ಚಿಕ್ಕಮಗಳೂರು : ಜಿಲ್ಲೆಯ (chikkamagaluru) ಹೆಬ್ಬಳ್ಳಿ ಗ್ರಾಮದಲ್ಲಿ ಆಟವಾಡುತ್ತಿದ್ದ ಹತ್ತು ವರ್ಷದ ಬಾಲಕಿಯೊಬ್ಬಳನ್ನು ವಿಧಿ ವಿಚಿತ್ರ ರೀತಿಯಲ್ಲಿ ಬಲಿ ಪಡೆದಿದೆ. ಮನೆಯಲ್ಲಿ ಸೀರೆಯಿಂದ ಕಟ್ಟಿದ್ದ ಉಯ್ಯಾಲೆಯಲ್ಲಿ ಆಟವಾಡುತ್ತಿದ್ದ ಬಾಲಕಿ, ಅಕಸ್ಮಿಕವಾಗಿ ಸೀರೆ ಕುತ್ತಿಗೆಗೆ ಬಿಗಿದುಕೊಂಡುಮೃತಪಟ್ಟಿರುವ ಘಟನೆ ಸಂಭವಿಸಿದೆ.
ಚಿಕ್ಕಮಗಳೂರು ತಾಲೂಕಿನ ಹೆಬ್ಬಳ್ಳಿ ಗ್ರಾಮದ ನಿವಾಸಿಯಾದ ಪುಟ್ಟ ಕಂದಮ್ಮ ಲೇಖನಾ (10) ಮೃತಪಟ್ಟ ದುರ್ದೈವಿ. ಮನೆಯಲ್ಲಿ ಪೋಷಕರು ಇಲ್ಲದ ಸಮಯದಲ್ಲಿ ಬಾಲಕಿ ಸೀರೆಯಿಂದ ತಯಾರಿಸಿದ ಉಯ್ಯಾಲೆಯಲ್ಲಿ ಆಟವಾಡುತ್ತಿದ್ದಳು. ಆಟವಾಡುತ್ತಾ ಜೋಕಾಲಿಯಲ್ಲಿ ಗಿರಕಿ ಹೊಡೆಯುವಾಗ ಅಥವಾ ಆಕಸ್ಮಿಕವಾಗಿ ಕಾಲು ಜಾರಿದಾಗ, ಸೀರೆಯು ಆಕೆಯ ಕುತ್ತಿಗೆಗೆ ಬಿಗಿಯಾಗಿ ಸುತ್ತಿಕೊಂಡಿದೆ. ಇದರಿಂದಾಗಿ ಬಾಲಕಿಗೆ ಉಸಿರಾಡಲು ಸಾಧ್ಯವಾಗದೇ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎನ್ನಲಾಗಿದೆ.
ಕೆಲಸ ಮುಗಿಸಿ ಪೋಷಕರು ಮನೆಗೆ ಬಂದಾಗ ಮಗು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಆಟವಾಡುತ್ತಿದ್ದ ಮಗು ಹೆಣವಾಗಿ ಬಿದ್ದಿರುವುದನ್ನು ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ.

