ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ವೈಭವ

0
5

ಸದ್ಗುಣ ಪ್ರಚಾರದಿಂದ ಸಮಾಜದಲ್ಲಿ ಧನಾತ್ಮಕ ವಾತಾವರಣ: ಪುತ್ತಿಗೆ ಶ್ರೀ

ಉಡುಪಿ : ಶಿವ ಬೇರೆಯವರ ದೋಷವನ್ನು ಕಂಠದಲ್ಲಿ ಹಾಗೂ ಬೇರೆಯವರ ಉತ್ತಮ ಗುಣಗಳನ್ನು ಚಂದಿರನಂತೆ ತಲೆಯ ಮೇಲೆ ಹೊತ್ತುಕೊಂಡಂತೆ ನಾವು ಇನ್ನೊಬ್ಬರ ದೋಷಗಳ ಬದಲು ಅವರ ಸದ್ಗುಣಗಳ ಪ್ರಚಾರ ಮಾಡಿದಲ್ಲಿ ಸಮಾಜದಲ್ಲಿ ಧನಾತ್ಮಕ ವಾತಾವರಣ ನಿರ್ಮಾಣ ಮಾಡಬಹುದು. ರುದ್ರ ದೇವರ ಆರಾಧನೆ ಮಾಡಿ ಅವರ ಗುಣಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.

ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ವೈಭವ ಪ್ರಯುಕ್ತ ರವಿವಾರ ಡಾ| ನಾಡೋಜ ಜಿ. ಶಂಕರ್ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀಪಾದರು ಆಶೀರ್ವಚನ ನೀಡಿದರು. ಮಾಜಿ ಶಾಸಕ ರಘುಪತಿ ಭಟ್ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ| ತಲ್ಲೂರು ಶಿವರಾಮ ಶೆಟ್ಟಿ ಅವರು, ಭಕ್ತಾಭಿಮಾನಿಗಳು ಇಂದು ಸಾವಿರಾರು ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಬರುತ್ತಾರೆ. ಪ್ರತೀ ದೇವಸ್ಥಾನದಲ್ಲಿಯೂ ಕೂಡ ಒಂದು ಅದ್ಬುತ ಶಕ್ತಿ ಇದೆ. ಆ ಶಕ್ತಿಯನ್ನು ಶ್ರೀ ದೇವರು ನಮಗೆ ಕರುಣಿಸಲಿ ಎಂದು ಭಕ್ತರು ದೇವರ ಸ್ಮರಣೆ ಮಾಡುತ್ತಾರೆ. ಇಂದು ದೇವಸ್ಥಾನಕ್ಕೆ ಆಗಮಿಸಿದ ಲಕ್ಷಾಂತರ ಭಕ್ತರು ದೇವರ ಸ್ಮರಣೆ ಮಾಡಿದಾಗ, ದೇವರು ಖಂಡಿತವಾಗಿ ನಮಗೆ ಅದ್ಬುತ ಶಕ್ತಿಯನ್ನು ಕರುಣಿಸುತ್ತಾನೆ. ಶ್ರೀ ಮಹಾಲಿಂಗೇಶ್ವರ ದೇವರು ಭಕ್ತರ ಸಕಲ ಕಷ್ಟಗಳನ್ನು ನಿವಾರಿಸಿ ಇಷ್ಟಾರ್ಥವನ್ನು ಈಡೇರಿಸಲಿ ಎಂದರು.

ಉದ್ಯಮಿ ಉದಯಕುಮಾರ್‌ಶೆಟ್ಟಿ ಮುನಿಯಾಲು, ಕಿದಿಯೂರು ಗ್ರೂಪ್ ಆಫ್ ಹೊಟೇಲ್‌ನ ಪ್ರವರ್ತಕ ಭುವನೇಂದ್ರ ಕಿದಿಯೂರು, ಬಿಲ್ಲವ ಮಹಾಮಂಡಳದ ಉಪಾಧ್ಯಕ್ಷ ಬಿ. ಎನ್. ಶಂಕರ್ ಪೂಜಾರಿ, ಹಿರಿಯ ನ್ಯಾಯವಾದಿ ವಾಣಿ ವಿ. ರಾವ್, ಹೈದರಾಬಾದ್‌ನ ಸಿಎ ಗಣೇಶ್ ರಾವ್, ಜಿಲ್ಲಾ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಪ್ರವೀಣ್ ಎಂ. ಪೂಜಾರಿ, ಕಾಂಚನ್ ಹುಂಡೈ ಮೋಟಾರ್ಸ್ ಪ್ರವರ್ತಕ ಪ್ರಸಾದ್ ರಾಜ್ ಕಾಂಚನ್, ಬನ್ನಂಜೆ ಬಿಲ್ಲವ ಸಂಘದ ಅಧ್ಯಕ್ಷ ಶಶಿಧರ್ ಅಮೀನ್, ಪ್ರಧಾನ ಅರ್ಚಕ ವಾಸುದೇವ ಉಪಾಧ್ಯ, ಬ್ರಹ್ಮಕಲಶೋತ್ಸವ ಸಮಿತಿಯ ಸಂಚಾಲಕ ರಮೇಶ್ ಕಾಂಚನ್, ದಿನೇಶ್ ಪುತ್ರನ್, ಶಮಿತಾ ಭಂಡಾರಿ, ವಿದ್ಯಾಲತಾ ಶೆಟ್ಟಿ ಪ್ರಭಾಕರ್ ಶೆಟ್ಟಿ, ಶೇಖರ್‌ಶೆಟ್ಟಿ, ರಾಜೇಶ್ ಬಿ., ಸುದೇಶ್ ಶೇಟ್ ಉಪಸ್ಥಿತರಿದ್ದರು.

ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮಾಧವ ಪೂಜಾರಿ ಸ್ವಾಗತಿಸಿ, ಅರ್ಪಿತಾ ಪ್ರಶಾಂತ್ ಶೆಟ್ಟಿ ವಂದಿಸಿದರು. ದಯಾನಂದ, ಧನಂಜಯ, ಪಾಕತಜ್ಞ ಜಯಂತ್ ಎಸ್. ಬಿ ಹಾಗೂ ಗೀತಾ ಅವರನ್ನು ಗೌರವಿಸಲಾಯಿತು.

LEAVE A REPLY

Please enter your comment!
Please enter your name here