ರಾಷ್ಟ್ರೀಯ ಹೆದ್ದಾರಿ 48ರ ಸಮೀಪದ ಕಲ್ಕುಂಟೆ ಗ್ರಾಮದ ಬಳಿ ಸೋಮವಾರ ಬೆಳಗಿನ ಜಾವ ಚಾಲಕನ ನಿಯಂತ್ರಣ ತಪ್ಪಿದ ಕಂಟೇನರ್ವೊಂದು ಡಿವೇಡರ್ ದಾಟಿ ಬಂದು ಲಾರಿಯೊಂದಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಚಾಲಕರಿಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಲಾರಿ ಚಾಲಕ ಮಹಂತೇಶ್ (35) ಹಾಗೂ ಕಂಟೇನರ್ ಚಾಲಕ, ಹರಿಯಾಣ ಮೂಲದ ಹಿಮ್ಮತ್ ಸಿಂಗ್ ಸಾವನಪ್ಪಿದ್ದಾರೆ.
ದಾವಣಗೆರೆಯಿಂದ ಬೆಂಗಳೂರಿನತ್ತ ಹೊರಟಿದ್ದ ಕಂಟೇನರ್, ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ನಡುವಿನ ಡಿವೇಡರ್ಗೆ ಅಪ್ಪಳಿಸಿದೆ. ಬಳಿಕ ಇನ್ನೊಂದು ಬದಿಯ ರಸ್ತೆಯ ಮೂಲಕ ಧಾರವಾಡದತ್ತ ಹೊರಟಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಲಾರಿಯ ಮುಂಭಾಗಕ್ಕೆ ಹಾನಿಯಾಗಿದೆ. ಕಂಟೇನರ್ ಮುಂಭಾಗವೂ ನಜ್ಜುಗುಜ್ಜಾಗಿದೆ.
ಲಾರಿಯಲ್ಲಿದ್ದ ಮಹಂತೇಶ್ ಅವರ ಪುತ್ರ ಹರ್ಷ ಮತ್ತು ಕಂಟೇನರ್ನಲ್ಲಿದ್ದ ಸುಬೇ ಸಿಂಗ್ ಅವರು ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದ್ದಾರೆ. ಇವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಭರಮಸಾಗರ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತಗೊಳಿಸಿದರು. ಭರಮಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

