ಉಡುಪಿ: ಯುಗದ ದೊಡ್ಡ ಜ್ಞಾನಿ ಕೃತಕ ಬುದ್ಧಿಮತ್ತೆ(ಎಐ). ಅದು ನಮಗೆ ವಿನಮ್ರತೆಯನ್ನು ಕಲಿಸಿಕೊಡುತ್ತದೆ. ಅದನ್ನು ನಾವು ಮೈಗೂಡಿಸಿಕೊಳ್ಳಬೇಕು. ಸದ್ಯ ಫೋಟೋಗ್ರಫಿ ಕ್ಷೇತ್ರದಲ್ಲಿ ಎಐ ನಮಗೆ ಬಂಧನ ಎನಿಸಿದರೂ ಅದನ್ನು ಮೀರಿದರೆ ಅದು ನಂದನ ಆಗುವುದರಲ್ಲಿ ಎರಡೂ ಮಾತಿಲ್ಲ ಎಂದು ಮಣಿಪಾಲ ಸ್ಕೂಲ್ ಆಫ್ ಕಮ್ಯುನಿಕೇಶನ್ನ ಪ್ರೊಫೆಸರ್ ಆಫ್ ಪ್ರಾಕ್ಟೀಸ್ ಸತ್ಯಬೋಧ ಜೋಶಿ ಹೇಳಿದ್ದಾರೆ.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಶ್ರಯದಲ್ಲಿ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ಉಡುಪಿ ಪತ್ರಿಕಾ ಭವನದಲ್ಲಿ ಬುಧವಾರ ಆಯೋಜಿಸಲಾದ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಸದಸ್ಯರ ಸುದ್ದಿ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ, ‘ಡಿಜಿಟಲ್- ಎಐ ಅಡಕತ್ತರಿ ನಡುವೆ ಛಾಯಾಗ್ರಹಣ’ ವಿಷಯದ ಕುರಿತು ಉಪನ್ಯಾಸ ನೀಡಿದರು.
ಫೋಟೋಗ್ರಫಿಯಲ್ಲಿನ ಹೊಸ ಹೊಸ ತಂತ್ರಜ್ಞಾನವು ನಮಗೆ ಹೊಸ ಜವಾಬ್ದಾರಿಯನ್ನು ನೀಡುತ್ತದೆ. ಇದೀಗ ಬಂದಿರುವ ಎಐ ಕೂಡ ನಮಗೆ ಹೊಸತನ್ನು ಕಲಿಯಲು ಸವಾಲು ನೀಡುತ್ತಿದೆ. ಎಐ ಸರಿಯಾಗಿ ಬಳಸಿ ಕೊಂಡರೇ ಅನುಕೂಲಗಳೇ ಜಾಸ್ತಿ. ಎಐ ೧೦ ಹೆಜ್ಜೆ ಮುಂದಿಟ್ಟರೆ ನಾವು ೧೦೦ ಹೆಜ್ಜೆ ಮುಂದೆ ಹೋಗಬೇಕಾಗುತ್ತದೆ. ಇದೇ ನಮ್ಮ ಮುಂದೆ ಇರುವ ಸವಾಲುಗಳು ಎಂದರು.
ಕೃತಕ ಬುದ್ಧಿಮತ್ತೆಯ ಮೂಲಕ ನಮಗೆ ಕಡಿಮೆಯಾಗಿರುವ ಸಿಗುವ ತಂತ್ರಜ್ಞಾನದ ಹಿಂದೆ ಬಹಳ ದೊಡ್ಡ ಬಂಡವಾಳ ಇರುತ್ತದೆ. ಇದು ಮುಂದಿನ ಹಂತ ತಲುಪಿದ ಬಳಿಕ ಸಾಕಷ್ಟು ದುಬಾರಿ ಆಗುತ್ತ ಹೋಗುತ್ತದೆ. ಯಾವುದೇ ರೀತಿಯ ತಂತ್ರಜ್ಞಾನ ಬಂದರೂ ಅದನ್ನು ನಾವು ಯಾವ ರೀತಿ ಬಳಸಿಕೊಳ್ಳುತ್ತೇವೆ ಎಂಬುದು ಮುಖ್ಯ. ನಿತ್ಯ ಪ್ರಯತ್ನದಿಂದ ಸಿಗುವುದು ಮಾತ್ರ ಗಟ್ಟಿಯಾಗಿರಲು ಸಾಧ್ಯ. ಇದು ಫೋಟೋಗ್ರಫಿ ಕ್ಷೇತ್ರಕ್ಕೆ ಮುಖ್ಯವಾಗಿ ಅನ್ವಯಿಸುತ್ತದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಣಿಪಾಲ ಮಾಹೆಯ ಸಾರ್ವಜನಿಕ ಸಂಪರ್ಕ, ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣ ವಿಭಾಗದ ನಿರ್ದೇಶಕ ಭರತ್ ಕುಮಾರ್ ಮಾತನಾಡಿ, ಛಾಯಾಗ್ರ್ರಹಣ ಎಂಬುದು ಕಾಲಚಕ್ರವನ್ನು ಒಂದು ಕ್ಷಣ ತಡೆ ಹಿಡಿದು ನಿಲ್ಲಿಸುವ ಪ್ರಕ್ರಿಯೆ ಆಗಿದೆ. ಇಂದು ಕಾಲ ಬದಲಾಗಿ ಹೊಸಹೊಸ ತಂತ್ರಜ್ಞಾನಗಳು ಬಂದರೂ ಫೋಟೋಗ್ರಫಿಯ ಮೂಲತತ್ವ ಬದಲಾಗಿಲ್ಲ. ಅದು ಕತ್ತಲಿನಿಂದ ಬೆಳಕಿಗೆ ಬರುವ ಕ್ರಿಯೆಯಾಗಿದೆ ಎಂದರು,
ಫೋಟೋಗ್ರಫಿ ಹಾಗೂ ಪತ್ರಿಕೋದ್ಯಮಗಳಿಗೆ ವೃತ್ತಿ ಸಂಹಿತೆ ಎಂಬುದು ಇದೆ. ಯಾವುದನ್ನು ಮಾಡಬೇಕು ,ಯಾವುದನ್ನು ಮಾಡಬಾರದು ಎಂಬ ಆಲೋಚನಾ ಕ್ರಮ ಮನುಷ್ಯನಲ್ಲಿ ಇದೆಯೇ ಹೊರತು ಯಂತ್ರದಲ್ಲಿ ಬರುವುದಿಲ್ಲ. ಹಾಗಾಗಿ ಯಂತ್ರಗಳನ್ನು ಬಳಸುವವರು ವೃತ್ತಿ ಸಂಹಿತೆಯನ್ನು ಗಟ್ಟಿಯಾಗಿ ಪಾಲಿಸಬೇಕಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಜಿ.ಕುರ್ಯ ವಹಿಸಿದ್ದರು. ಉಡುಪಿ ಪತ್ರಿಕಾ ಭವನ ಸಮಿತಿಯ ಸಂಚಾಲಕ ಅಂಕಿತ್ ಶೆಟ್ಟಿ, ಜಿಲ್ಲಾ ಸಂಘದ ಕೋಶಾಧಿಕಾರಿ ಹರೀಶ್ ಕುಂದರ್ ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ರಾಜ್ಯ ಸಮಿತಿ ಸದಸ್ಯ ಆಸ್ಟ್ರೋ ಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಮಿತಿ ಸದಸ್ಯರಾದ ಚೇತನ್ ಮಟಪಾಡಿ ಕಾರ್ಯಕ್ರಮ ನಿರೂಪಿಸಿ, ಅಜಿತ್ ಆರಾಡಿ ವಂದಿಸಿದರು.

