ಉಡುಪಿ: ಕಾರಿಗೆ ಅಡ್ಡನಿಂತು ಗಲಾಟೆ ಮಾಡಿದ್ದಲ್ಲದೆ, ಬಳಿಕ ವಾಹನವನ್ನು ಹಿಂಬಾಲಿಸಿಕೊಂಡು ಬಂದು ಸೋಡಾ ಬಾಟಲಿಯಿಂದ ಭೀಕರವಾಗಿ ಹಲ್ಲೆ ನಡೆಸಿದ ಘಟನೆ ಪೆರ್ಡೂರು ಪೇಟೆ ಬಸ್ ನಿಲ್ದಾಣದ ಬಳಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ನಾಲ್ವರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ.
ಪೆರ್ಡೂರು ಗ್ರಾಮದ ನಿವಾಸಿ ಸತೀಶ (42) ಎಂಬವರು ಶನಿವಾರ ಮಧ್ಯಾಹ್ನ ಸ್ನೇಹಿತರೊಂದಿಗೆ ಹೆಬ್ರಿಗೆ ಹೋಗಿ ಹೋಳಿಗೆ ಖರೀದಿಸಿ ತಮ್ಮ ಥಾರ್ ಕಾರಿನಲ್ಲಿ ಹಿಂತಿರುಗುತ್ತಿದ್ದರು. ಪೆರ್ಡೂರು ಗ್ರಾಮದ ಜೋಗಿಬೆಟ್ಟು ಎಂಬಲ್ಲಿಗೆ ತಲುಪಿದಾಗ 3-&4 ಜನ ಅಪರಿಚಿತರು ತಮ್ಮ ಕಾರನ್ನು ರಸ್ತೆಗೆ ಅಡ್ಡವಾಗಿ ನಿಲ್ಲಿಸಿ ಸತೀಶ್ ಅವರ ಕಾರನ್ನು ತಡೆದು ನಿಲ್ಲಿಸಿದ್ದಾರೆ. ಬಳಿಕ ಏಕಾಏಕಿ ಕಾರಿನ ಬೊನೆಟ್ ಮೇಲೆ ಬಡಿದು ಅಶ್ಲೀಲ ಶಬ್ದಗಳಿಂದ ಬೈದು ಗಲಾಟೆ ಮಾಡಿದ್ದಾರೆ.
ಇದರಿಂದ ಗಾಬರಿಗೊಂಡ ಸತೀಶ್ ಹಾಗೂ ಅವರ ಸ್ನೇಹಿತರು ಅಲ್ಲಿಂದ ಪೆರ್ಡೂರಿನತ್ತ ಮುನ್ನಡೆದಿದ್ದಾರೆ. ಆದರೆ ಆರೋಪಿಗಳು ಹಿಂಬಾಲಿಸಿಕೊಂಡು ಬಂದು ಪೆರ್ಡೂರು ಪೇಟೆಯ ಬಸ್ ನಿಲ್ದಾಣದ ಬಳಿ ಕಾರು ತಡೆದು ಸೋಡಾ ಬಾಟಲಿಯಿಂದ ದಾಳಿ ನಡೆಸಿದ್ದಾರೆ. ಶ್ರೀಕಾಂತ್ ಎಂಬವರನ್ನು ಕೊಲ್ಲುವ ಉದ್ದೇಶದಿಂದ ಅವರ ತಲೆಗೆ ಸೋಡಾ ಬಾಟಲಿಯಿಂದ ಬಲವಾಗಿ ಹಲ್ಲೆ ಮಾಡಿದ್ದಾರೆ. ಕಾರಿನಲ್ಲಿದ್ದ ಎಲ್ಲರಿಗೂ ಕೈಯಿಂದ ಮತ್ತು ಬಾಟಲಿಯಿಂದ ಹಲ್ಲೆ ನಡೆಸಿದ್ದಾರೆ.
ಗಾಯಾಳು ಸತೀಶ್ ನೀಡಿದ ದೂರಿನನ್ವಯ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
