ಉಡುಪಿ : ವಿದ್ಯಾರ್ಥಿಗಳು ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕು. ಸಂಸ್ಕರಣೆಗೆ ಒಳಗಾದ ಹಾಲು ತುಪ್ಪವಾಗಿ ದೀರ್ಘ ಕಾಲ ಬಾಳಿಕೆ ಬರುವಂತೆ ಸಂಸ್ಕಾರಯುತ ಜೀವನ ಶ್ರೇಷ್ಠವಾಗಿದೆ. ಇದರಿಂದ ಸಮಾಜಕ್ಕೆ ಉತ್ತಮ ಆಸ್ತಿಯಾಗಬಹುದು. ಕಾಲೇಜಿನಲ್ಲಿ ಒಳ್ಳೆಯ ಜ್ಞಾನ, ಸಂಸ್ಕಾರ ಪಡೆದು ದೇಶ ಕಟ್ಟಲು ಶ್ರಮಿಸಬೇಕು ಎಂದು ಅದಮಾರು ಮಠ ಎಜುಕೇಶನ್ ಕೌನ್ಸಿಲ್ ಅಧ್ಯಕ್ಷ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ನುಡಿದರು.
ಮಂಗಳವಾರ ಪೂರ್ಣಪ್ರಜ್ಞ ಕಾಲೇಜು (ಸ್ವಾಯತ್ತ) ಆಯೋಜಿಸಿದ್ದ ಅಂತರ ಕಾಲೇಜು ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಉತ್ಸವ ಪ್ರಜ್ಞಾ&2026 ಸಮಾರೋಪ ಸಮಾರಂಭದಲ್ಲಿ ಅಶೀರ್ವಚನ ನೀಡಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪೂರ್ಣ ಪ್ರಜ್ಞ ಶಿಕ್ಷಣ ಸಂಸ್ಥೆ ಮೌಲ್ಯಯುತ ಶಿಕ್ಷಣದ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ತರಬೇತಿ ನೀಡುತ್ತಿದೆ. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳಲು ಇಂತಹ ಸ್ಪರ್ಧೆಗಳು ಉತ್ತಮ ವೇದಿಕೆ ಎಂದು ಅಭಿಪ್ರಾಯಪಟ್ಟರು.
ಕೆನರಾ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿಯ ಉಪ ಪ್ರಧಾನ ವ್ಯವಸ್ಥಾಪಕ ಮಹಾಮಾಯ ಪ್ರಸಾದ್ ರಾಯ್ ಮಾತನಾಡಿದರು. ಪ್ರಾಂಶುಪಾಲ ಡಾ. ರಾಮು. ಎಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಎರಡು ದಿನಗಳಲ್ಲಿ 33 ಶೈಕ್ಷಣಿಕ ಹಾಗೂ 6 ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ರಾಜ್ಯದ ಸುಮಾರು 29 ಕಾಲೇಜುಗಳಿಂದ 562 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ ಎಂದರು.
ಎಸ್. ಬಿ. ಐ. ರೀಜನಲ್ ಆಫೀಸ್ ಮುಖ್ಯ ವ್ಯವಸ್ಥಾಪಕ ಕೃಷ್ಣ್ಣರಾಜ ಭಟ್ ಕೀಳಿಂಜೆ, ಪೂರ್ಣ ಪ್ರಜ್ಞ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುರೇಶ್ ತುಂಗ, ಕಾಲೇಜು ಆಂತರಿಕ ಗುಣಮಟ್ಟ ಖಾತರಿ ಘಟಕದ ಸಹ ಸಂಯೋಜಕ ಡಾ. ಲಕ್ಷ್ಮೀಶ ರಾವ್ , ಡಾ. ಆನಂದ ರಾಯಮಾನೆ, ಡಾ. ಮಂಜುನಾಥ ಕರಬ, ಡಾ. ಸಂದೀಪ್ ಸತ್ಯಮೂರ್ತಿ, ಧನ್ಯಶ್ರೀ, ಸುಮಲತಾ ಪಿ. ಜೆ, ಡಾ. ಶಿವಕುಮಾರ್ ಅಳಗೋಡು, ವಿದ್ಯಾರ್ಥಿ ಪ್ರತಿನಿಧಿಗಳಾದ ಭಾರ್ಗವ ಭಟ್, ಕೆ.ಪಿ ನೇಹಾ ಉಪಸ್ಥಿತರಿದ್ದರು. ಡಾ. ರಕ್ಷಾ ಪೂಜಾರಿ ಕಾರ್ಯಕ್ರಮ ನಿರೂಪಿಸಿ, ಪ್ರತಿಭಾ ಸಿ. ಆಚಾರ್ಯ ಸ್ವಾಗತಿಸಿ, ಡಾ. ಸೌಮ್ಯ ಶೆಟ್ಟಿ ವಂದಿಸಿದರು.
ಕುಂದಾಪುರ ಡಾ.ಬಿ.ಬಿ. ಹೆಗಡೆ ಕಾಲೇಜು ಪ್ರಥಮ ಸಮಗ್ರ ಪ್ರಶಸ್ತಿ ಜೊತೆಗೆ10,000 ನಗದು ಪುರಸ್ಕಾರ ಪಡೆಯಿತು. ಎಂಜಿಎಂ ಕಾಲೇಜು ದ್ವೀತಿಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು.

