ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಗಳು ಸಮಾಜವನ್ನು ಒಟ್ಟುಗೂಡಿಸಿದೆ: ಯು.ಟಿ. ಖಾದರ್

0
16

ಕಾಂಗ್ರೆಸ್ ಪಕ್ಷ ನಾರಾಯಣ ಗುರುಗಳ ನಿಗಮ ಸ್ಥಾಪಿಸುವ ವಾಗ್ದಾನ ಪೂರೈಸಿದೆ; ಸಚಿವ ಮಧು ಬಂಗಾರಪ್ಪ.

ಬೆಂಗಳೂರು ; ಬ್ರಹ್ಮಶ್ರೀ ನಾರಾಯಣ ಗುರುಗಳು ಮಹಾಪುರುಷರುಗಳ ಸಾಲಿನಲ್ಲಿ ಮುಂಚೂಣಿಯ ವ್ಯಕ್ತಿತ್ವದವರಾಗಿದ್ದರು. ಇವರುಗಳ ತತ್ವಗಳು ಮತ್ತು ಆದರ್ಶಗಳು ಇಡೀ ಸಮಾಜವನ್ನು ಒಟ್ಟುಗೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಯಾವ ಜಾತಿ, ಧರ್ಮ, ಪಂಥ ದೊಡ್ಡದಲ್ಲ ಚಿಕ್ಕದೂ ಅಲ್ಲ ಎನ್ನುವ ಉದ್ಘೋಷವನ್ನು ಅವರು ನೀಡಿದ್ದು ಅದು ಇಂದಿಗೂ ಪ್ರಸ್ತುತವಾಗಿದೆ ಎಂದು ವಿಧಾನಸಭಾಧ್ಯಕ್ಷ ಯು. ಟಿ ಖಾದರ್ ಹೇಳಿದರು.

ಗುರುವಾರ ಮೈಸೂರು ಬ್ಯಾಂಕ್ ವೃತ್ತದ ಕರ್ನಾಟಕ ಗೃಹ ಮಂಡಳಿಯ ಕಟ್ಟಡದಲ್ಲಿ ಅಸ್ತಿತ್ವಕ್ಕೆ ಬಂದಿರುವ ನಾರಾಯಣ ಗುರು ನಿಗಮದ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿಗಮದ ಅಧ್ಯಕ್ಷ ಮಂಜುನಾಥ್ ಪೂಜಾರಿ ಅತ್ಯಂತ ಸಭ್ಯ ವ್ಯಕ್ತಿಯಾಗಿದ್ದು, ಅವರು ತಮಗೆ ನೀಡಿರುವ ಜವಾಬ್ದಾರಿಯ ಮೂಲಕ ನಾರಾಯಣ ಗುರುಗಳ ಆದರ್ಶವನ್ನು ಸರ್ವ ಸಮಾಜಕ್ಕೆ ತಗೆದುಕೊಂಡು ಹೋಗುವ ಕೆಲಸವನ್ನು ಮಾಡಲಿದ್ದಾರೆ. ಕೊಟ್ಟಿರುವ ಅನುದಾನವನ್ನು ಬಳಸಿಕೊಂಡು ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಮೇಲೆತ್ತುವ ಕಾರ್ಯಕ್ಕೆ ಮುನ್ನುಡಿ ಬರೆಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
  
ನಮ್ಮ ಕಾಂಗ್ರೆಸ್ ಪಕ್ಷ ವಿಶೇಷವಾಗಿ ನಾರಾಯಣ ಗುರುಗಳ ನಿಗಮವನ್ನು ಸ್ಥಾಪಿಸುವ ವಾಗ್ದಾನವನ್ನು ಪೂರೈಸಿದೆ. ಜನಾನುರಾಗಿಯಾದ ಮಂಜುನಾಥ್ ಪೂಜಾರಿ ಅವರನ್ನು ಮೊಟ್ಟ ಮೊದಲ ಅಧ್ಯಕ್ಷರನ್ನಾಗಿ ಸರ್ವರನ್ನೂ ಮೇಲೆತ್ತುವ ಕೆಲಸಕ್ಕೆ ಅತಿ ದೊಡ್ಡ ಮುನ್ನುಡಿಯನ್ನು ಬರೆದಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ನುಡಿದರು.

ನಾರಾಯಣ ಗುರು ನಿಗಮ ಅತ್ಯಂತ ಪ್ರಮುಖವಾದ ನಿಗಮವಾಗಿದೆ. ಮಹಾತ್ಮಾ ಗಾಂಧಿ ಅವರು ಅತ್ಯಂತ ಗೌರವದಿಂದ ನಾರಾಯಣ ಗುರುಗಳನ್ನು ಕಂಡಿದ್ದು, ಇಂದಿಗೂ ನಿದರ್ಶನವಾಗಿರುವ ಸಂದರ್ಭದಲ್ಲಿ ನೂತನ ಕಛೇರಿ ಅಸ್ಥಿತ್ವಕ್ಕೆ ಬಂದಿರುವುದು ಸಮಸ್ತ ಜಾತಿ, ವರ್ಗ ಮತ್ತು ಪಂಥ ಒಂದುಗೂಡಿಸುವ ಕಾರ್ಯಕ್ಕೆ ಮುನ್ನುಡಿಯಾಗಿದೆ ಎಂದು ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅಭಿಪ್ರಾಯಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ರಾಮನಾಥ್ ರೈ, ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ್ ಪೂಜಾರಿ, ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ್ ಕುಮಾರ್ ಸೊರಕೆ, ಬೆಳ್ತಂಗಡಿ ಕ್ಷೇತ್ರದ ಕಾಂಗ್ರೆಸ್ ಯುವ ಮುಖಂಡ ರಕ್ಷಿತ್ ಶಿವರಾಂ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ತುಳಸೀ ಮುದ್ದನೇನಿ, ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಕೂಲೆರ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ.ಎ. ಗಪೂರ್ ಸೇರಿದಂತೆ ಸಮಾಜದ ವಿವಿಧ ಹಿರಿಯ ಮುಖಂಡರು ಹಾಜರಿದ್ದರು.

ಮೂರ್ತೇದಾರರ ಪುನರ್ವಸತಿಗಾಗಿ ನಾರಾಯಣ ಗುರು ಅಭಿವೃದ್ಧಿ ನಿಗಮದಿಂದ ಪೈಲೆಟ್ ಯೋಜನೆಯನ್ನು ಸಿದ್ಧಪಡಿಸಲಾಗಿದ್ದು, ಇದರ ಅನ್ವಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮೊದಲ ಹಂತವಾಗಿ ಪೈಲೆಟ್ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಇದರ ಯಶಸ್ಸಿನ ಬಳಿಕ ರಾಜ್ಯದ ಇನ್ನೂ ಕೆಲವು ಜಿಲ್ಲೆಗಳಲ್ಲಿ ಜಾರಿಗೆ ತರಲಾಗುವುದು. ಒಟ್ಟು ಈ ಯೋಜನೆಗಾಗಿ 1.50 ಕೋಟಿ ರೂ ಗಳನ್ನು ತೆಗೆದಿರಿಸಲಾಗಿದ್ದು, ಸ್ವಂತ ಉದ್ಯೋಗಕ್ಕಾಗಿ ಫಲಾನುಭವಿಗಳಿಗೆ 5 ಲಕ್ಷ ರೂ ನೀಡಲಾಗುತ್ತಿದೆ.

ರಾಜ್ಯಸರ್ಕಾರ ನಿಗಮಕ್ಕೆ 10 ಕೋಟಿ ರೂ ವಾರ್ಷಿಕ ಅನುದಾನ ನೀಡಿದೆ. ಇದರಲ್ಲಿ ಪ್ರಮುಖವಾಗಿ ಅರಿವು ಶಿಕ್ಷಣ ಕಾರ್ಯಕ್ರಮಕ್ಕೆ 4 ಕೋಟಿ ರೂ ಮತ್ತು ಗಂಗಾ ಕಲ್ಯಾಣ ಯೋಜನೆಗೆ 2.5 ಕೋಟಿ ರೂ ಗಳನ್ನು ತೆಗೆದಿರಿಸಲಾಗಿದೆ.

-ಮಂಜುನಾಥ್ ಪೂಜಾರಿ, ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ

LEAVE A REPLY

Please enter your comment!
Please enter your name here