ಉಡುಪಿ: ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಆ್ಯಂಡ್ ಆರ್ಕಿಟೆಕ್ಟ್ಸ್ ಉಡುಪಿ (ಎಸಿಸಿಇಎ) ವತಿಯಿಂದ ಹಮ್ಮಿಕೊಂಡಿದ್ದ ಎಂಜಿನಿಯರ್ಸ್ ದಿನಾಚರಣೆಯು ಅಜ್ಜರಕಾಡು ಪುರಭವನದಲ್ಲಿ ಮಂಗಳವಾರ ನಡೆಯಿತು.
ಶಾಸಕ ಯಶಪಾಲ್ ಎ. ಸುವರ್ಣ ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ, ನಗರದ ಸಮಗ್ರ ಅಭಿವೃದ್ಧಿಯಲ್ಲಿ ಎಂಜಿನಿಯರ್ಸ್ ಕೊಡುಗೆ ಅಪಾರವಾಗಿದೆ. ಉಡುಪಿಯ ಸರ್ವಾಂಗೀಣ ಅಭಿವೃದ್ಧಿಗೆ ವಿಫುಲ ಅವಕಾಶವಿದ್ದು, ಜಿಲ್ಲೆಗೊಂದು ಹೊಸ ರೂಪ ನೀಡುವುದಕ್ಕೆ ಎಂಜಿನಿಯರ್ಸ್ನ ಜತೆಗೆ ಸದಾ ಸಹಕಾರ ನೀಡುವುದಾಗಿ ತಿಳಿಸಿದರು.
ರಸ್ತೆ, ರೈಲ್ವೇ, ಜಲಮಾರ್ಗ ಸೇರಿದಂತೆ ಸಾಕಷ್ಟು ವ್ಯವಸ್ಥೆಗಳಿದ್ದು, ಈ ಎಲ್ಲಾ ಸವಲತ್ತುಗಳನ್ನು ಬಳಸಿಕೊಳ್ಳಬೇಕು. 11ಇ, ಭೂ ಪರಿವರ್ತನೆ, ಸಿಆರ್ಝಡ್ ಸಹಿತ ಕೆಲವೊಂದು ತಾಂತ್ರಿಕ ಅಡಚಣೆಯಿಂದ ಅಭಿವೃದ್ಧಿ ಕಾರ್ಯಕ್ಕೆ ತೊಡಕು ಆಗುತ್ತಿದ್ದು, ಸರಕಾರ ಮಟ್ಟದಲ್ಲಿ ಈ ಬಗ್ಗೆ ಧ್ವನಿ ಎತ್ತುವುದಾಗಿ ತಿಳಿಸಿದರು.
ಮಂಗಳೂರು ಸ್ಮಾರ್ಟ್ ಸಿಟಿ ಲಿ.ನ. ಜನರಲ್ ಮ್ಯಾನೇಜರ್ (ತಾಂತ್ರಿಕ) ಅರುಣ್ ಪ್ರಭಾ ಕೆ.ಎಸ್. ಮಾತನಾಡಿದರು.
ವಿದ್ಯಾರ್ಥಿ ವೇತನದ ದಾನಿ, ಸ್ಟೀಲ್ ವಿಶನ್ ಬಿಲ್ಡಿಂಗ್ ಸೊಲ್ಯೂಶನ್ಸ್ನ ವ್ಯವಸ್ಥಾಪಕ ನಿರ್ದೇಶಕ ವಿಶ್ವ ಪ್ರತಾಪ್ ಶೆಟ್ಟಿ, ಮಣಿಪಾಲ ಮಾಹೆ ಕಾರ್ಪೊರೇಟ್ ರಿಲೇಶನ್ಸ್ನ ನಿರ್ದೇಶಕ ಡಾ. ಹರೀಶ್ ಕುಮಾರ್ ಎಸ್., ಎಸಿಸಿಇಎ ಉಡುಪಿ ಗೌರವಾಧ್ಯಕ್ಷ ಶ್ರೀನಾಗೇಶ್ ಹೆಗ್ಡೆ, ಅಮಿತ್ ಅರವಿಂದ್ ನಾಯಕ್ , ಗೋಪಾಲ್ ಭಟ್ ಪಧಾಧಿಕಾರಿಗಳು ಉಪಸ್ಥರಿದ್ದರು
ಸಂಸ್ಥೆಯ ಹಿರಿಯ ಎಂಜಿನಿಯರ್ಸ್ಗಳಾದ ರಾಮಚಂದ್ರ ಮಯ್ಯ ಮತ್ತು ಸುಭಾಶ್ಚಂದ್ರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸೆಂಟರಿಂಗ್ ಕೆಲಸದಲ್ಲಿ ಪ್ರಾವೀಣ್ಯತೆ ಹೊಂದಿರುವ ನಿವೃತ್ತ ಗುತ್ತಿಗೆದಾರ ಕೃಷ್ಣಯ್ಯ ಆಚಾರ್ಯ ಅವರನ್ನು ಗೌರವಿಸಲಾಯಿತು.
ಈ ಬಾರಿ 6 ಜನ ಡಿಪ್ಲೋಮಾ ಇನ್ ಸಿವಿಲ್ ಎಂಜಿನಿಯರ್ನ ವಿದ್ಯಾರ್ಥಿಗಳಿಗೆ ತಲಾ 25,000 ರೂ. ಗಳಂತೆ ಪ್ರೋತ್ಸಾಹಧನ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಆ್ಯಂಡ್ ಆರ್ಕಿಟೆಕ್ಟ್ಸ್ ಉಡುಪಿ (ಎಸಿಸಿಇಎ) ಅಧ್ಯಕ್ಷ ಭಗವಾನ್ದಾಸ್ ಕೆ. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಆರ್. ಮಹೇಶ್ ಕಾಮತ್ ವರದಿ ವಾಚಿಸಿದರು. ಎಂಜಿನಿಯರ್ ಜಗದೀಶ್ ಆಚಾರ್ಯ, ಸಂದೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

