ಮಂಗಳೂರು : ಕರಾವಳಿಯ ಮೂರು ಜಿಲ್ಲೆಗಳಲ್ಲಿ ‘ತೌಳವ ಯುಗಾದಿ’ಯೆಂದೇ ಕರೆಯಲ್ಪಡುವ ಸೌರಮಾನ ಯುಗಾದಿ ‘ಬಿಸು ಹಬ್ಬ’ದ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಪ್ರಥಮ ತುಳು ವಾರ್ತಾ ವಾಹಿನಿ ನಮ್ಮ ಕುಡ್ಲ ‘ಬಿಸು ಕಬಿಕೂಟ’ ಎಂಬ ವಿಶೇಷ ಕವಿ ಮೇಳವನ್ನು ಆಯೋಜಿಸಿದೆ. ಕವಿ, ಜಾನಪದ ವಿದ್ವಾಂಸ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರ ಸಾರಥ್ಯದಲ್ಲಿ ಕಾರ್ಯಕ್ರಮವನ್ನು ಈಗಾಗಲೇ ಚಿತ್ರೀಕರಿಸಲಾಗಿದ್ದು ಬಿಸು ಯುಗಾದಿಯಂದು ಪ್ರಸಾರಕ್ಕೆ ಅಣಿಗೊಳಿಸಲಾಗಿದೆ.

ದಶ ಕವಿ ಸಂಗಮ :
‘ತುಳುವೆರೆ ಪೊಸ ವರ್ಷೊಗು ಕಬಿತೆದ ಕಾಣಿಗೆ’ (ತುಳುವರ ಹೊಸ ವರ್ಷಕ್ಕೆ ಕವಿತೆಯ ಕಾಣಿಕೆ) ಎಂಬ ಆಶಯದೊಂದಿಗೆ ಸಿದ್ಧಪಡಿಸಿದ ಈ ಬಿಸು ಕವಿ ಕೂಟದಲ್ಲಿ ಭಾಸ್ಕರ ರೈ ಸೇರಿದಂತೆ ತುಳುನಾಡಿನ 10 ಮಂದಿ ಪ್ರಾತಿನಿಧಿಕ ಕವಿ – ಕವಯತ್ರಿಯರು ಪಾಲ್ಗೊಂಡಿದ್ದಾರೆ.
ಅವರುಗಳೆಂದರೆ ರಘು ಇಡ್ಕಿದು, ರಾಜೇಶ್ ಶೆಟ್ಟಿ ದೋಟ, ಅಶೋಕ್ ಎನ್. ಕಡೇಶಿವಾಲಯ, ರೂಪಕಲಾ ಆಳ್ವ , ಅಕ್ಷಯ ಆರ್. ಶೆಟ್ಟಿ ಪೆರಾರ, ಗೀತಾ ಲಕ್ಷ್ಮೀಶ, ಸಿದ್ದಕಟ್ಟೆ ಮಲ್ಲಿಕಾ ಅಜಿತ್ ಶೆಟ್ಟಿ, ಮಾಲತಿ ಶೆಟ್ಟಿ ಮಾಣೂರು ಮತ್ತು ವಿಂಧ್ಯಾ ಎಸ್.ರೈ. ಕವಿಗಳು ಬಿಸು ಹಬ್ಬದ ಆಚರಣೆಯ ವಿವಿಧ ಆಯಾಮಗಳನ್ನು ತಿಳಿಸುವ ತಲಾ ಒಂದು ಕವಿತೆ ಹಾಗೂ ತುಳುನಾಡು – ನುಡಿ, ಸಂಸ್ಕೃತಿಯನ್ನು ಬಿಂಬಿಸುವ ಮತ್ತೊಂದು ಕವಿತೆಯನ್ನು ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸುವರು.
ಅಲ್ಲದೆ ಬೆಂಗಳೂರಿನ ‘ಐಲೇಸಾ’ ದಿ ವಾಯ್ಸ್ ಆಫ್ ಓಶಿಯನ್ ಸಂಸ್ಥೆ ಸಂಯೋಜಿಸಿದ ‘ ಬಿಸುತ ದಿನ.. ಪೊಸತ್ ಕನ..’ ಎಂಬ ಭಾಸ್ಕರ ರೈ ಕುಕ್ಕುವಳ್ಳಿ ರಚನೆಯ ಕವನದ ಗೀತ ಚಿತ್ರವನ್ನು ಕಾರ್ಯಕ್ರಮದಲ್ಲಿ ಬಳಸಿಕೊಳ್ಳಲಾಗಿದೆ.
ಏಪ್ರಿಲ್ 15ರಂದು ಪ್ರಸಾರ : ಇದೇ ಏಪ್ರಿಲ್ 15ರಂದು ಬುಧವಾರ ಜಿಲ್ಲೆಯಲ್ಲಿ ಆಚರಿಸಲ್ಪಡುವ ‘ಬಿಸು ಹಬ್ಬ’ದ ಸಂದರ್ಭದಲ್ಲಿ ಅಂದು ಬೆಳಿಗ್ಗೆ ಗಂ.11ಕ್ಕೆ ಈ ‘ಬಿಸು ಕಬಿಕೂಟ’ ನಮ್ಮ ಕುಡ್ಲ ವಾಹಿನಿಯಲ್ಲಿ ಪ್ರಸಾರವಾಗಲಿದೆ ಎಂದು ವಾಹಿನಿಯ ನಿರ್ದೇಶಕ ಲೀಲಾಕ್ಷ ಬಿ.ಕರ್ಕೇರ ತಿಳಿಸಿದ್ದಾರೆ.

