ಬಂಟ್ವಾಳ : ಮುಡಿಪುವಿನ ವಿಶ್ವಭಾರತಿ ಯಕ್ಷ ಸಂಜೀವಿನಿ ಟ್ರಸ್ಟ್ (ರಿ.) ಮತ್ತು ಬಂಟ್ವಾಳ ತಾಲೂಕಿನ ತುಳು ಶಿವಳ್ಳಿ ಸೇವಾ ಟ್ರಸ್ಟ್ ಇವುಗಳ ಜಂಟಿ ಸಹಯೋಗದಲ್ಲಿ ‘ವಿಶ್ವಭಾರತಿ ಯಕ್ಷ ಸಂಭ್ರಮ’ ಎಂಬ ವಿನೂತನ ಯಕ್ಷಗಾನ ತಾಳಮದ್ದಳೆ ಸಪ್ತಾಹವನ್ನು ಆಯೋಜಿಸಲಾಗಿದೆ.
ಈ ಸಾಂಸ್ಕೃತಿಕ ಕಾರ್ಯಕ್ರಮವು ಬಿ.ಸಿ.ರೋಡಿನ ತುಳು ಶಿವಳ್ಳಿ ಸಭಾಭವನದಲ್ಲಿ ನಡೆಯಲಿದೆ.
ಜುಲೈ 20 ರಿಂದ 26 ರವರೆಗೆ ಕಾರ್ಯಕ್ರಮ:-
ಈ ಯಕ್ಷಗಾನ ತಾಳಮದ್ದಳೆ ಸಪ್ತಾಹವು ಜುಲೈ 20ನೇ ಸೋಮವಾರದಿಂದ ಪ್ರಾರಂಭಗೊಂಡು ಜುಲೈ 26ನೇ ಆದಿತ್ಯವಾರದವರೆಗೆ ಸತತ ಏಳು ದಿನಗಳ ಕಾಲ ಜರುಗಲಿದೆ.
ಪ್ರತಿದಿನ ಸಂಜೆ 4:00 ಗಂಟೆಗೆ ಸಭಾ ಕಾರ್ಯಕ್ರಮ ಆರಂಭವಾಗಲಿದ್ದು, ಸಂಜೆ 4:30 ರಿಂದ ಪ್ರಸಿದ್ಧ ಕಲಾ ಸಂಘ ಹಾಗೂ ಕಲಾವಿದರಿಂದ ತಾಳಮದ್ದಳೆ ಪ್ರಸಂಗಗಳು ಮೂಡಿಬರಲಿವೆ.
ವೈವಿಧ್ಯಮಯ ಪ್ರಸಂಗಗಳು:-
ಸಪ್ತಾಹದ ದಿನಗಳಲ್ಲಿ ಮಹಾಶೂರ ಭೌಮಾಸುರ, ಭೀಷ್ಮ ಪ್ರತಿಜ್ಞೆ, ಶಾಂಭವಿ ವಿಜಯ, ದಕ್ಷಯಜ್ಞ, ಮೋಕ್ಷ ಸಂಗ್ರಾಮ, ಅತಿಕಾಯ ಮೋಕ್ಷ ಹಾಗೂ ಕೊನೆಯ ದಿನವಾದ ಭಾನುವಾರ ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಹಿಮ್ಮೇಳ-ಮುಮ್ಮೇಳದೊಂದಿಗೆ ‘ಅಂಗದ ಸಂಧಾನ’ ತಾಳಮದ್ದಳೆ ಪ್ರಸಂಗಗಳು ಪ್ರದರ್ಶನಗೊಳ್ಳಲಿವೆ.
ಕಾರ್ಯಕ್ರಮದಲ್ಲಿ ನಾಡಿನ ಪ್ರಮುಖ ಧಾರ್ಮಿಕ ಮುಖಂಡರು, ರಾಜಕೀಯ ಗಣ್ಯರು, ಯಕ್ಷಗಾನ ಸಂಘಟಕರು ಹಾಗೂ ವಿದ್ವಾಂಸರು ಭಾಗವಹಿಸಲಿದ್ದಾರೆ.
ಕೊನೆಯ ದಿನದಂದು ಗೌರವ ಪುರಸ್ಕಾರ ಕಾರ್ಯಕ್ರಮವೂ ಇರಲಿದ್ದು, ಕಲಾಭಿಮಾನಿಗಳಿಗೆ ಮುಕ್ತ ಆಹ್ವಾನ ನೀಡಲಾಗಿದೆ ಎಂದು ಸಂಚಾಲಕರಾದ ಪ್ರಶಾಂತ್ ಹೊಳ್ಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ-ಮಂದಾರ ರಾಜೇಶ್ ಭಟ್

