ಆಗಸ್ಟ್ 15 ಶಾಲಾ ಮಕ್ಕಳಿಗೆ ಹರುಷದ ದಿನ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಖುಷಿ. ಅಲ್ಲ ನಮಗಾಗಿ, ನಮ್ಮ ದೇಶಕ್ಕಾಗಿ, ದೇಶದ ಉದ್ಧಾರಕ್ಕಾಗಿ ಅದೆಷ್ಟೋ ವೀರರು ಜೀವವನ್ನು ಪಣಕ್ಕಿಟ್ಟು ಸ್ವತಂತ್ರ ಭಾರತವನ್ನಾಗಿಸಿದ ದಿನ. ಆಗಸ್ಟ್ 15 ಎಂದರೆ ಸ್ವಾತಂತ್ರ್ಯ ಸಿಕ್ಕ ದಿನ. ಇಲ್ಲಿ ಮುಖ್ಯವಾಗಿ ಕಾಣುವ ವ್ಯಕ್ತಿ ಮತ್ತು ವ್ಯಕ್ತಿತ್ವ ಮಹಾತ್ಮಾ ಗಾಂಧಿ . ಹೌದು! ಅದೂ ನಿಜ. ಆದರೆ ಈ ಯುದ್ಧ ಜಯಶಾಲಿಯಾಗಲು , ಸ್ವತಂತ್ರರಾಗುವ ಹಂಬಲದ ನಾಟಕ ವೇದಿಕೆಯಲ್ಲಿ ಪರದೆ ಹಿಂದೆ ಆಡಿ ರಕ್ತ ಹರಿಸಿ ಹೋರಾಡಿದ ಅದೆಷ್ಟೋ ಸಾಮಾನ್ಯ ವೀರರು ಇಂದಿಗೂ ಕಣ್ಮರೆಯಾಗಿ ಎಲೆಮರೆಯ ಕಾಯಿಯಂತೆ ಉಳಿದುಕೊಂಡಿದ್ದಾರೆ. ಯಾಕೆಂದರೆ ಬಾಲ್ಯದಿಂದಲೇ ಪಠಣ ಮಾಡಿದ ಪಾಠ “ಸ್ವಾತಂತ್ರ್ಯ ಎಂದರೆ ಗಾಂಧೀಜಿ, ಗಾಂಧೀಜಿ ಎಂದರೆ ಸ್ವಾತಂತ್ರ್ಯ”.
ಯಾಕೆಂದರೆ ಇಲ್ಲಿನ ಮುಖ್ಯ ವ್ಯಕ್ತಿ ಗಾಂಧಿಜೀ. ಆಗಸ್ಟ್ ತಿಂಗಳು ಎಂದರೆ ಬಾಲ್ಯದಲ್ಲಿ 15 ತಾರೀಕಿನ ಬರುವಿಕೆಯನ್ನು ಕಾಯುವುದು. ಅದು ಸ್ವಾತಂತ್ಯ್ರದ ಇತಿಹಾಸವನ್ನು ತಿಳಿಯದ ವಯಸ್ಸು. ನಾನು ಕಾಯುವುದು ಶಾಲೆಯಲ್ಲಿ ಸಿಗುವ ಚಾಕೊಲೇಟ್ , ಹೆಚ್ಚೆಂದರೆ ಸಿಹಿಯಾದ ಲಡ್ಡು ಸವಿಯಲು. ಆ ದಿನದ ಗದ್ದಲವೇ ಖುಷಿ. ಸ್ವತಂತ್ರವಾಗುವ ಹಿಂದಿನ ದಿನ ತ್ರಿವರ್ಣ ಧ್ವಜ, ಕೈಬಳೆ, ಹೇರ್ ಬ್ಯಾಂಡ್, ಮಾಲೆ , ಬ್ಯಾಜ್ ಹೀಗೆ ಎಲ್ಲವೂ ಒಂದೇ ಬಣ್ಣದ ವಸ್ತುಗಳ ಖರೀದಿಸಿ ಮರುದಿನ ಅದನ್ನು ಧರಿಸಿ ಶಾಲೆಗೆ ಹೋಗುವ ಖುಷಿಯೇ ಬೇರೆ. ಆ ದಿನದ ವಿಶೇಷ ಎಂದರೆ ದೇಶ ಭಕ್ತಿ ಗಾನ, ನೃತ್ಯ, ಭಾಷಣ ಹೀಗೆ ವಿವಿಧ ಕಲೆಯನ್ನು ಹೊರಹಾಕುವ ವೇದಿಕೆಯೂ ಹೌದು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರ ಸ್ಮರಣೆ, ಅವರ ಬಗೆಗಿನ ಭಾಷಣ.ಅರ್ಥವಾಗದಿದ್ದರೂ , ನಿದ್ದೆ ತೂಗಿದರೂ ಆಲಿಸುತ್ತಿದ್ದ ಸ್ವಾತಂತ್ರ್ಯ ದಿನ . ಆದರೆ ಇಂದಿನ ಕಾಲ ಬದಲಾಗಿದೆ. ಅದೇ ಭಾಷಣ ,ಅದೇ ಗಾಂಧಿ , ಅದೇ ಬಣ್ಣದ ಬಾವುಟ ಎಲ್ಲವೂ ಅದೇ. ಆದರೆ ಇಂದಿನ ದೇಶ ಪ್ರೇಮ ಒಂದು ದಿನಕ್ಕೆ ಸೀಮಿತ. ಆ ದಿನದ ಒಂದು ಸ್ಟೇಟಸ್ ಮೇಲೆ ಹರಿದಾಡೋ ದೇಶ ಪ್ರೇಮ ಮರುದಿನ ಅದೇ ಸಮಯಕ್ಕೆ ಅಥವಾ ಅದಕ್ಕಿಂತ ಮೊದಲು ಅಲ್ಲಿಂದ ಮಾಯಾ. ಆಗಸ್ಟ್ 15 ಕ್ಕೇ ಎಂದು ತಂದಂತಹ ಬಾವುಟ ಆಗಸ್ಟ್ 16 ರಂದು ರಸ್ತೆ ಬದಿಯಲ್ಲೋ , ಹರಿವ ನೀರಲ್ಲೋ ಇರುತ್ತದೆ. ದೇಶ ಪ್ರೇಮ ಆಗಸ್ಟ್ 15 ಸಂಜೆಯಷ್ಟರಲ್ಲಿ ಮುಗಿದಿರುತ್ತದೆ.
ಬರಹ- ಹರ್ಷಿತಾ ಎಸ್. ಶಾಂತಿಮೂಲೆ

