
ಶ್ರೀ ಕ್ಷೇತ್ರ ಬಂಗಾರಮಕ್ಕಿ, ಗೇರಸೊಪ್ಪ (ತಾ: ಹೊನ್ನಾವರ) ಮಹಾಪೀಠಂ ಹಾಗೂ ಸಿಲೆಕ್ಟ್ ಫೌಂಡೇಶನ್ (ರಿ.) ಇವರ ವತಿಯಿಂದ ಆಯೋಜಿಸಲಾದ ರಾಜ್ಯ ಮಟ್ಟದ ಭಜನಾ ಸ್ಪರ್ಧೆಯಲ್ಲಿ ಮಹಾಲಿಂಗೇಶ್ವರ ಭಜನಾ ಮಂಡಳಿ, ದೈಲಬೆಟ್ಟು – ಕಲ್ಲಮುಂಡ್ಕೂರು ತಂಡವು ಅದ್ಭುತ ಸಾಧನೆ ಮಾಡಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ತಂಡವು ₹70,000 ನಗದು ಬಹುಮಾನ, ಸ್ಮರಣಿಕೆ ಹಾಗೂ ಪ್ರಶಸ್ತಿಪತ್ರಗಳನ್ನು ಪಡೆದು ಭಕ್ತಿ ಕಲೆಯಲ್ಲಿನ ತಮ್ಮ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಕಲಾರಾಜ್ಯೋತ್ಸವ ಹಾಗೂ ಶ್ರೇಷ್ಠ ಸಾಧಕ ಪುರಸ್ಕೃತ ಕುಣಿತ ಭಜನಾ ಗುರುಗಳಾದ ಅಶೋಕ್ ನಾಯ್ಕ್ ಕಳಸಬೈಲು ಅವರ ಮಾರ್ಗದರ್ಶನದಲ್ಲಿ ತಂಡವು ಶಿಸ್ತಿನ ಅಭ್ಯಾಸ ಹಾಗೂ ಸಮರ್ಪಣೆಯೊಂದಿಗೆ ವೇದಿಕೆಯಲ್ಲಿ ಮನಮೋಹಕ ಪ್ರದರ್ಶನ ನೀಡಿತು. ಅವರ ಮಾರ್ಗದರ್ಶನ ತಂಡದ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ.
ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು ಕಾರ್ತಿಕ್ ಶೆಟ್ಟಿ, ರಾಶಿಕ, ಶೀತಲ್, ಅಕ್ಷಿತ್, ಕಾರುಣ್ಯ, ವೈಷ್ಣವಿ, ಸುಸ್ಮಿತಾ, ರೀತಿಕಾ, ಚೈತ್ರ, ಅಶ್ರಿತ, ಯತೀಶ್, ಪೂರ್ಣಿಮಾ, ಪ್ರಧಾನ್, ಲಿಖಿತ್, ನವ್ಯ ಎಡಪದವು, ಶ್ರಾವ್ಯ ಕಾಂಬೆಟ್ಟು ಹಾಗೂ ಶಶಾಂಕ್ ಪುಪಾಡಿಕಲ್ಲು ತಮ್ಮ ಪ್ರತಿಭೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ತಂಡದ ಯಶಸ್ಸಿನ ಹಿಂದೆ ಗುರುಗಳಾದ ಅಶೋಕ್ ನಾಯ್ಕ್, ಅಧ್ಯಕ್ಷರಾದ ಕೃಷ್ಣಕುಲಾಲ್, ಕಾರ್ಯದರ್ಶಿಯಾದ ವಾಸುನಾಯ್ಕ್, ಸಂಗೀತ ಗುರುಗಳಾದ ವಿದ್ವಾನ್ ದುರ್ಗೇಶ್ ನಿಲುಗಲ್ ಹಾಗೂ ತಬಲಾ ವಾದಕರಾದ ಕೆ.ಪಿ. ವಿನೋದ್ ಅವರ ಪರಿಶ್ರಮ ಪ್ರಮುಖವಾಗಿದೆ.
ಈ ಸಾಧನೆಗೆ ಸ್ಥಳೀಯರು, ಭಕ್ತರು ಹಾಗೂ ಕಲಾಪ್ರೇಮಿಗಳು ಹರ್ಷ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಲು ತಂಡಕ್ಕೆ ಇದು ಪ್ರೇರಣೆಯಾಗಿದೆ.

