ಬೆಳ್ಮಣ್ :ಬೆಳ್ಮಣ್ ಜೆಸಿಐ ಸಂಸ್ಥೆಯು ಈ ವರ್ಷದ ಅವಧಿಯಲ್ಲಿ ನೂರು ವ್ಯಕ್ತಿತ್ವ ವಿಕಸನ ತರಬೇತಿಗಳನ್ನು ಮಾಡುವುದರ ಮೂಲಕ ದಾಖಲೆ ನಿರ್ಮಾಣ ಮಾಡಿದ್ದು ನೂರನೇ ತರಬೇತಿಯ ಕಾರ್ಯಕ್ರಮವು ಬೆಳ್ಮಣ್ ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಂಗಣದಲ್ಲಿ ಈ ಆದಿತ್ಯವಾರ ದಿನಪೂರ್ತಿ ನಡೆಯಿತು.
ಕಾರ್ಕಳ ಅಶೋಕ್ ರಾವ್ ಸ್ಮಾರಕ ಟ್ರಸ್ಟ್ (ರಿ) ಅಧ್ಯಕ್ಷ ದಿನೇಶ್ ರಾವ್ ಕಾರ್ಕಳ ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟನೆ ಮಾಡಿ ಜೆಸಿಐ ಬೆಳ್ಮಣ್ ಸಂಸ್ಥೆಯು ಒಂದೇ ವರ್ಷದಲ್ಲಿ ನೂರು ತರಬೇತಿಗಳನ್ನು ಮಾಡುವುದರ ಮೂಲಕ ಸಾವಿರಾರು ಯುವ ಹೃದಯಗಳನ್ನು ತಲುಪಿದ್ದು ಜೀವನ ಕೌಶಲಗಳನ್ನು ಕಲಿಸಿಕೊಟ್ಟಿದೆ. ಇದರಿಂದ ಉತ್ತಮ ನಾಗರಿಕ ಪ್ರಜ್ಞೆ ಇರುವ ಆರೋಗ್ಯಪೂರ್ಣ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು. ಜೆಸಿಐ ರಾಷ್ಟ್ರೀಯ ತರಬೇತುದಾರರಾದ ರಾಜೇಂದ್ರ ಭಟ್ ಕೆ ಮತ್ತು ಸತೀಶ್ ಭಟ್ ಬಿಳಿನೆಲೆ ಅವರು ‘ ಮೈಲ್ ಸ್ಟೋನ್ ಅಚೀವ್ ‘ ಎಂಬ ವಿಷಯದ ಮೇಲೆ ವಿವಿಧ ಚಟುವಟಿಕೆಗಳ ಮೂಲಕ ಶಿಬಿರಾರ್ಥಿಗಳಿಗೆ ಪೂರ್ಣ ದಿನದ ತರಬೇತಿಯನ್ನು ನೀಡಿ ಜೀವನ ಕೌಶಲಗಳ ಗಳಿಕೆಯಿಂದ ಓರ್ವ ವ್ಯಕ್ತಿ ಎತ್ತರಕ್ಕೆ ಏರಲು ಸಾಧ್ಯ ಎಂದು ಹೇಳಿದರು. ಜೆಸಿಐ ಬೆಳ್ಮಣ್ ಸಂಸ್ಥೆಯ ಅಧ್ಯಕ್ಷ ವೀರೇಂದ್ರ ಆರ್ ಕೆ ಅವರು ಅಧ್ಯಕ್ಷತೆಯನ್ನು ವಹಿಸಿ ಪ್ರಾಸ್ತಾವಿಕ ನುಡಿಗಳ ಜೊತೆಗೆ ಎಲ್ಲರನ್ನೂ ಸ್ವಾಗತ ಮಾಡಿದರು. ನಿಕಟಪೂರ್ವ ಅಧ್ಯಕ್ಷ ಹಾಗೂ ವಲಯ ಉಪಾಧ್ಯಕ್ಷರಾದ ಇನ್ನಾ ಪ್ರದೀಪ್ ಶೆಟ್ಟಿ ಅವರು ಶುಭಾಶಂಸನೆ ಮಾಡಿದರು.
ಇದೇ ಸಂದರ್ಭದಲ್ಲಿ ನೂರನೇ ತರಬೇತಿ ನಡೆಸಿಕೊಟ್ಟ ರಾಜೇಂದ್ರ ಭಟ್ ಕೆ ಹಾಗೂ ಸತೀಶ್ ಭಟ್ ಬಿಳಿನೆಲೆ ಅವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು. ಹಾಗೆಯೇ ನೂರು ತರಬೇತಿಗಳನ್ನು ನಡೆಸಲು ಸಹಕಾರ ಕೊಟ್ಟ ಎಲ್ಲ ತರಬೇತುದಾರರನ್ನು ಸಂಸ್ಥೆಯ ಪರವಾಗಿ ಸ್ಮರಿಸಿ ಶಾಲು, ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಶ್ವೇತಾ ಆಚಾರ್ಯ ಅವರು ಅತಿಥಿಗಳನ್ನು ಪರಿಚಯ ಮಾಡಿದರು. ಅರ್ಚನಾ ಕಾರ್ಯಕ್ರಮ ನಿರೂಪಣೆ ಮಾಡಿ ಕಾರ್ಯಕ್ರಮ ನಿರ್ದೇಶಕ ಬೆಳ್ಮಣ್ ಸರ್ವಜ್ಞ ತಂತ್ರಿ ಅವರು ಧನ್ಯವಾದ ನೀಡಿದರು.

