ಉಡುಪಿ ಮೂಲದ ಜನಪ್ರಿಯ ಕಲಾವಿದ, ಕಿರುತೆರೆ, ಸಿನಿಮಾ ಲಭ್ಯ ಲೋಕದಲ್ಲಿ ಅಪಾರ ಖ್ಯಾತಿ ಗಳಿಸಿದ್ದ 34 ವರ್ಷದ ರಾಕೇಶ್ ಪೂಜಾರಿ ಸೋಮವಾರ(ಮೇ 12) ರಾತ್ರಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಮೂಲಗಳ ಪ್ರಕಾರ ಅವರ ಉಡುಪಿಯ ಕಾರ್ಕಳದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು, ಸ್ನೇಹಿತರ ಜತೆ ಇದ್ದಾಗಲೇ ಅವರಿಗೆ ಹಠಾತ್ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಆದರೆ ಚಿಕಿತ್ಸೆ ಫಲಿಸದೆ ಅವರು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ರಾಕೇಶ್ ಅವರು ತಮ್ಮ ನಟನಾ ಪಯಣ ಆರಂಭಿಸಿದ್ದು ಚೈತನ್ಯ ಕಲಾವಿದರು ನಾಟಕ ತಂಡದ ಮೂಲಕ. ಬಳಿಕ 2014ರಲ್ಲಿ ಖಾಸಗಿ ಚಾನೆಲ್ ನಲ್ಲಿ ‘ಕಡ್ಲೆ ಬಜಿಲ್’ ಎಂಬ ತುಳು ರಿಯಾಲಿಟಿ ಶೋ ಮೂಲಕ ಅನೇಕ ಜನರ ಮನ ಗೆದ್ದಿದ್ದರು.
ನಂತರ ಹಲವು ಸಿನಿಮಾಗಳಿಗೆ ಆಡಿಷನ್ ನೀಡಿದರು. ಸುಮಾರು 150 ಆಡಿಷನ್ ನೀಡಿದ್ದ ರಾಕೇಶ್ ಪೂಜಾರಿ 2018 ರಲ್ಲಿ ಜೀ ಕನ್ನಡ ‘ಕಾಮಿಡಿ ಕಿಲಾಡಿಗಳು ಸೀಸನ್ 2’ ಶೋಗೆ ಸೆಲೆಕ್ಟ್ ಆದರು. ಇದರಲ್ಲಿ ರನ್ನರ್ ಅಪ್ ತಂಡದ ಸದಸ್ಯರಾಗಿದ್ದರು. ಬಳಿಕ 2020ರಲ್ಲಿ ‘ಕಾಮಿಡಿ ಕಿಲಾಡಿಗಳು ಸೀಸನ್ 3’ ವಿಜೇತರಾಗಿದ್ದರು.
ಕಿರುತೆರೆಯಲ್ಲಿ ರಾಕೇಶ್ ಜನಪ್ರಿಯತೆಯನ್ನು ಪಡೆದುಕೊಂಡಿದ್ದರು. ‘ಹಿಟ್ಲರ್ ಕಲ್ಯಾಣ’ದಲ್ಲಿ ಅವರು ನಟಿಸಿದ್ದರು. ಇದಲ್ಲದೆ ಸುದೀಪ್ ಅವರ ‘ಪೈಲ್ವಾನ್’ ಚಿತ್ರದಲ್ಲಿ ನಟಿಸಿದ್ದರು.
ನಟಿ ರಕ್ಷಿತಾ ಪ್ರೇಮ್ ಅವರು ರಾಕೇಶ್ ನಿಧನಕ್ಕೆ ಸಂತಾಪ ಸೂಚಿಸಿದ್ದು, ‘ಮಿಸ್ ಯೂ ಮಗನೇ.. ನಾನು ಇನ್ಯಾವತ್ತೂ ನಿನ್ನ ಜೊತೆ ಮಾತನಾಡಲು ಆಗಲ್ಲ, ಕಾಮಿಡಿ ಕಿಲಾಡಿ ನನ್ನ ಹೃದಯಕ್ಕೆ ಹತ್ತಿರವಾದ ಕಾರ್ಯಕ್ರಮ. ನೀನು ಅದರಲ್ಲಿ ಒಂದು ಶಕ್ತಿ ಆಗಿದ್ದೆ. ನಿನ್ನಂತಹ ಅದ್ಭುತ ವ್ಯಕ್ತಿ ನಮ್ಮ ಹೃದಯಲ್ಲಿ ನೆಲೆಸಿರುತ್ತಾರೆ ಎಂದು ಪೋಸ್ಟ್ ಮಾಡಿದ್ದಾರೆ.