ನವದೆಹಲಿ : ಭಾರತದ ಈಶಾನ್ಯ ಗಡಿ ಮೂಲಕ ನಡೆಯುತ್ತಿದ್ದ ಬೃಹತ್ ಅಂತಾರಾಷ್ಟ್ರೀಯ ಅಡಿಕೆ ಕಳ್ಳಸಾಗಣೆ ಹಾಗೂ ಅಕ್ರಮ ಹಣ ವರ್ಗಾವಣೆ ಜಾಲವನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಬೇಧಿಸಿದ್ದು, ಸುಮಾರು ₹1,500 ಕೋಟಿ ಮೌಲ್ಯದ ಅಕ್ರಮ ವ್ಯವಹಾರ ಬೆಳಕಿಗೆ ಬಂದಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಮ್ಯಾನ್ಮಾರ್ನಿಂದ ವಿದೇಶಿ ಮೂಲದ ಅಡಿಕೆಯನ್ನು ಅಕ್ರಮವಾಗಿ ಭಾರತಕ್ಕೆ ಸಾಗಿಸಿ, ದೇಶದ ವಿವಿಧ ಭಾಗಗಳಿಗೆ ವಿತರಿಸಲಾಗುತ್ತಿತ್ತು. ಈ ಕಳ್ಳಸಾಗಣೆ ಜಾಲದ ಮೂಲಕ ಭಾರಿ ಪ್ರಮಾಣದ ಅಕ್ರಮ ಹಣಕಾಸು ವ್ಯವಹಾರವೂ ನಡೆದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಜುಲೈ 3ರಂದು ಇ.ಡಿ. ಅಧಿಕಾರಿಗಳು ನಾಲ್ಕು ರಾಜ್ಯಗಳ 20 ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು. ದಾಳಿಯ ವೇಳೆ ₹1.30 ಕೋಟಿ ನಗದು ವಶಪಡಿಸಿಕೊಳ್ಳಲಾಗಿದ್ದು, ಜಾಲಕ್ಕೆ ಸಂಬಂಧಿಸಿದ 33 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಹಲವು ಮಹತ್ವದ ದಾಖಲೆಗಳು, ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಮಾಹಿತಿ ಹಾಗೂ ಡಿಜಿಟಲ್ ಸಾಕ್ಷ್ಯಗಳು ಲಭ್ಯವಾಗಿದ್ದು, ಜಾಲದಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳು ಮತ್ತು ಸಂಸ್ಥೆಗಳ ಪಾತ್ರದ ಬಗ್ಗೆಯೂ ತನಿಖೆ ಮುಂದುವರಿದಿದೆ.

