ದಾವಣಗೆರೆ- ಮಕ್ಕಳು ಚಿಕ್ಕ ವಯಸ್ಸಿನಲ್ಲಿ ಕುಚೇಷ್ಠ, ಓಡಾಟ, ಜಗಳ, ಆಟೋಟ ಸಹಜ ಪ್ರೌಢಶಾಲಾ ಹಂತ ಮಕ್ಕಳ ಜೀವನದ ಒಂದು ತಿರುವು, ಮಕ್ಕಳು ಈ ಪರಿಸ್ಥಿತಿಯಲ್ಲಿ ತಮ್ಮ ಮುಂದಿನ ಜೀವನದ ಸಾಧನೆಗೆ ತಮ್ಮ ಭವ್ಯ ದಿವ್ಯ ಸ್ಥಾನಕ್ಕೆ ಈಗಲೇ ಸಂಕಲ್ಪ ಮಾಡಬೇಕಾಗಿದೆ. ಮೊಬೈಲ್, ಟಿ.ವಿ.ಬಿಟ್ಟು ಶಿಕ್ಷಣದ ಕಡೆಗೆ ಗುರಿ ಇಟ್ಟು ತಂದೆ-ತಾಯಿಗಳ ಕನಸು ನನಸು ಮಾಡಬೇಕಾದ ಅಗತ್ಯವಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಾವಣಗೆರೆ ಆಯುಕ್ತರಾದ ಎ.ಪಿ.ಷಡಾಕ್ಷರಪ್ಪ ತಮ್ಮ ಮನದಾಳದ ಮಾತು ವ್ಯಕ್ತಪಡಿಸಿದರು.
ದಾವಣಗೆರೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ಕಲಾಕುಂಚ ವಿದ್ಯಾನಗರ ಶಾಖೆಯ ಸಂಯುಕ್ತಾಶ್ರಯದಲ್ಲಿ ಇತ್ತಿಚೆಗೆ ಜಯದೇವ ವೃತ್ತದ ಹತ್ತಿರವಿರುವ ಪಿ.ಜೆ. ಬಡಾವಣೆಯ ಡಿ.ಆರ್.ಎಂ.ಸ್ಕೌಟ್ ಭವನದ ಸಭಾಂಗಣದಲ್ಲಿ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ ಎದುರಿಸುವ ಮಕ್ಕಳಿಗೆ ಉಚಿತ ಕಾರ್ಯಾಗಾರ ಸಮಾರಂಭವನ್ನು ಜ್ಯೋತಿ ಬೆಳಗುವುದರೊಂದಿಗೆ ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಲಾಕುಂಚದ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್ ವಹಿಸಿ ಮಾತನಾಡಿ, ನಮ್ಮ ದೇಶದ ಹೆಸರಾಂತ ಸಂಸ್ಥೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ತವ್ಯ ನಿಷ್ಠೆಯೊಂದಿಗೆ ಸಮಯ ಪ್ರಜ್ಞೆಯೊಂದಿಗೆ, ಶಿಸ್ತು ಬದ್ಧವಾಗಿ ನಡೆಯುತ್ತಿರುವುದು ಶ್ಲಾಘನೀಯ ಇತರೆ ಸಂಘಟನೆಗಳಿಗೆ ಮಾದರಿಯಾಗಿದೆ ಎಂದರು. ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರು ಮಕ್ಕಳಿಗೆ ಎಸ್.ಎಸ್.ಎಲ್.ಸಿ. ಪರೀಕ್ಷೆ ಬಗ್ಗೆ ಪೂರ್ವಭಾವಿ ಸಿದ್ದತೆ ಉಚಿತ ಕಾರ್ಯಾಗಾರ ನಡೆಸಿ ಶಿಕ್ಷಕರ, ಪೋಷಕರ ಅನುಮತಿ ಪಡೆದು ಪ್ರತಿಜ್ಞಾವಿಧಿ ಬೋಧನೆ ಮಾಡಿದರು.
ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್ ಶೆಣೈ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಂಘಟಕರಾದ ಅಶ್ವಿನಿ ಜೆ., ಶಿಕ್ಷಕರಾದ ವಿಜಯ ಜೆ.ಎನ್. ವೇದಿಕೆಯಲ್ಲಿ ಗೌರವ ಉಪಸ್ಥಿತರಿದ್ದರು. ಕುಮಾರಿ ಹಂಸಿಕಾ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ ಶ್ರೀಮತಿ ಪುಷ್ಪಾ ಮಂಜುನಾಥ್ ಸ್ವಾಗತಿಸಿದರು. ಕಲಾಕುಂಚ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ಕೊನೆಯಲ್ಲಿ ವಂದಿಸಿದರು.

