ಮುಂಬಯಿ :ದೇಶದ ಪ್ರತಿಷ್ಠಿತ ಮಲ್ಟಿ ಸ್ಟೇಟ್ ಷೆಡ್ಯೂಲ್ಡ್ ಕೋ-ಆಪರೇಟಿವ್ ಬ್ಯಾಂಕುಗಳಲ್ಲಿ ಒಂದಾದ ಭಾರತ್ ಕೋ-ಆಪರೇಟಿವ್ ಬ್ಯಾಂಕ್ (ಮುಂಬೈ) ಲಿಮಿಟೆಡ್ ತನ್ನ 48 ನೇ ಸಂಸ್ಥಾಪನಾ ದಿನವನ್ನು 21 ಆಗಸ್ಟ್, 2026 ರಂದು ಗೋರೆಗಾಂವ್ ಪೂರ್ವದಲ್ಲಿರುವ ತನ್ನ ಕೇಂದ್ರ ಕಚೇರಿಯಲ್ಲಿ ಸಂಭ್ರಮದಿಂದ ಆಚರಿಸಿತು.
ಬ್ಯಾಂಕಿನ ಉಪಾಧ್ಯಕ್ಷರಾದ ನ್ಯಾಯವಾದಿ ಸೋಮನಾಥ್ ಬಿ. ಅಮೀನ್ ಅವರು ಬ್ರಹ್ಮಶ್ರೀ ನಾರಾಯಣ ಗುರುಗಳ ಆಶೀರ್ವಾದ ಪಡೆದು, ಕೇಕ್ ಕತ್ತರಿಸುವ ಮೂಲಕ ಸಮಾರಂಭಕ್ಕೆ ವಿದ್ಯುಕ್ತ ಚಾಲನೆ ನೀಡಿದರು.
ಸಂಸ್ಥಾಪನಾ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ, ಬ್ಯಾಂಕಿನ ಜನಪ್ರಿಯ ರೆಕರಿಂಗ್ ಡೆಪಾಸಿಟ್ ಯೋಜನೆಗಳಾದ (Recurring Deposit Scheme) ‘ಮಿಲಿಯನೇರ್’ (Millionaire) ಮತ್ತು ‘ಲಖ್ಪತಿ’ (Lakhpathi) ಯೋಜನೆಗಳನ್ನು ಪ್ರಸ್ತುತಪಡಿಸಿ ಗ್ರಾಹಕರಿಗೆ ಮತ್ತಷ್ಟು ತಲುಪಿಸುವ ನಿಟ್ಟಿನಲ್ಲಿ ವಿಶೇಷ ಠೇವಣಿ ಸಂಗ್ರಹಣಾ ಅಭಿಯಾನಕ್ಕೆ ಉಪಾಧ್ಯಕ್ಷರಾದ ನ್ಯಾಯವಾದಿ ಶ್ರೀ ಸೋಮನಾಥ್ ಬಿ. ಅಮೀನ್ ಮತ್ತು ನಿರ್ದೇಶಕ ಮಂಡಳಿಯ ಸದಸ್ಯರು ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಅನಿವಾರ್ಯ ಕಾರಣಗಳಿಂದ ಖುದ್ದಾಗಿ ಭಾಗವಹಿಸಲು ಸಾಧ್ಯವಾಗದ ಬ್ಯಾಂಕಿನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ ಅವರು ಸಂಸ್ಥಾಪನಾ ದಿನದ ಪ್ರಯುಕ್ತ ಸಮಸ್ತ ಸಿಬ್ಬಂದಿಗಳಿಗೆ ತಮ್ಮ ಹೃತ್ಪೂರ್ವಕ ಸಂದೇಶವನ್ನು ರವಾನಿಸಿದರು.
ತಮ್ಮ ಸಂದೇಶದಲ್ಲಿ, “ಈ ವರ್ಷ ನಮ್ಮ ಬ್ಯಾಂಕ್ ರೂ. 20,000 ಕೋಟಿ ವ್ಯವಹಾರ ಸಾಧಿಸಿದ್ದು ನಮಗೆಲ್ಲರಿಗೂ ಅತ್ಯಂತ ಸಂತೋಷದ ಕ್ಷಣ. ಈ ಸಾಧನೆ ಒಂದು ದಿನದಲ್ಲಿ ಆದದ್ದಲ್ಲ, ಇದು ನಮ್ಮ ಎಲ್ಲಾ ಷೇರುದಾರರು, ಗ್ರಾಹಕರು, ಹಿತೈಷಿಗಳು ಮತ್ತು ಮುಖ್ಯವಾಗಿ ನಮ್ಮ ಸಿಬ್ಬಂದಿ ವರ್ಗದ ವರ್ಷಪೂರ್ತಿಯ ಅವಿರತ ಶ್ರಮ ಮತ್ತು ಬದ್ಧತೆಯ ಫಲ. ಪ್ರತಿಯೊಬ್ಬ ಸಿಬ್ಬಂದಿಯೂ ಪ್ರಾಮಾಣಿಕವಾಗಿ ಶ್ರಮಿಸಿದ ಕಾರಣದಿಂದಲೇ ನಾವು ಈ ಎತ್ತರ ತಲುಪಿದ್ದೇವೆ. ಇದಕ್ಕಾಗಿ ನಾನು ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ. ನಮ್ಮ ಮೇಲೆ ಸದಾ ಅಚಲ ನಂಬಿಕೆಯನ್ನಿಟ್ಟು ಬೆಂಬಲಿಸುತ್ತಿರುವ ಷೇರುದಾರರಿಗೆ ಕೃತಜ್ಞತೆ ಸಲ್ಲಿಸುವ ಸಂಕೇತವಾಗಿ, 19 ಆಗಸ್ಟ್ 2026 ರಂದು ಜರುಗಿದ ಬ್ಯಾಂಕಿನ 50 ನೇ ವಾರ್ಷಿಕ ಮಹಾಸಭೆಯಲ್ಲಿ (AGM) ನಾವು 10% ಲಾಭಾಂಶವನ್ನು (ಡಿವಿಡೆಂಡ್) ಘೋಷಿಸಿ ಪಾವತಿಸಿದ್ದೇವೆ. ಇದು ಕೊನೆಯಲ್ಲ, ಇದೊಂದು ಹೊಸ ಆರಂಭ. ಎಲ್ಲರೂ ಒಗ್ಗಟ್ಟಾಗಿ, ಇನ್ನಷ್ಟು ಶ್ರದ್ಧೆಯಿಂದ ಕೆಲಸಮಾಡಿ ಮುಂಬರುವ ದಿನಗಳಲ್ಲಿ ಇನ್ನಷ್ಟು ದೊಡ್ಡ ಗುರಿಗಳನ್ನು ಸಾಧಿಸೋಣ,” ಎಂದು ತಿಳಿಸಿದರು.
ಅಲ್ಲದೆ, “ಗ್ರಾಹಕರಿಗೆ ಇನ್ನಷ್ಟು ಅತ್ಯುತ್ತಮ ಅನುಕೂಲ ಕಲ್ಪಿಸಲು ಬ್ಯಾಂಕ್ ಆಧುನಿಕ ತಂತ್ರಜ್ಞಾನದಲ್ಲಿ ನಿರಂತರವಾಗಿ ಹೂಡಿಕೆ ಮಾಡುತ್ತಿದೆ. ಸಿಬ್ಬಂದಿ ವರ್ಗವನ್ನು ತನ್ನ ಅತಿದೊಡ್ಡ ಶಕ್ತಿ ಎಂದು ಪರಿಗಣಿಸಿರುವ ಬ್ಯಾಂಕ್, ಅವರ ಕೌಶಲ್ಯಾಭಿವೃದ್ಧಿ, ನಿಯಮಿತ ತರಬೇತಿ ಮತ್ತು ಯೋಗಕ್ಷೇಮಕ್ಕೆ ಸದಾ ಬದ್ಧವಾಗಿದೆ. ನಾವು ಕೇವಲ ಬ್ಯಾಂಕ್ ಅಲ್ಲ – ಜನರ ಭರವಸೆಯ ಪರಂಪರೆ,” ಎಂದು ಕಾರ್ಯಾಧ್ಯಕ್ಷರು ತಮ್ಮ ಸಂದೇಶದಲ್ಲಿ ಉಲ್ಲೇಖಿಸಿದರು.
ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಬ್ಯಾಂಕಿನ ಉಪಾಧ್ಯಕ್ಷರಾದ ನ್ಯಾಯವಾದಿ ಸೋಮನಾಥ್ ಬಿ. ಅಮೀನ್ ಅವರು, “ಭಾರತ್ ಬ್ಯಾಂಕ್ ಇಂದು ಆರ್ಥಿಕ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲುಗಳನ್ನು ಸತತವಾಗಿ ಸಾಧಿಸುತ್ತಿರುವುದರ ಸಂಪೂರ್ಣ ಶ್ರೇಯಸ್ಸು ನಮ್ಮ ಸಿಬ್ಬಂದಿ ವರ್ಗಕ್ಕೆ ಸಲ್ಲುತ್ತದೆ. ಸಿಬ್ಬಂದಿಗಳ ಸಮರ್ಪಣಾ ಮನೋಭಾವ ಹಾಗೂ ಕಠಿಣ ಪರಿಶ್ರಮವೇ ಬ್ಯಾಂಕಿನ ಶಕ್ತಿಯಾಗಿದೆ. ಗ್ರಾಹಕರ ಸೇವೆಯೇ ನಮ್ಮ ಪ್ರಥಮ ಆದ್ಯತೆಯಾಗಿದ್ದು, ಗ್ರಾಹಕರಿಗೆ ಉತ್ಕೃಷ್ಟ ಸೇವೆ ನೀಡುವಲ್ಲಿ ನಾವು ಯಾವುದೇ ಕೊರತೆ ಬಾರದಂತೆ ಸಕಲ ಪ್ರಯತ್ನಗಳನ್ನೂ ಮಾಡಬೇಕು. ನಮ್ಮಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ‘ಮಿಲಿಯನೇರ್’ ಮತ್ತು ‘ಲಕ್ಷಪತಿ’ ಆರ್ಡಿ ಯೋಜನೆಗಳ ಪ್ರಯೋಜನಗಳನ್ನು ಗ್ರಾಹಕರಿಗೆ ತಲುಪಿಸಿ, ಸಾರ್ವಜನಿಕರಲ್ಲಿ ಉಳಿತಾಯದ ಮನೋಭಾವವನ್ನು ಹೆಚ್ಚಿಸುವಲ್ಲಿ ಸಿಬ್ಬಂದಿಗಳು ಮುಂದಾಗಬೇಕು,” ಎಂದು ಕರೆ ನೀಡಿದರು.
ಈ ಸಮಾರಂಭದಲ್ಲಿ ನಿರ್ದೇಶಕರುಗಳಾದ ಗಂಗಾಧರ್ ಜೆ. ಪೂಜಾರಿ, ಮೋಹನದಾಸ್ ಜಿ. ಪೂಜಾರಿ, ನಿರಂಜನ್ ಎಲ್. ಪೂಜಾರಿ, ಗಣೇಶ್ ಡಿ. ಪೂಜಾರಿ, ಗೌರೇಶ್ ಆರ್. ಕೋಟ್ಯಾನ್, ಜಯಶ್ರೀ ಎಂ. ಹೆಜಮಾಡಿ ಮತ್ತು ಮಹಾಪ್ರಬಂಧಕರಾದ ಮಹೇಶ್ ಬಿ. ಕೋಟ್ಯಾನ್, ಜನಾರ್ಧನ್ ಎಂ. ಪೂಜಾರಿ, ಮಂಜುಳಾ ಸುವರ್ಣ, ಮೋಹನ್ ಸಾಲ್ಯಾನ್ ಹಾಗೂ ಉಪ ಮಹಾಪ್ರಬಂಧಕರು, ಸಹಾಯಕ ಮಹಾಪ್ರಬಂಧಕರು ಮತ್ತು ಸಿಬ್ಬಂದಿ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

