ಯಕ್ಷ ಶಿಕ್ಷಣ ಟ್ರಸ್ಟ್, ಸಿದ್ದಾಪುರದ ಪ್ರದರ್ಶನ ಸಂಘಟನಾ ಸಮಿತಿಯ ಸಹಯೋಗದಲ್ಲಿ ಆಯೋಜಿಸಿದ್ದ ನಾಲ್ಕು ಶಾಲೆಗಳ ಪ್ರದರ್ಶನ ಸಮಾಪನಗೊಂಡಿತು. ಅಧ್ಯಕ್ಷತೆ ವಹಿಸಿದ್ದ ಶಾಸಕ ಗುರುರಾಜ ಗಂಟಿಹೊಳೆಯವರು ಯಕ್ಷಗಾನ ಕಲಾರಂಗದ ಕಾರ್ಯಕ್ರಮ ಶಿಸ್ತುಬದ್ಧವಾಗಿರುತ್ತದೆ. ಸಮಯಕ್ಕೆ ಅವರು ಕೊಡುವ ಮಹತ್ವದಿಂದ ಅದಕ್ಕೊಂದು ಅನನ್ಯತೆಯಿದೆ. ಅವರಿಗಿರುವ ಸಾಮಾಜಿಕ ಮತ್ತು ಕಲಾ ಕಾಳಜಿ, ಕಾರ್ಯಕ್ರಮದ ಅಗಾಧ ವ್ಯಾಪ್ತಿ ಗಮನಿಸಿದರೆ ದೇಶದಲ್ಲೇ ಇಂತಹ ಇನ್ನೊಂದು ಸಂಸ್ಥೆ ಇರಲಿಕ್ಕಿಲ್ಲ ಎಂದು ಹೇಳಿದರು. ಸಮಾರೋಪ ಭಾಷಣ ಮಾಡಿದ ಡಾ. ಜಗದೀಶ ಶೆಟ್ಟಿಯವರು ಶಾಲೆಗಳಲ್ಲಿ ಯಕ್ಷಶಿಕ್ಷಣ ನೀಡುವುದರಿಂದ ಸುಶಿಕ್ಷಿತರು ಈ ಕಲೆಯನ್ನು ಮುಂದೆ ಕೊಂಡೊಯ್ಯಲು ಸಾಧ್ಯವಾಗುತ್ತದೆ ಎಂದರು.
ಎಂ.ಗಂಗಾಧರ ರಾವ್, ಬಾಲಚಂದ್ರ ಭಟ್, ಕೃಷ್ಣ ಪೂಜಾರಿ, ಕೃಷ್ಣರಾಜ ತಂತ್ರಿ, ಶ್ರೀಕಾಂತ ನಾಯಕ್ ಅಭ್ಯಾಗತರಾಗಿ ಭಾಗವಹಿಸಿದ್ದರು. ಚಂದ್ರ ಕುಲಾಲ, ಗೋಪಾಲ ಕಾಂಚನ್, ಪ್ರದೀಪ ಕುಮಾರ್ ಹೆಗ್ಡೆ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅಶ್ವಿನಿ, ಆಕಾಂಕ್ಷ್, ಸೌರಭ ಮಯ್ಯ, ರಶ್ಮಿತಾ, ಸಾಕ್ಷಿ ಶೆಟ್ಟಿ ತಮ್ಮ ಯಕ್ಷಶಿಕ್ಷಣದ ಅನುಭವ ಹಂಚಿಕೊಂಡರು. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಯಕ್ಷಗಾನ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಗೊಂಡ ಮುರಲಿ ಕಡೆಕಾರರನ್ನು ಪ್ರದರ್ಶನ ಸಂಘಟನಾ ಸಮಿತಿಯ ವತಿಯಿಂದ ಅಭಿನಂದಿಸಲಾಯಿತು. ಬಾಲಕೃಷ್ಣ ಮಂಜ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಎಂ.ಹೆಗಡೆ ವಂದಿಸಿದರು. ಸಿದ್ದಾಪುರ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ‘ಶಶಿಪ್ರಭಾ ಪರಿಣಯ’, ಶಂಕರನಾರಾಯಣ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ‘ಮಾಯಾಪುರಿ ಮಹಾತ್ಮ್ಯೆ’ ಪ್ರಸಂಗಳು ಪ್ರದರ್ಶನ ಗೊಂಡವು.

