ಉಡುಪಿ : ಪ್ರಕರಣವೊಂದರಲ್ಲಿ ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ನ್ಯಾಯಾಲಯಕ್ಕೆ ವಂಚನೆ ಎಸಗಿದ ಆರೋಪದ ಮೇಲೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಚಾರಣಾಧೀನ ಕೈದಿ ನೌಮಾನ್ ಎಂಬಾತನಿಗೆ ನ್ಯಾಯಾಲಯದಲ್ಲಿ ಜಾಮೀನು ಒದಗಿಸುವ ಸಂದರ್ಭದಲ್ಲಿ ಅಕ್ರಮ ಎಸಗಿರುವುದು ಕಂಡು ಬಂದಿದೆ.
ಆರೋಪಿ ಫಾರೂಕ್ ಎಂಬಾತನು ತನ್ನ ಸ್ವಂತ ಲಾಭಕ್ಕಾಗಿ ಪ್ರಶಾಂತ್ ಎಂಬುವವರ ಆಧಾರ್ ಕಾರ್ಡ್ ಪ್ರತಿ ಬಳಸಿ, ಅದರಲ್ಲಿ ಕೆ.ಟಿ. ಮುಹಮ್ಮದ್ ಅವರ ಹೆಸರು ಹಾಗೂ ವಿಳಾಸವನ್ನು ಸೇರಿಸಿ ನಕಲಿಯಾಗಿ ಆಧಾರ್ ಕಾರ್ಡ್ ಸೃಷ್ಟಿಸಿದ್ದಾನೆ. ನಕಲಿ ದಾಖಲೆಯನ್ನು ಸತ್ಯವೆಂದು ಬಿಂಬಿಸಿ ನ್ಯಾಯಾಲಯಕ್ಕೆ ಮೋಸ ಮಾಡುವ ದುರುದ್ದೇಶದಿಂದ ಹಾಜರುಪಡಿಸಿದ್ದು, ಈ ಮೂಲಕ ನ್ಯಾಯಾಲಯಕ್ಕೆ ಹಾಗೂ ನೈಜ ದಾಖಲೆಗಳನ್ನು ಹೊಂದಿರುವ ಮುಹಮ್ಮದ್ ಕೆ.ಟಿ. ಮತ್ತು ಪ್ರಶಾಂತ್ ಅವರಿಗೆ ವಂಚನೆ ಎಸಗಿದ್ದಾನೆ.
ಈ ಬಗ್ಗೆ ಜಿಲ್ಲಾ ನ್ಯಾಯಾಲಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಬ್ಬಾಸ್ ಎಸ್. ನೀಡಿದ ದೂರಿನ ಆಧಾರದ ಮೇಲೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

