ಏ.6 : ಜಿಲ್ಲೆಯಾದ್ಯಂತ ಬಿಜೆಪಿ ಸ್ಥಾಪನಾ ದಿನಾಚರಣೆಗೆ ಕುತ್ಯಾರು ನವೀನ್ ಶೆಟ್ಟಿ ಕರೆ

0
19

ಜಿಲ್ಲಾ ಕಾರ್ಯ ತಂಡದ ಸಭೆ

ರಾಷ್ಟ್ರ ನಿರ್ಮಾಣದಲ್ಲಿ ಸಮರ್ಪಿಸಿಕೊಂಡಿರುವ ವಿಶ್ವದ ಅತೀ ದೊಡ್ಡ ರಾಜಕೀಯ ಪಕ್ಷ ಭಾರತೀಯ ಜನತಾ ಪಾರ್ಟಿಯ ಸ್ಥಾಪನಾ ದಿನವನ್ನು ಏ.6ರಂದು ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಕರೆ ನೀಡಿದರು.

ಅವರು ಜಿಲ್ಲಾ ಕಛೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯ ತಂಡದ ಸಭೆಯ ಅಧ್ಯಕ್ಷತೆ ವಹಿಸಿ, ನೂತನ ಮಂಗಳೂರು ವಿಭಾಗ ಪ್ರಭಾರಿ ಭಾರತೀಶ್ ಅವರನ್ನು ಜಿಲ್ಲಾ ಬಿಜೆಪಿ ವತಿಯಿಂದ ಶಾಲು ಹೊದೆಸಿ ಅಭಿನಂದಿಸಿ ಮಾತನಾಡಿದರು.

ಏ.6ರಂದು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರೂ ತಮ್ಮ ಮನೆಯ ಮೇಲೆ ಬಿಜೆಪಿ ಧ್ವಜವನ್ನು ಹಾರಿಸುವ ಜೊತೆಗೆ ಜಿಲ್ಲೆಯ ಎಲ್ಲಾ 1,112 ಬೂತ್ ಗಳ ಅಧ್ಯಕ್ಷರು ತಮ್ಮ ಮನೆಯ ಮೇಲೆ ಪಕ್ಷದ ಧ್ವಜವನ್ನು ಹಾರಿಸಿ, ಬೂತ್ ಸಮಿತಿ ಸಭೆಯನ್ನು ಆಯೋಜಿಸಬೇಕು. ಪಕ್ಷದ ಸ್ಥಾಪನೆ, ಇತಿಹಾಸ ಮತ್ತು ಸಾಧನೆಗಳ ಬಗ್ಗೆ ಬೆಳಕು ಚೆಲ್ಲುವ ಕಾರ್ಯಕ್ರಮ‌ವನ್ನು ಆಯೋಜಿಸುವ ಸಹಿತ ಪಕ್ಷದ ಹಿರಿಯರನ್ನು ಗೌರವಿಸುವ ಮೂಲಕ ಸ್ಥಾಪನಾ ದಿನವನ್ನು ಭಾವನಾತ್ಮಕವಾಗಿ ಸಂಭ್ರಮದಿಂದ ಆಚರಿಸಬೇಕು ಎಂದರು.

ಏ.14ರಂದು ಸಂವಿಧಾನ ಶಿಲ್ಪಿ ಡಾ! ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯನ್ನು ಜಿಲ್ಲೆಯ ಎಲ್ಲಾ ಬೂತ್ ಗಳಲ್ಲಿ ವ್ಯವಸ್ಥಿತವಾಗಿ ಆಚರಿಸುವ ಜೊತೆಗೆ ಅಂಬೇಡ್ಕರ್ ಅವರ ಪ್ರತಿಮೆಗಳ ಸ್ವಚ್ಛತೆ ಮತ್ತು ಹಾರಾರ್ಪಣೆಗೆ ಆದ್ಯತೆ ನೀಡಬೇಕು. ಪಕ್ಷದ ಕಾರ್ಯ ಚಟುವಟಿಕೆಗಳ ಜೊತೆಗೆ ಪ್ರಶಿಕ್ಷಣ ವರ್ಗ ಹಾಗೂ ಎಸ್ಐಆರ್ ಪ್ರಕ್ರಿಯೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸದೃಢ ಪಕ್ಷ ಸಂಘಟನೆಗೆ ಬದ್ಧತೆಯಿಂದ ಶ್ರಮಿಸಬೇಕು ಎಂದು ಅವರು ತಿಳಿಸಿದರು.

ಮಂಗಳೂರು ವಿಭಾಗ ಪ್ರಭಾರಿ ಭಾರತೀಶ್ ಕೊಡಗು ಅವರು ಎಸ್ಐಆರ್ ಅಭಿಯಾನ, ಪ್ರಶಿಕ್ಷಣ ವರ್ಗ ಸಹಿತ ಪಕ್ಷದ ಸಂಘಟನಾತ್ಮಕ ವಿಚಾರಗಳ ಕುರಿತು ವಿಸ್ತ್ರತ ಮಾಹಿತಿ ನೀಡಿದರು.

ಮಾ.29ರ ‘ಮನ್ ಕೀ ಬಾತ್’ ವೀಕ್ಷಣೆಯ ವರದಿ ಅಪ್ಲೋಡ್ ಪ್ರಕ್ರಿಯೆಯಲ್ಲಿ 100% ಸಾಧನೆಗೈದಿರುವ ಮಂಡಲಗಳಿಗೆ ಅಭಿನಂದನೆ ಸಲ್ಲಿಸಲಾಯಿತು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನಾಯಕ್ ಮಂಡಲವಾರು ಸಂಘಟನಾತ್ಮಕ ಚಟುವಟಿಕೆಗಳ ವರದಿ ಸಂಗ್ರಹಿಸಿದರು.

ಪಕ್ಷದ ಪ್ರಮುಖರು, ಬಿಜೆಪಿ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪ್ರಕೋಷ್ಠಗಳ ಸಂಚಾಲಕರು, ಬಿಎಲ್ಎ ಮತ್ತು ಪ್ರಶಿಕ್ಷಣ ತಂಡದ ಸದಸ್ಯರು ಉಪಸ್ಥಿತರಿದ್ದರು.

ಜಿಲ್ಲಾ ಪ್ರಕೋಷ್ಠಗಳ ಸಹ ಸಂಯೋಜಕ ಶಂಕರ ಅಂಕದಕಟ್ಟೆ ವಂದೇ ಮಾತರಂ ಹಾಡಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಿರಣ್ ಕುಮಾರ್ ಬೈಲೂರು ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ಕಾರ್ಯಕ್ರಮ ನಿರೂಪಿಸಿ, ಜಿಲ್ಲಾ ಕಾರ್ಯದರ್ಶಿ ಉಮೇಶ್ ಎ. ನಾಯ್ಕ್ ವಂದಿಸಿದರು.

LEAVE A REPLY

Please enter your comment!
Please enter your name here