ಭಜನಾ ಪರಿಷತ್ತಿನ ತಾಲೂಕು ಹಾಗೂ ವಲಯ ಪದಾಧಿಕಾರಿಗಳ ಸಭೆ

0
20

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬೆಳ್ತಂಗಡಿ ಇದರ ಸಂಪೂರ್ಣ ಸಹಕಾರದೊಂದಿಗೆ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್, ಬೆಳ್ತಂಗಡಿ ತಾಲೂಕು ಇದರ ತಾಲೂಕು ಹಾಗೂ ವಲಯ ಮಟ್ಟದ ಪದಾಧಿಕಾರಿಗಳ ಸಭೆಯು ಉಜಿರೆಯ ಸಿರಿ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ತಾಲೂಕು ಭಜನಾ ಪರಿಷತ್ ಅಧ್ಯಕ್ಷ ರವಿ ಚಾರ್ಮಾಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಜ್ಯ ಭಜನಾ ಪರಿಷತ್ ಅಧ್ಯಕ್ಷ ಪಿ. ಚಂದ್ರಶೇಖರ ಸಾಲ್ಯಾನ್ ಕೊಯ್ಯೂರು, ಗೌರವಾಧ್ಯಕ್ಷ ವೆಂಕಟೇಶ್ ಭಟ್ ಕಜೆ, ತಾಲೂಕು ಸಂಚಾಲಕ ಹಾಗೂ ಯೋಜನಾಧಿಕಾರಿ ಯಶೋಧರ, ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ. ಅಳಿಯೂರು ಹಾಗೂ ತಾಲೂಕು ಕಾರ್ಯದರ್ಶಿ ಚಂದ್ರಶೇಖರ್ ಇಂದಬೆಟ್ಟು ಭಾಗವಹಿಸಿದ್ದರು.

ಪ್ರತಿಮಾ ಕೊಕ್ಕಡ ಅವರ ಪ್ರಾರ್ಥನೆಯ ಬಳಿಕ ದೀಪಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಭೆಯಲ್ಲಿ ತಾಲೂಕಿನ ವಿವಿಧ ವಲಯಗಳ ಭಜನಾ ಮಂಡಳಿಗಳ ಕಾರ್ಯಚಟುವಟಿಕೆಗಳ ಕುರಿತು ಚರ್ಚೆ ನಡೆಸಿ, ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಅಗತ್ಯ ಸಲಹೆ-ಸೂಚನೆಗಳನ್ನು ನೀಡಲಾಯಿತು.

ರಾಜ್ಯಾಧ್ಯಕ್ಷ ಪಿ. ಚಂದ್ರಶೇಖರ ಸಾಲ್ಯಾನ್ ಮಾತನಾಡಿ, ವಲಯ ಪದಾಧಿಕಾರಿಗಳು ನಿಸ್ವಾರ್ಥ ಸೇವಾ ಮನೋಭಾವದಿಂದ ಭಜನಾ ಮಂಡಳಿಗಳಿಗೆ ಭೇಟಿ ನೀಡಿ ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ಕರೆ ನೀಡಿದರು. ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ. ಅಳಿಯೂರು ಸಂಘಟನೆಯ ಬೆಳವಣಿಗೆಗೆ ಒಗ್ಗಟ್ಟು ಮತ್ತು ಆರೋಗ್ಯಕರ ಚರ್ಚೆಯ ಮಹತ್ವವನ್ನು ಒತ್ತಿ ಹೇಳಿದರು.

ತಾಲೂಕು ಸಂಚಾಲಕ ಯಶೋಧರ ಮಾತನಾಡಿ, ಭಜನೆಯ ಮೂಲಕ ಅನೇಕ ಪ್ರತಿಭೆಗಳು ಹೊರಹೊಮ್ಮುತ್ತಿದ್ದು, ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಮಾಜಮುಖಿ ಕಾರ್ಯಕ್ರಮಗಳನ್ನೂ ಹೆಚ್ಚಾಗಿ ಆಯೋಜಿಸಬೇಕೆಂದು ಸಲಹೆ ನೀಡಿದರು.

ತಾಲೂಕು ಭಜನಾ ಪರಿಷತ್ ಸಲಹೆಗಾರ ನಾಗೇಶ್ ಬಿ. ನೆರಿಯ ವಂದಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ರಾಮ್ ಕುಮಾರ್ ಮಾರ್ನಾಡ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here