ಬೆಂಗಳೂರು : ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ‘ಭಾಗ್ಯಲಕ್ಷ್ಮಿ’ ಯೋಜನೆಯಡಿ ನೋಂದಾಯಿಸಿಕೊಂಡಿರುವ ಹೆಣ್ಣುಮಕ್ಕಳು, ಬಾಂಡ್ ಮೆಚ್ಯೂರಿಟಿ ಅವಧಿ ಪೂರ್ಣಗೊಂಡ ಬಳಿಕ ಸುಮಾರು 1 ಲಕ್ಷ ರೂ.ವರೆಗೆ ಹಣ ಪಡೆಯಬಹುದು. ಈ ಹಣ ಪಡೆಯಲು ಅಗತ್ಯವಿರುವ ಷರತ್ತುಗಳು, ದಾಖಲೆಗಳು ಹಾಗೂ ಅರ್ಜಿ ಸಲ್ಲಿಸುವ
ವಿಧಾನ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.
ಅರ್ಜಿ ಸಲ್ಲಿಸಲು ಇರಬೇಕಾದ ಪ್ರಮುಖ ಷರತ್ತುಗಳು:
- ಹೆಣ್ಣು ಮಗುವಿಗೆ ಕಡ್ಡಾಯವಾಗಿ 18 ವರ್ಷ ಪೂರ್ಣಗೊಂಡಿರಬೇಕು.
- ಕನಿಷ್ಠ 8ನೇ ತರಗತಿಯವರೆಗೆ ಶಿಕ್ಷಣ ಪೂರ್ಣಗೊಳಿಸಿರಬೇಕು.
- 18 ವರ್ಷಕ್ಕೆ ಮುನ್ನ ಮದುವೆಯಾಗಿರಬಾರದು.
- ಬಾಲಕಾರ್ಮಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರಬಾರದು.
ಅಗತ್ಯ ದಾಖಲೆಗಳು:
- ಒರಿಜಿನಲ್ ಭಾಗ್ಯಲಕ್ಷ್ಮಿ ಬಾಂಡ್
(ಕಳೆದುಹೋಗಿದ್ದರೆ ಜೆರಾಕ್ಸ್ ಪ್ರತಿ ಹಾಗೂ ಸ್ವಯಂ ಘೋಷಣಾ ಪತ್ರ) - ಮಗುವಿನ ಆಧಾರ್ ಕಾರ್ಡ್
- ತಂದೆ-ತಾಯಿಯ ಆಧಾರ್ ಕಾರ್ಡ್ ಪ್ರತಿಗಳು
- 3-4 ಪಾಸ್ಪೋರ್ಟ್ ಸೈಜ್ ಫೋಟೋಗಳು
- ಮಗುವಿನ ಹೆಸರಿನ ಬ್ಯಾಂಕ್ ಖಾತೆ ಅಥವಾ ಪೋಷಕರೊಂದಿಗೆ ಜಂಟಿ ಖಾತೆ ವಿವರ
- 8ನೇ ತರಗತಿಯವರೆಗಿನ ವ್ಯಾಸಾಂಗ ಪ್ರಮಾಣಪತ್ರ
- ಜನನ ಪ್ರಮಾಣಪತ್ರ
ಅರ್ಜಿ ಸಲ್ಲಿಸುವ ವಿಧಾನ:
ಫಲಾನುಭವಿಗಳು ತಮ್ಮ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಅರ್ಜಿ ಸಲ್ಲಿಸಬಹುದು.
ಅಥವಾ ತಾಲೂಕು ಮಟ್ಟದ ಶಿಶು ಅಭಿವೃದ್ಧಿ ಯೋಜನಾಧಿಕಾರಿ (CDPO) ಕಚೇರಿಗೆ ಭೇಟಿ ನೀಡಿ ‘ಮೆಚ್ಯೂರಿಟಿ ಕ್ಲೇಮ್ ಫಾರ್ಮ್’ ಪಡೆದು ಭರ್ತಿ ಮಾಡಿ ಸಲ್ಲಿಸಬಹುದು.
ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಸ್ವಯಂ ಘೋಷಣಾ ಪತ್ರಕ್ಕೆ ಸಹಿ ಮಾಡಬೇಕು.
ಹಣ ಯಾವಾಗ ಜಮೆಯಾಗುತ್ತದೆ?
ಅರ್ಜಿಯಲ್ಲಿನ ದಾಖಲೆಗಳು ಸರಿಯಾಗಿದ್ದರೆ ಹಾಗೂ ಅಧಿಕಾರಿಗಳ ಅನುಮೋದನೆ ದೊರೆತ ಬಳಿಕ ಸುಮಾರು 1 ರಿಂದ 2 ತಿಂಗಳೊಳಗೆ ಹಣ ಫಲಾನುಭವಿಯ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗುತ್ತದೆ.
ಪ್ರಮುಖ ಸೂಚನೆ:
- 18 ವರ್ಷ ಪೂರ್ಣಗೊಳ್ಳುವ ಮೊದಲು ಮಗು ಮೃತಪಟ್ಟಿದ್ದರೆ ಈ ಸೌಲಭ್ಯ ಲಭ್ಯವಿರುವುದಿಲ್ಲ.
- 18 ವರ್ಷ ಬಳಿಕ ಮರಣ ಹೊಂದಿದರೆ ಪೋಷಕರಿಗೆ ಸೌಲಭ್ಯ ಸಿಗುವ ಅವಕಾಶವಿರುತ್ತದೆ.
- ಸುಳ್ಳು ಮಾಹಿತಿ ನೀಡಿ ಹಣ ಪಡೆಯಲು ಯತ್ನಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಗನವಾಡಿ ಕೇಂದ್ರ ಅಥವಾ CDPO ಕಚೇರಿಯನ್ನು ಸಂಪರ್ಕಿಸಬಹುದು.

