ಸಖರಾಯಪಟ್ಟಣ: ಇತಿಹಾಸ ಪ್ರಸಿದ್ಧ ಕಾಳಹಸ್ತೀಶ್ವರ ದೇವಾಲಯದ ಜೀರ್ಣೋದ್ಧಾರ ಕೆಲಸಗಳು ಪೂರ್ಣಗೊಂಡಿದ್ದು, ಫೆ.4ರಿಂದ ಮೂರು ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ. ಪ್ರಾಚ್ಯ ವಸ್ತು ಗ್ರಹಾಲಯ, ಧಾರ್ಮಿಕ ದತ್ತಿ ಇಲಾಖೆ, ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ಮತ್ತು ವಿಶ್ವಕರ್ಮ ಕಾಳಹಸ್ತೀಶ್ವರ ಸೇವಾ ಸಹಯೋಗದಲ್ಲಿ ಕಾಳಹಸ್ತೇಶ್ವರ ಸ್ವಾಮಿ ದೇವಾಲಯ ಜೀರ್ಣೋದ್ದಾರಗೊಳಿಸಲಾಗಿದೆ. ಶ್ರೀ ವಿಶ್ವಕರ್ಮ, ಶ್ರೀ ಕಾಳಿಕಾದೇವಿ, ಗಣಪತಿ, ನಂದಿ, ನಾಗದೇವತೆಗಳ ನೂತನ ವಿಗ್ರಹ ಬಿಂಬ ಪ್ರತಿಷ್ಠಾಪನೆ ಹಾಗೂ ಬ್ರಹ್ಮ ಕಲಶ ಮಹೋತ್ಸವ ಮೂರು ದಿನಗಳ ಕಾಲ ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ, ವಡ್ಡನ ಹಾಳ್ ಶ್ರೀ ಶಂಕರಾತ್ಮಾನಂದ ಸರಸ್ವತೀ ಸ್ವಾಮೀಜಿ, ಡಿ.ವೀರೇಂದ್ರ ಹೆಗ್ಗಡೆ ಇವರ ಸಾನ್ನಿಧ್ಯದಲ್ಲಿ ನಡೆಯುವುದು.
ಬುಧವಾರ ಬೆಳಗ್ಗೆ ಹೊರನಾಡಿನ ಜಿ.ಭೀಮೇಶ್ವರ ಜೋಷಿ ಧಾರ್ಮಿಕ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸುವರು. ಸಂಜೆ ಶಿಲ್ಪಿ ಪೂಜೆ, ಆಲಯ ಮತ್ತು ಬಿಂಬ ಪರಿಗ್ರಹ ಮುಂತಾದ ಧಾರ್ಮಿಕ ವಿಧಿಗಳು ನೆರವೇರುವುದು. ನಂತರ ನಾಗ ಬನದಲ್ಲಿ ಬಲಿ ಪೂಜೆ ನಡೆಯುವುದು. ನಂತರ ಅನ್ನಸಂತರ್ಪಣೆ ನಡೆಯುವುದು.
ಗುರುವಾರ ಬೆಳಗ್ಗೆ ವೇದ ಪಾರಾಯಣ ದೊಂದಿಗೆ ವಿಧಗಳು ಆರಂಭಗೊಳ್ಳುವವು. ಬಾಲಾಲಯದಿಂದ ದೇವರ ಮೂರ್ತಿ ಯನ್ನು ಕರೆತರುವುದು. ಯಾಗ ಮಂಟಪಕ್ಕೆ ಮಹಾಪೂಜೆ, ಪೂರ್ಣಾಹುತಿ, ಪ್ರಸಾದ ವಿನಿಯೋಗದ ನಂತರ ಅನ್ನಸಂತರ್ಪಣೆ ನಡೆಯುವುದು. ಸಂಜೆ ದೇವರ ಮೂರ್ತಿಗಳ ಬಿಂಬ ಕಲಶಪೂಜೆ, ಪ್ರಸಾದ ವಿನಿಯೋಗದ ಬಳಿಕ ಅನ್ನಸಂತರ್ಪಣೆ ಬಳಿಕ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದು.
ಶುಕ್ರವಾರ ಬೆಳಗ್ಗೆ ವೇದಪಾರಾಯಣ ಸಮೇತ ವಿವಿಧ ಧಾರ್ಮಿಕ ವಿಧಿಗಳು ನಡೆಯುವವು. ಪ್ರಧಾನ ಹೋಮ, ಬ್ರಹ್ಮಕಲಶಾಭಿಷೇಕ, ಅನ್ನಪೂರ್ಣೇಶ್ವರಿ ಪೂಜೆ, ಮಂತ್ರಾಕ್ಷತೆ ಬಳಿಕ ತೀರ್ಥ-ಪ್ರಸಾದ ವಿನಿಯೋಗ, ಸ್ವಾಮೀಜಿ, ಜನಪ್ರತಿನಿಧಿಗಳು, ಅತಿಥಿಗಳ ಅನ್ನಸಂತರ್ಪಣೆ ನಡೆಯುವುದು.

