ಕುಂದಾಪುರ : ಶ್ರೀ ಗುರುರಾಘವೇಂದ್ರ ಭಜನಾ ಮಂಡಳಿ ಸೇವಾ ಟ್ರಸ್ಟ್ ಹಾಗೂ ಶ್ರೀ ರಾಘವೇಂದ್ರ ಮಠ, ಮದ್ದುಗುಡ್ಡೆ, ಕುಂದಾಪುರ ಇವರ ಆಶ್ರಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 44ನೇ ವರ್ಷದ ವಾರ್ಷಿಕ ಆರಾಧನಾ ಮಹೋತ್ಸವ ಶನಿವಾರ ಭಕ್ತಿಭಾವದಿಂದ ನೆರವೇರಿತು.
ಆರಾಧನಾ ಮಹೋತ್ಸವದ ಅಂಗವಾಗಿ ರಾತ್ರಿ ನಡೆದ ಸಾಂಸ್ಕೃತಿಕ ಸೇವಾ ಕಾರ್ಯಕ್ರಮದಲ್ಲಿ ಶಿರೂರು ಉಮೇಶ ಮೇಸ್ತ ಬಳಗದವರಿಂದ ‘ಶ್ರೀ ಗುರುರಾಯರ ಭಕ್ತಿ ಗಾನಾಮೃತ’ ಕಾರ್ಯಕ್ರಮ ನಡೆಯಿತು. ಸುದೀರ್ಘ ಎರಡು ಗಂಟೆಗಳ ಕಾಲ ನಡೆದ ಈ ಭಕ್ತಿ ಸಂಗೀತ ಕಾರ್ಯಕ್ರಮದಲ್ಲಿ ಉಮೇಶ ಮೇಸ್ತ ಅವರೊಂದಿಗೆ ರಾಜ್ಯ ಪ್ರಶಸ್ತಿ ಪುರಸ್ಕೃತ ಗಾಯಕ ಉಮೇಶ ಮುಂಡಳ್ಳಿ, ಶ್ರೀಕಾಂತ ಕಾಮತ್ ಹಾಗೂ ಸುದರ್ಶನ ಮೇಸ್ತ ಅವರು ಗುರುರಾಯರ ಹಲವು ಭಕ್ತಿಗೀತೆಗಳನ್ನು ಸುಮಧುರವಾಗಿ ಪ್ರಸ್ತುತಪಡಿಸಿದರು.
‘ಪಾದಕಂಡು ಪಾವನದೇನೋ’, ‘ಒಂದು ಬಾರಿ ಬಂದು ನೋಡಿ’, ‘ಬಾರೋ ರಾಘವೇಂದ್ರ ಬಾರೋ’, ‘ಕಾರುಣ್ಯ ವಾರಿಧಿ’ ಸೇರಿದಂತೆ ವಿವಿಧ ಭಕ್ತಿಗೀತೆಗಳು ನೆರೆದಿದ್ದ ಭಕ್ತರ ಮನಸೂರೆಗೊಂಡು, ಇಡೀ ವಾತಾವರಣವನ್ನು ಭಕ್ತಿರಸದಲ್ಲಿ ಮಿಂದೇಳುವಂತೆ ಮಾಡಿದವು.
ಉಮೇಶ ಮೇಸ್ತ ಅವರು ಗಾಯನದ ಜೊತೆಗೆ ಹಾರ್ಮೋನಿಯಂನಲ್ಲಿ ಸಾಥ್ ನೀಡಿದರೆ, ಶ್ಯಾಮ್ ಮೇಸ್ತ ಅವರು ಮೃದಂಗದಲ್ಲಿ ಹಾಗೂ ಸುದಾಮ್ ಮೇಸ್ತ ಅವರು ತಬಲಾದಲ್ಲಿ ಸಹಕರಿಸಿದರು. ಗಾಯಕರ ಹಾಗೂ ವಾದ್ಯ ಕಲಾವಿದರ ಸುಂದರ ಸಂಗಮದಿಂದ ಕಾರ್ಯಕ್ರಮ ವಿಶೇಷ ಮೆರುಗು ಪಡೆದುಕೊಂಡಿತು.
ಮಹಾಪೂಜೆಯ ಬಳಿಕ ಆಯೋಜಕರ ವತಿಯಿಂದ ಉಮೇಶ ಮೇಸ್ತ ಹಾಗೂ ಬಳಗದ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು. ಭಕ್ತಿ, ಸಂಗೀತ ಹಾಗೂ ಸಾಂಸ್ಕೃತಿಕ ಸೇವೆಯ ಅಪೂರ್ವ ಸಂಗಮವಾಗಿದ್ದ ಈ ಕಾರ್ಯಕ್ರಮವು ನೆರೆದ ಭಕ್ತರ ಮನದಲ್ಲಿ ಅವಿಸ್ಮರಣೀಯ ಭಕ್ತಿಯ ಅನುಭೂತಿಯನ್ನು ಮೂಡಿಸಿತು.

