷ್ಟು ಹೆಚ್ಚುತ್ತದೆ. ನಿರಂತರ ಚಿಂತನೆ , ಪರಿಶ್ರಮ ಹಾಗೂ ಸತ್ಸಂಕಲ್ಪದಿಂದ ಏನನ್ನೂ ಸಾಧಿಸಬಹುದು ಎಂದು ವಿವರಿಸಿ ಸುಭಾಷಿತಗಳ ಉದಾಹರಣೆಗಳನ್ನಿತ್ತರು. ಘಟಕದ ಅಧ್ಯಕ್ಷ ಮಂಜುನಾಥ ಎಸ್. ರೇವಣ್ಕರ್ ಅಭಿನಂದನೆಯ ನುಡಿಗಳನ್ನಾಡಿದರು. ಗೌ. ಕಾರ್ಯದರ್ಶಿ
ಡಾ.ಮುರಲೀಮೋಹನ್ ಚೂಂತಾರು ಪ್ರಸ್ತಾಪಿಸಿದರು. ಇನ್ನೋರ್ವ ಗೌ. ಕಾರ್ಯದರ್ಶಿ ಗಣೇಶ್ ಪ್ರಸಾದ್ ಜೀ ಸ್ವಾಗತಿಸಿದರು. ಕೋಶಾಧಿಕಾರಿ ಎನ್. ಸುಬ್ರಾಯ ಭಟ್ ನಿರೂಪಿಸಿದರು.

ಡಾ.ಮೀನಾಕ್ಷಿ ರಾಮಚಂದ್ರ ಪ್ರಾರ್ಥಿಸಿದರು. ಎಸ್ ಎಸ್ ನಾಯಕ್ ಅವರ ಪತ್ನಿ ಸಂಧ್ಯಾ ನಾಯಕ್ , ಕುಟುಂಬದ ಸದಸ್ಯರು , ಜಿಲ್ಲಾ ಸಮಿತಿಯ ಸನತ್ ಕುಮಾರ್ ಜೈನ್ , ಡಾ ರಾಜಶ್ರೀ ಮೋಹನ್ ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು.