ಫ್ರೀಜರ್‌ನಲ್ಲಿ ವ್ಯಕ್ತಿಯ ಶವ ಪತ್ತೆ; ಮತ್ತೊಂದು ತ್ರಿಕೋನ ಪ್ರೇಮ ಕಥೆ ದುರಂತದಲ್ಲಿ ಅಂತ್ಯ

0
497

ಮೇಘಾಲಯದ ಹನಿಮೂನ್ ಹತ್ಯೆ ನಂತರ ತ್ರಿಪುರಾದಲ್ಲಿ 28 ವರ್ಷದ ಯುವಕನ ಶವ ಐಸ್‌ಕ್ರೀಂ ಫ್ರೀಜರ್‌ನೊಳಗಿನ ಟ್ರಾಲಿ ಬ್ಯಾಗ್‌ನಲ್ಲಿ ಪತ್ತೆಯಾಗಿದೆ. ಈ ಘಟನೆ ದೇಶಾದ್ಯಂತ ಆಘಾತವನ್ನುಂಟು ಮಾಡಿದೆ.
ಮೃತ ಯುವಕನನ್ನು ತ್ರಿಪುರಾ ಅಗರ್ತಲಾದ ಇಂದ್ರನಗರದ ನಿವಾಸಿ ಮತ್ತು ಅಗರ್ತಲಾ ಸ್ಮಾರ್ಟ್ ಸಿಟಿ ಮಿಷನ್‌ನ ಎಲೆಕ್ಟ್ರಿಷಿಯನ್ ಸರಿಫುಲ್ ಇಸ್ಲಾಂ ಎಂದು ಗುರುತಿಸಲಾಗಿದೆ. ಅಗರ್ತಲಾದಿಂದ 120 ಕಿ.ಮೀ. ದೂರದಲ್ಲಿರುವ ಧಲಾಯಿ ಜಿಲ್ಲೆಯ ಗಂಡಾಚೆರ್ರಾ ಮಾರುಕಟ್ಟೆಯಲ್ಲಿ ಶವ ಪತ್ತೆಯಾಗಿದೆ. ಸರಿಫುಲ್ ಕಾಣೆಯಾಗಿದ್ದ ಪ್ರಕರಣವನ್ನು ತನಿಖೆ ಮಾಡುತ್ತಿದ್ದ ಪೊಲೀಸರು ಕೊಲೆಯ ನಂತರ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಪೊಲೀಸರು ತ್ರಿಕೋನ ಪ್ರೇಮವನ್ನು ಕೊಲೆಗೆ ಕಾರಣವೆಂದು ಶಂಕಿಸಿದ್ದಾರೆ. ಮುಖ್ಯ ಆರೋಪಿ ಡಾ. ದಿಬಾಕರ್ ಸಾಹಾ (28) ಮತ್ತು ಸರಿಫುಲ್ ಒಬ್ಬ ಮಹಿಳೆಯೊಂದಿಗಿನ ಸಂಬಂಧ ಹೊಂದಿದ್ದರು. ಈ ಕಾರಣಕ್ಕೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮಹಿಳೆ ದಿಬಾಕರ್‌ನ ಸೋದರ ಸಂಬಂಧಿ ಎಂದು ತಿಳಿದುಬಂದಿದೆ.

ಪ್ರಕರಣದಲ್ಲಿ ಪೊಲೀಸರು 6 ಜನರನ್ನು ಬಂಧಿಸಿದ್ದಾರೆ. ಇದರಲ್ಲಿ ಮಹಿಳೆ, ದಿಬಾಕರ್, ಆತನ ತಂದೆ-ತಾಯಿ ದೀಪಕ್ ಮತ್ತು ದೇಬಿಕಾ ಸಾಹಾ ಸೇರಿದ್ದಾರೆ. ದಿಬಾಕರ್ ಜೂನ್ 8ರ ಸಂಜೆ ಸರಿಫುಲ್‌ನನ್ನು ಜಾಯ್‌ದೀಪ್ ದಾಸ್ (20) ಎಂಬಾತನ ಮನೆಗೆ ಉಡುಗೊರೆ ನೀಡುವ ನೆವದಲ್ಲಿ ಕರೆದಿದ್ದ. ಅಲ್ಲಿ ದಿಬಾಕರ್, ಆತನ ಸಹಚರರಾದ ಅನಿಮೇಶ್ ಯಾದವ್ (21) ಮತ್ತು ನಬನಿತಾ ದಾಸ್ (25) ಸರಿಫುಲ್‌ನನ್ನು ಕತ್ತು ಹಿಸುಕಿ ಕೊಂದು, ಶವವನ್ನು ಎರಡು ದಿನಗಳ ಹಿಂದೆ ಖರೀದಿಸಿದ್ದ ಟ್ರಾಲಿ ಬ್ಯಾಗ್‌ನಲ್ಲಿ ಇರಿಸಿದ್ದರು.
ಮರುದಿನ ಬೆಳಗ್ಗೆ, ದಿಬಾಕರ್‌ನ ತಂದೆ-ತಾಯಿ ಶವ ಇದ್ದ ಟ್ರಾಲಿ ಬ್ಯಾಗ್‌ನೊಂದಿಗೆ ಗಂಡಾಚೆರ್ರಾ ಮಾರುಕಟ್ಟೆಯ ತಮ್ಮ ಅಂಗಡಿಯ ಐಸ್‌ಕ್ರೀಂ ಫ್ರೀಜರ್‌ಗೆ ತೆಗೆದುಕೊಂಡು ಹೋಗಿದ್ದರು. ಎರಡು ದಿನಗಳ ತೀವ್ರ ಶೋಧದ ನಂತರ, ಮಂಗಳವಾರ ರಾತ್ರಿ ಆರು ಆರೋಪಿಗಳನ್ನು ಬಂಧಿಸಲಾಯಿತು. ಜೂ. 11ರ ಮಧ್ಯಾಹ್ನ ಶವ ಪತ್ತೆಯಾಗಿತ್ತು.

ಆರೋಪಿಗಳನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪೊಲೀಸರು ಮೊಬೈಲ್ ಸಂದೇಶ, ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದು, ಕೊಲೆಯ ಹಿಂದಿನ ಉದ್ದೇಶ ತ್ರಿಕೋನ ಪ್ರೇಮಕ್ಕೆ ಸಂಬಂಧಿಸಿದೆ ಎಂದು ದೃಢಪಡಿಸಿದ್ದಾರೆ.

LEAVE A REPLY

Please enter your comment!
Please enter your name here