ದಾವಣಗೆರೆ: ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ 2024-25ನೇ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕನ್ನಡದಲ್ಲಿ ಅತೀ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ವಿವಿಧ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಜು. 19ರಂದು ಬೆಳಿಗ್ಗೆ 10 ಗಂಟೆಗೆ ನಗರದ ಹದಡಿ ರಸ್ತೆಯಲ್ಲಿರುವ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದ ಬೃಹತ್ ವೇದಿಕೆಯಲ್ಲಿ ನಡೆಯುವ ಈ ಸಮಾರಂಭದ ಉದ್ಘಾಟನೆಯನ್ನು ಕಂಠದಾನ ಕಲಾವಿದರೂ, ಬೆಂಗಳೂರಿನ ದೂರದರ್ಶನ ಕೇಂದ್ರದ ನಿರೂಪಕರಾದ ರಾಜಶೇಖರ ಹೆಚ್. ನೆರವೇರಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಕೆ.ಎಚ್.ಮಂಜುನಾಥ್ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೈಸೂರಿನ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾಧ್ಯಕ್ಷರೂ ಸಾಮಾಜಿಕ ಕನ್ನಡ ಸೇವಾಕರ್ತರಾದ ಡಾ. ನಾಗರಾಜ್ ಬೈರಿಯವರು ಆಗಮಿಸಲಿದ್ದಾರೆ. ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಶ್ರೀಮತಿ ಜ್ಯೋತಿ ಗಣೇಶ್ಶೆಣೈ, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿಯವರು ವೇದಿಕೆಯಲ್ಲಿ ಗೌರವ ಉಪಸ್ಥಿತರಿರುತ್ತಾರೆ.
ಜು. 20ರಂದು ನಡೆಯುವ ಸಮಾರಂಭದ ಉದ್ಘಾಟನೆಯನ್ನು ಅಂತರಾಷ್ಟ್ರೀಯ ಖ್ಯಾತ ಗಾಯಕರಾದ ಬೆಂಗಳೂರಿನ ಪುತ್ತೂರು ನರಸಿಂಹನಾಯಕ್ ನೆರವೇರಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಕಲಾಕುಂಚ, ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಬಿ.ವಾಮದೇವಪ್ಪ, ಮೋತಿ ಗೌರಮ್ಮ ಮೋತಿ ಪಿ.ರಾಮರಾವ್ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾದ ಮೋತಿ ಪರಮೇಶ್ವರ ರಾವ್, ಕಲಾಕುಂಚದ ಸಂಸ್ಥೆಯ ಅಧ್ಯಕ್ಷರಾದ ಕೆ.ಎಚ್.ಮಂಜುನಾಥ್ ಆಗಮಿಸಲಿದ್ದಾರೆ. ಕಲಾಕುಂಚ ಮಹಿಳಾ ವಿಭಾಗದ ಗೌರವ ಅಧ್ಯಕ್ಷರಾದ ವಸಂತಿ ಮಂಜುನಾಥ್, ಉಡುಪಿ ಜಿಲ್ಲೆಯ ಉದ್ಯಾವರದ ರಾಷ್ಟç, ಅಂತರಾಷ್ಟ್ರೀಯ ಖ್ಯಾತ ಬಾಲ ನೃತ್ಯ ಕಲಾವಿದೆ ಕುಮಾರಿ ಶ್ರೇಷ್ಠ ರಾಮಚಂದ್ರ ದೇವಾಡಿಗ ವೇದಿಕೆಯಲ್ಲಿ ಗೌರವ ಉಪಸ್ಥಿತರಿರುತ್ತಾರೆ.
ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕನ್ನಡ ಮಕ್ಕಳಿಗೆ, ಎರಡೂ ದಿನ ಬೆಳಿಗ್ಗೆ ಮಂಗಳ ವಾದ್ಯದೊಂದಿಗೆ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡು,, ಮಕ್ಕಳ ತಂದೆ ತಾಯಿಗಳೊಂದಿಗೆ ಕನ್ನಡ ತಿಲಕವಿಟ್ಟು, ಕನ್ನಡ ಕಂಕಣ ಕಟ್ಟಿ, ಕನ್ನಡಾರತಿ ಬೆಳಗಿ, “ಕನ್ನಡ ಕುವರ-ಕುವರಿ’, “ಕನ್ನಡ ಕೌಸ್ತುಭ” “ಸರಸ್ವತಿ ಪುರಸ್ಕಾರ’’, ಪ್ರಶಸ್ತಿಗಳನ್ನು ವೇದಿಕೆಯ ಪ್ರತ್ಯೇಕ ಮದುವೆ ಮಂಟಪದ ಸಿಂಹಾಸನದಲ್ಲಿ ಕೂರಿಸಿ ಮಕ್ಕಳ ತಲೆಯ ಮೇಲೆ ಕೀರಿಟವಿಟ್ಟು, ಪುಷ್ಪವೃಷ್ಟಿಯೊಂದಿಗೆ, ಕನ್ನಡ ತಾಯಿ ಭುವನೇಶ್ವರಿಯ ಸ್ಮರಣಿಕೆ, ಚಿನ್ನದ ಲೇಪನದ ಪದಕ, ಅವರದ್ದೇ ಭಾವಚಿತ್ರವಿರುವ ಅವರ ತಂದೆ-ತಾಯಿ ಹೆಸರು, ವ್ಯಾಸಂಗ ಮಾಡಿದ ವಿದ್ಯಾಸಂಸ್ಥೆಯ ಹೆಸರಿನೊಂದಿಗೆ ಸನ್ಮಾನ ಪತ್ರ ವಿತರಿಸಿ, ಗಣ್ಯಮಾನ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಗುವುದು, ಸರ್ವ ಕನ್ನಡ ಮನಸ್ಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಎರಡು ದಿನಗಳ ಕಾಲ ವೈಭವಪೂರ್ಣ ವಿಜೃಂಭಣೆಯ ಕನ್ನಡ ಮಕ್ಕಳ ಸಮಾರಂಭ ಯಶಸ್ವಿಗೊಳಿಸಬೇಕಾಗಿ ಕಲಾಕುಂಚದ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವಿನಂತಿಸಿದ್ದಾರೆ.

